ಆರ್ಸಿಬಿ ಪರ ಕೆಟ್ಟ ಪ್ರದರ್ಶನ: ನಿಮ್ಮಪ್ಪನ ಜೊತೆ ಆಟೋ ಓಡಿಸು ಎಂದಿದ್ರು, ಸಹಾಯ ಮಾಡಿದ್ದು ಧೋನಿ: ಸಿರಾಜ್

ಸದ್ಯ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಾಟ ನಡೆಸುತ್ತಿರುವ ಏಕದಿನ ಸರಣಿಯಲ್ಲಿ ಅವಕಾಶವನ್ನು ಪಡೆದುಕೊಂಡಿರುವ ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾದ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಟೆಸ್ಟ್, ಟಿ ಟ್ವೆಂಟಿ ಹಾಗೂ ಏಕದಿನ ಹೀಗೆ ಎಲ್ಲಾ ಮಾದರಿಯ ತಂಡಗಳಲ್ಲಿಯೂ ಅವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿರುವ ಮೊಹಮ್ಮದ್ ಸಿರಾಜ್ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ.
ಹೌದು, ಮೊಹಮ್ಮದ್ ಸಿರಾಜ್ ಅವರಿಗೆ ಪದೇಪದೆ ಅವಕಾಶಗಳನ್ನು ಕೊಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹಾಗೂ ವಿರಾಟ್ ಕೊಹ್ಲಿಗೆ ಈಗಾಗಲೇ ಹಲವು ಬಾರಿ ಸ್ವತಃ ಸಿರಾಜ್ ಧನ್ಯವಾದಗಳನ್ನು ತಿಳಿಸಿದ್ದಾರೆ. ಹೀಗೆ ತನ್ನ ಮೇಲೆ ಇಟ್ಟ ನಂಬಿಕೆಯನ್ನು ಹುಸಿಗೊಳಿಸದ ಸಿರಾಜ್ ಸದ್ಯ ಪ್ರತಿಭಾನ್ವಿತ ಬೌಲರ್ ಆಗಿ ಮಿಂಚುತ್ತಿದ್ದಾರೆ. ಹೀಗೆ ಯಾವಾಗಲೂ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿನ ತನ್ನ ಆರಂಭದ ದಿನಗಳನ್ನು ಮೆಲುಕು ಹಾಕುವ ಮೊಹಮ್ಮದ್ ಸಿರಾಜ್ ಆ ಸಂದರ್ಭದಲ್ಲಿ ತಾನು ಎದುರಿಸಿದ್ದ ಅವಮಾನದ ಕುರಿತು ಕೂಡ ಇದೀಗ ಮಾಹಿತಿ ಹಂಚಿಕೊಂಡಿದ್ದಾರೆ. ಹೌದು, 2019ರಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ 2.2 ಓವರ್ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಸಿರಾಜ್ ಯಾವುದೇ ವಿಕೆಟ್ ಪಡೆಯದೇ 36 ರನ್ ನೀಡಿ ತೀರಾ ಕಳಪೆ ಪ್ರದರ್ಶನ ನೀಡಿದ್ದರು.
ಮೊಹಮ್ಮದ್ ಸಿರಾಜ್ ನೀಡಿದ ಈ ಕಳಪೆ ಪ್ರದರ್ಶನದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದ್ದ 206 ರನ್ಗಳ ಗುರಿಯನ್ನು 19.1 ಓವರ್ಗಳಲ್ಲಿಯೇ ಮುಟ್ಟಿ ಜಯವನ್ನು ಸಾಧಿಸಿತ್ತು. ಹೀಗೆ ಆ ಆವೃತ್ತಿಯ ಈ ಪಂದ್ಯದಲ್ಲಿ ಕಳಪೆಯಾಗುವುದು ಮಾತ್ರವಲ್ಲದೇ ಟೂರ್ನಿಯುದ್ದಕ್ಕೂ ಕೂಡ ಮೊಹಮ್ಮದ್ ಸಿರಾಜ್ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ. ಹೀಗೆ ತಾನು ಕಳಪೆ ಪ್ರದರ್ಶನ ನೀಡಿದ್ದ ಈ ಪಂದ್ಯದ ಕುರಿತು ವಿಶೇಷವಾಗಿ ಮಾತನಾಡಿಸುವ ಮೊಹಮ್ಮದ್ ಸಿರಾಜ್ ಆ ಸಂದರ್ಭದಲ್ಲಿ ತಾನು ಎದುರಿಸಿದ ನಿಂದನೆ ಹಾಗೂ ಎಂಎಸ್ ಧೋನಿ ಹೇಳಿದ್ದ ಮಾತು ಯಾವ ರೀತಿ ಸಹಾಯ ಮಾಡಿತು ಎಂಬುದನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ಕೆಕೆಆರ್ ವಿರುದ್ಧದ ಆ ಕೆಟ್ಟ ಪ್ರದರ್ಶನದ ನಂತರ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೆ
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಕೆಟ್ಟ ಪ್ರದರ್ಶನ ನೀಡಿದ್ದ ಮೊಹಮ್ಮದ್ ಸಿರಾಜ್ ಆ ಪಂದ್ಯ ಮುಗಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ತೀರಾ ಕೆಟ್ಟ ರೀತಿಯ ಟೀಕೆಗಳು ಎದುರಾಗಿದ್ದವು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಕೆಲ ನೆಟ್ಟಿಗರು ನೀನು ಕ್ರಿಕೆಟ್ ಆಡಲು ಯೋಗ್ಯನಲ್ಲ ಹೋಗಿ ನಿನ್ನ ತಂದೆಯ ಜೊತೆ ಸೇರಿಕೊಂಡು ಆಟೋ ರಿಕ್ಷಾ ಓಡಿಸು ಎಂದೆಲ್ಲಾ ನಿಂದಿಸಿದ್ದರು ಹಾಗೂ ಇದನ್ನು ಕಂಡು ಸಾಕಷ್ಟು ಚಿಂತೆಗೊಳಗಾಗಿದ್ದೆ ಎಂದು ಮೊಹಮ್ಮದ್ ಸಿರಾಜ್ ಹೇಳಿಕೊಂಡಿದ್ದಾರೆ.

