
ಬಿಸಿಸಿಐ ಗುರುವಾರ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಗಳನ್ನಾಡಲು 20 ಆಟಗಾರರ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ ನೇತೃತ್ವದ 20 ಆಟಗಾರರ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಕಾರಣ ಮತ್ತೊಂದು ಪ್ರತ್ಯೇಕ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಬಿಸಿಸಿಐ ಪ್ರಕಟಿಸಿದ್ದು ಈ ತಂಡಕ್ಕೆ ಶಿಖರ್ ಧವನ್ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.
ಜುಲೈ 13, 16 ಹಾಗೂ 18ರಂದು 3 ಏಕದಿನ ಪಂದ್ಯಗಳು ಮತ್ತು ಜುಲೈ 21, 23 ಹಾಗೂ 25ರಂದು 3 ಟಿ ಟ್ವೆಂಟಿ ಪಂದ್ಯಗಳು ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ನಡೆಯಲಿವೆ. ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾದ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆಯಾಗಿದ್ದು ಗೆಲ್ಲುವ ಉತ್ಸಾಹವನ್ನು ಶಿಖರ್ ಧವನ್ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕನ್ನಡಿಗ ಮನೀಷ್ ಪಾಂಡೆಯ ತರಬೇತುದಾರ ಇರ್ಫಾನ್ ಸೇಠ್ ಮಾತನಾಡಿದ್ದು ಮನೀಷ್ ಪಾಂಡೆಗೆ ಸರಿಯಾದ ಅವಕಾಶಗಳನ್ನು ನೀಡಬೇಕು ಎಂದಿದ್ದಾರೆ. 2014ರಲ್ಲಿ ಭಾರತದ ಅಂತಾರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಂಡ ಮನೀಷ್ ಪಾಂಡೆ ಇಲ್ಲಿಯವರೆಗೂ ಸಹ ತಂಡದಲ್ಲಿ ಖಾಯಂ ಸ್ಥಾನವನ್ನು ಪಡೆದುಕೊಳ್ಳದೆ ತಂಡದಿಂದ ಹೊರಗಿದ್ದದ್ದೇ ಹೆಚ್ಚು. ಹೀಗಾಗಿ ಮನೀಷ್ ಪಾಂಡೆ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರುವುದರ ಕುರಿತು ಮಾತನಾಡಿರುವ ಇರ್ಫಾನ್ ಸೇಠ್ 'ಮನೀಷ್ ಪಾಂಡೆ ಓರ್ವ ಅತ್ಯುತ್ತಮ ಹೋರಾಟದ ಛಲವಿರುವ ಆಟಗಾರ. ಆತ ಸವಾಲು ಹೆಚ್ಚಾದಷ್ಟೂ ಉತ್ತಮ ಪ್ರದರ್ಶನವನ್ನು ನೀಡುತ್ತಾನೆ. ಶ್ರೀಲಂಕಾ ಪ್ರವಾಸದಲ್ಲಿ ಆತನಿಗೆ ಸರಿಯಾದ ಅವಕಾಶಗಳನ್ನು ನೀಡಿದರೆ ಆತ ಉತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಮುಂಬರುವ ಸರಣಿಗಳಲ್ಲಿಯೂ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಆಟವನ್ನು ಆಡಬಲ್ಲ' ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.