ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಇದೇ ಶನಿವಾರ ಗುವಾಹಟಿಯಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಈಗಾಗಲೇ ಗುವಾಹಟಿ ತಲುಪಿದೆ. ಆದರೆ ತಂಡಕ್ಕೆ ಈಗ ಹೊಸ ಟೆನ್ಷನ್ ಆರಂಭವಾಗಿದೆ. ಮೈದಾನಕ್ಕೆ ಇಳಿಯುವ ಮುನ್ನವೇ ಸ್ಟಾರ್ ಆಟಗಾರನ ಅನುಪಸ್ಥಿತಿ ತಂಡವನ್ನು ಬಹುವಾಗಿ ಕಾಡುತ್ತಿದೆ. ಗಾಯಕ್ಕೆ ತುತ್ತಾಗಿರ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಎರಡನೇ ಟೆಸ್ಟ್ನಿಂದ ಹೊರ ನಡೆದಿದ್ದಾರೆ.
ಕೋಲ್ಕತ್ತದ ಈಡನ್ ಗಾರ್ಡನ್ ಅಂಗಳದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಶುಭಮನ್ ಗಿಲ್ ಬ್ಯಾಟಿಂಗ್ ಮಾಡುವಾಗ ಕತ್ತು ನೋವಿಗೆ ಗುರಿಯಾದರು. ಬಳಿಕ ಅವರನ್ನು ಸಹಾಯಕ ಸಿಬ್ಬಂದಿಗಳು ಬಂದು ಮೈದಾನದಿಂದ ಹೊರಗಡೆ ಕರೆದುಕೊಂಡು ಹೋಗಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಸಹ ಮಾಡಲಿಲ್ಲ. ಈಗ ಗಿಲ್ ಎರಡನೇ ಟೆಸ್ಟ್ಗೆ ಅಲಭ್ಯರಾಗಲಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ.

ಕೋಲ್ಕತ್ತದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 30 ರನ್ ಸೋಲು ಕಂಡಿದ್ದು, ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಭಾರತ ಈ ಪಂದ್ಯವನ್ನು ಗೆದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸುವ ಕನಸಿನಲ್ಲಿದೆ. ಈ ವೇಳೆ ತಂಡದ ನಾಯಕ ಎರಡನೇ ಟೆಸ್ಟ್ನಿಂದ ಹೊರ ನಡೆದಿರುವುದು ನಿಜಕ್ಕೂ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಇವರ ಸ್ಥಾನವನ್ನು 24 ವರ್ಷದ ಯುವ ಆಟಗಾರ ಸಾಯಿ ಸುದರ್ಶನ್ ತುಂಬುವ ಸಾಧ್ಯತೆ ದಟ್ಟವಾಗಿದೆ.
ಸಾಯಿ ಸುದರ್ಶನ್ ಈಗಾಗಲೇ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದಾರೆ. ಇವರು ಈಗಾಗಲೇ ಭಾರತದ ಪರ 5 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 30.33ರ ಸರಾಸರಿಯಲ್ಲಿ 273 ರನ್ ಕಲೆ ಹಾಕಿದ್ದಾರೆ. ಸುದರ್ಶನ್ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯಲ್ಲೂ ಭಾರತ ತಂಡದ ಭಾಗವಾಗಿದ್ದರು. ವಿಂಡೀಸ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಸುದರ್ಶನ್ 39, 87 ರನ್ ಬಾರಿಸಿ ತಂಡಕ್ಕೆ ಆಧಾರವಾಗಿದ್ದರು. ಆದರೆ ಇವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.

ಗಿಲ್ ತಮ್ಮ ಗಾಯದಿಂದ ಚೇತರಿಸಿಕೊಳ್ಳಲು ಸುಮಾರು 10 ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿದು ಬಂದಿದೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ನಡೆಯಲಿರುವ, ಏಕದಿನ ಸರಣಿಗೂ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಆ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಇವರು ತಂಡಕ್ಕೆ ಮರಳಬಹುದಾಗಿದೆ. ಶುಭಮನ್ ಗಿಲ್ ಅನುಪಸ್ಥಿಯಲ್ಲಿ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ವೇಳೆ ತಂಡದ ಉಪನಾಯಕ ರಿಷಭ್ ಪಂತ್ ಅವರೇ ತಂಡವನ್ನು ಮುನ್ನಡೆಸಬಹುದು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.