ಎಂಎಸ್ ಧೋನಿ ಹೇಳಿದ್ದ ಮಾತು ಸಹಾಯಕ್ಕೆ ಬಂತು
ಹೀಗೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಕಳಪೆ ಪ್ರದರ್ಶನಕ್ಕೆ ಸಾಕಷ್ಟು ಕೆಟ್ಟ ಟೀಕೆಗಳನ್ನು ಎದುರಿಸುತ್ತಿದ್ದ ಮೊಹಮ್ಮದ್ ಸಿರಾಜ್ ತನಗೆ ಎಂಎಸ್ ಧೋನಿ ನೀಡಿದ್ದ ಸಲಹೆ ಸಹಾಯಕ್ಕೆ ಬಂತು ಎಂಬ ವಿಷಯವನ್ನು ಕೂಡ ಹೇಳಿಕೊಂಡಿದ್ದಾರೆ. ಹೌದು, ಮೊಹಮ್ಮದ್ ಸಿರಾಜ್ ಅವರಿಗೆ ಆರಂಭದಲ್ಲಿಯೇ 'ನೀನು ಉತ್ತಮ ಪ್ರದರ್ಶನ ನೀಡಿದರೆ ಎಲ್ಲರೂ ಕೂಡ ನಿನಗೆ ಪ್ರಶಂಸೆಯ ಸುರಿಮಳೆ ಸುರಿಸುತ್ತಾರೆ, ಆದರೆ ಕಳಪೆ ಪ್ರದರ್ಶನ ನೀಡಿದರೆ ಅದೇ ಜನ ನಿನ್ನ ವಿರುದ್ಧ ಟೀಕಾಪ್ರಹಾರವನ್ನು ನಡೆಸುತ್ತಾರೆ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ. ಹೀಗಾಗಿ ನೀನು ಅವುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು' ಎಂದು ಎಂ ಎಸ್ ಧೋನಿ ಸಲಹೆ ನೀಡಿದ್ದರಂತೆ. ಹೀಗೆ ಎಂ ಎಸ್ ಧೋನಿ ಅವರ ಸಲಹೆಯಂತೆ ತಾನು ಆ ಟೀಕೆಗಳನ್ನೆಲ್ಲಾ ಬದಿಗೆ ಸರಿಸಿ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಿದೆ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.

ನನ್ನ ವೃತ್ತಿ ಜೀವನವೇ ಮುಗಿಯಿತು ಎಂದುಕೊಂಡಿದ್ದೆ
ಇನ್ನೂ ಮುಂದುವರಿದು ಮಾತನಾಡಿರುವ ಮೊಹಮ್ಮದ್ ಸಿರಾಜ್ 2019ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ತಾನು ನೀಡಿದ್ದ ಕೆಟ್ಟ ಪ್ರದರ್ಶನದಿಂದ ತನ್ನ ಕ್ರಿಕೆಟ್ ವೃತ್ತಿ ಜೀವನವೇ ಮುಗಿದು ಹೋಯಿತು ಎಂದುಕೊಂಡಿದ್ದರಂತೆ. ಆದರೆ ನಂತರ ಚಿಂತಿಸಿದ ಮೊಹಮ್ಮದ್ ಸಿರಾಜ್ ಇನ್ನೂ ತನಗೆ ಕ್ರಿಕೆಟ್ ಆಡುವ ವಯಸ್ಸಿದೆ ಎಂದು ಮನಸ್ಸು ಮಾಡಿ, ಹೆಚ್ಚಿನ ಗಮನ ಹರಿಸಿ ನಂತರ ನಡೆದ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ ಹಾಗೂ ಆ ಆವೃತ್ತಿಯಲ್ಲಿ ಅದೇ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯ ತನ್ನ ವೃತ್ತಿ ಜೀವನವನ್ನೇ ಬದಲಾಯಿಸಿತು ಎಂದಿದ್ದಾರೆ. ಹೌದು, ಮೊಹಮ್ಮದ್ ಸಿರಾಜ್ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 8 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದ್ದರು. ಹೀಗೆ ತಾನು ಕಮ್ ಬ್ಯಾಕ್ ಮಾಡಿದ ಕುರಿತು ಹೇಳಿಕೊಂಡಿರುವ ಮೊಹಮ್ಮದ್ ಸಿರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಕೂಡ ಇದೇ ವೇಳೆ ಕೃತಜ್ಞತೆ ಸಲ್ಲಿಸಿದ್ದಾರೆ. ಬೌಲರ್ ಓರ್ವ ಆ ರೀತಿ ಕೆಟ್ಟ ಪ್ರದರ್ಶನ ನೀಡಿದ ನಂತರ ಯಾವುದೇ ಫ್ರಾಂಚೈಸಿ ಕೂಡ ಅವಕಾಶ ನೀಡುತ್ತಿರಲಿಲ್ಲ, ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೇಲೆ ನಂಬಿಕೆ ಇಟ್ಟು ಮತ್ತೊಮ್ಮೆ ಅವಕಾಶ ನೀಡಿದ್ದರಿಂದ ತಾನು ಇಂದು ಈ ಸ್ಥಾನದಲ್ಲಿದ್ದೇನೆ ಎಂಬುದನ್ನು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications