
ಕೆಕೆಆರ್ ವಿರುದ್ಧದ ಆ ಕೆಟ್ಟ ಪ್ರದರ್ಶನದ ನಂತರ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೆ
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಕೆಟ್ಟ ಪ್ರದರ್ಶನ ನೀಡಿದ್ದ ಮೊಹಮ್ಮದ್ ಸಿರಾಜ್ ಆ ಪಂದ್ಯ ಮುಗಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ತೀರಾ ಕೆಟ್ಟ ರೀತಿಯ ಟೀಕೆಗಳು ಎದುರಾಗಿದ್ದವು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಕೆಲ ನೆಟ್ಟಿಗರು ನೀನು ಕ್ರಿಕೆಟ್ ಆಡಲು ಯೋಗ್ಯನಲ್ಲ ಹೋಗಿ ನಿನ್ನ ತಂದೆಯ ಜೊತೆ ಸೇರಿಕೊಂಡು ಆಟೋ ರಿಕ್ಷಾ ಓಡಿಸು ಎಂದೆಲ್ಲಾ ನಿಂದಿಸಿದ್ದರು ಹಾಗೂ ಇದನ್ನು ಕಂಡು ಸಾಕಷ್ಟು ಚಿಂತೆಗೊಳಗಾಗಿದ್ದೆ ಎಂದು ಮೊಹಮ್ಮದ್ ಸಿರಾಜ್ ಹೇಳಿಕೊಂಡಿದ್ದಾರೆ.

ಎಂಎಸ್ ಧೋನಿ ಹೇಳಿದ್ದ ಮಾತು ಸಹಾಯಕ್ಕೆ ಬಂತು
ಹೀಗೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಕಳಪೆ ಪ್ರದರ್ಶನಕ್ಕೆ ಸಾಕಷ್ಟು ಕೆಟ್ಟ ಟೀಕೆಗಳನ್ನು ಎದುರಿಸುತ್ತಿದ್ದ ಮೊಹಮ್ಮದ್ ಸಿರಾಜ್ ತನಗೆ ಎಂಎಸ್ ಧೋನಿ ನೀಡಿದ್ದ ಸಲಹೆ ಸಹಾಯಕ್ಕೆ ಬಂತು ಎಂಬ ವಿಷಯವನ್ನು ಕೂಡ ಹೇಳಿಕೊಂಡಿದ್ದಾರೆ. ಹೌದು, ಮೊಹಮ್ಮದ್ ಸಿರಾಜ್ ಅವರಿಗೆ ಆರಂಭದಲ್ಲಿಯೇ 'ನೀನು ಉತ್ತಮ ಪ್ರದರ್ಶನ ನೀಡಿದರೆ ಎಲ್ಲರೂ ಕೂಡ ನಿನಗೆ ಪ್ರಶಂಸೆಯ ಸುರಿಮಳೆ ಸುರಿಸುತ್ತಾರೆ, ಆದರೆ ಕಳಪೆ ಪ್ರದರ್ಶನ ನೀಡಿದರೆ ಅದೇ ಜನ ನಿನ್ನ ವಿರುದ್ಧ ಟೀಕಾಪ್ರಹಾರವನ್ನು ನಡೆಸುತ್ತಾರೆ ಹಾಗೂ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ. ಹೀಗಾಗಿ ನೀನು ಅವುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು' ಎಂದು ಎಂ ಎಸ್ ಧೋನಿ ಸಲಹೆ ನೀಡಿದ್ದರಂತೆ. ಹೀಗೆ ಎಂ ಎಸ್ ಧೋನಿ ಅವರ ಸಲಹೆಯಂತೆ ತಾನು ಆ ಟೀಕೆಗಳನ್ನೆಲ್ಲಾ ಬದಿಗೆ ಸರಿಸಿ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಿದೆ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.

ನನ್ನ ವೃತ್ತಿ ಜೀವನವೇ ಮುಗಿಯಿತು ಎಂದುಕೊಂಡಿದ್ದೆ
ಇನ್ನೂ ಮುಂದುವರಿದು ಮಾತನಾಡಿರುವ ಮೊಹಮ್ಮದ್ ಸಿರಾಜ್ 2019ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ತಾನು ನೀಡಿದ್ದ ಕೆಟ್ಟ ಪ್ರದರ್ಶನದಿಂದ ತನ್ನ ಕ್ರಿಕೆಟ್ ವೃತ್ತಿ ಜೀವನವೇ ಮುಗಿದು ಹೋಯಿತು ಎಂದುಕೊಂಡಿದ್ದರಂತೆ. ಆದರೆ ನಂತರ ಚಿಂತಿಸಿದ ಮೊಹಮ್ಮದ್ ಸಿರಾಜ್ ಇನ್ನೂ ತನಗೆ ಕ್ರಿಕೆಟ್ ಆಡುವ ವಯಸ್ಸಿದೆ ಎಂದು ಮನಸ್ಸು ಮಾಡಿ, ಹೆಚ್ಚಿನ ಗಮನ ಹರಿಸಿ ನಂತರ ನಡೆದ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ ಹಾಗೂ ಆ ಆವೃತ್ತಿಯಲ್ಲಿ ಅದೇ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯ ತನ್ನ ವೃತ್ತಿ ಜೀವನವನ್ನೇ ಬದಲಾಯಿಸಿತು ಎಂದಿದ್ದಾರೆ. ಹೌದು, ಮೊಹಮ್ಮದ್ ಸಿರಾಜ್ 2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 8 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದ್ದರು. ಹೀಗೆ ತಾನು ಕಮ್ ಬ್ಯಾಕ್ ಮಾಡಿದ ಕುರಿತು ಹೇಳಿಕೊಂಡಿರುವ ಮೊಹಮ್ಮದ್ ಸಿರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಕೂಡ ಇದೇ ವೇಳೆ ಕೃತಜ್ಞತೆ ಸಲ್ಲಿಸಿದ್ದಾರೆ. ಬೌಲರ್ ಓರ್ವ ಆ ರೀತಿ ಕೆಟ್ಟ ಪ್ರದರ್ಶನ ನೀಡಿದ ನಂತರ ಯಾವುದೇ ಫ್ರಾಂಚೈಸಿ ಕೂಡ ಅವಕಾಶ ನೀಡುತ್ತಿರಲಿಲ್ಲ, ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಮೇಲೆ ನಂಬಿಕೆ ಇಟ್ಟು ಮತ್ತೊಮ್ಮೆ ಅವಕಾಶ ನೀಡಿದ್ದರಿಂದ ತಾನು ಇಂದು ಈ ಸ್ಥಾನದಲ್ಲಿದ್ದೇನೆ ಎಂಬುದನ್ನು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.


Click it and Unblock the Notifications
