ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ನಿರಾಯಾಸವಾಗಿ ಗೆಲುವು ಸಾಧಿಸಿದೆ. ಈ ಸುಲಭ ಗೆಲುವಿಗೆ ಕಾರಣ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಅವರ ಮಾರಕ ಬೌಲಿಂಗ್. ಕೇವಲ 21 ರನ್ಗಳನ್ನು ನೀಡಿ 6 ವಿಕೆಟ್ ಕಬಳಿಸಿದ ಸಿರಾಜ್ ಒಂದೇ ಓವರ್ನಲ್ಲಿ ನಾಲ್ಕು ವಿಕೆಟ್ ಕಿತ್ತು ಲಂಕಾ ಪಡೆಗೆ ಮಹಾ ಆಘಾತ ನೀಡಿದರು. ಭಾರತದ ವೇಗಿಯ ಈ ಅಮೋಘ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಮೆಚಚುಗೆಯ ಸುರಿಮಳೆಯೇ ವ್ಯಕ್ತವಾಗುತ್ತಿದೆ.
ಆದರೆ ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಈ ವೇಗದ ಬೌಲರ್ ಮತ್ತೊಮ್ಮೆ ಹೃದಯ ಗೆಲ್ಲುವಂತಾ ಕೆಲಸ ಮಾಡಿದ್ದಾರೆ. ಈ ಪಂದ್ಯದಲ್ಲಿ ನೀಡಿದ ಪ್ರದರ್ಶನಕ್ಕೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡ ಮೊಹಮ್ಮದ್ ಸಿರಾಜ್ ಈ ಪ್ರಶಸ್ತಿಯ ಮೊತ್ತವನ್ನು ಕೊಲಂಬೋದ ಮೈದಾನದ ಸಿಬ್ಬಂದಿಗಳಿಗೆ ಅರ್ಪಿಸಿ ಹೃದಯವಂತಿಕೆ ಮೆರೆದಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಂದ್ಯಶ್ರೇಷ್ಠ ಬಹುಮಾನ ಸ್ವೀಕರಿಸಿದ ಮಾತನಾಡಿದ ಸಿರಾಜ್, "ನನ್ನ ಪ್ರಕಾರ ಮೈದಾನದ ಸಿಬ್ಬಂದಿಗಳಿಗೆ ಸಾಕಷ್ಟು ಶ್ರೇಯಸ್ಸು ನೀಡಬೇಕು. ಅವರ ಪರಿಶ್ರಮವಿಲ್ಲದೆ ಈ ಟೂರ್ನಮೆಂಟ್ ಪೂರ್ಣವಾಗುತ್ತಿರಲಿಲ್ಲ" ಎಂದು ಹೇಳಿದ್ದು ಅವರಿಗಾಗಿ ಪ್ರಶಸ್ತಿಯ ಮೊತ್ತವನ್ನು ನೀಡಲು ಬಯಸುವುದಾಗಿ ತಿಳಿಸಿದ್ದಾರೆ.
ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿ ಸಿರಾಜ್ 5000 ಯುಎಸ್ ಡಾಲರ್ (4.15 ಲಕ್ಷ ರೂಪಾಯಿ) ಮೊತ್ತವನ್ನು ಪಡೆದುಕೊಂಡಿದ್ದು ಇದನ್ನು ಮೈದಾನದ ಸಿಬ್ಬಂದಿಗಳಿಗೆ ನೀಡಿದ್ದಾರೆ. ಇನ್ನು ಇದಕ್ಕೂ ಮುನ್ನ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ACC) ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡ ಕ್ಯಾಂಡಿ ಹಾಗೂ ಕೊಲಂಬೋ ಕ್ರೀಡಾಂಗಣದ ಸಿಬ್ಬಂದಿಗಳಿಗೆ 50,000 ಯುಎಸ್ ಟಾಲರ್ ಅಂದರೆ ಸುಮಾರು 41.54 ಲಕ್ಷ ರೂಪಾಯಿಯನ್ನು ಘೋಷನೆ ಮಾಡಿತ್ತು.
ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಆರ್ಭಟಕ್ಕೆ ಇಡೀ ಕ್ರಿಕೆಟ್ ಲೋಕವೇ ದಂಗಾಗಿತ್ತು. ಪಂದ್ಯದಲ್ಲಿ ತಾನು ಎಸೆದ ಎರಡನೇ ಓವರ್ನಲ್ಲಿಯೇ ಸಿರಾಜ್ ಮೊದಲ ಎಸೆತದಲ್ಲಿ ಫಾತುಮ್ ನಿಸ್ಸಾಂಕ ಜಡೇಜಾ ಪಡೆದ ಅದ್ಭುತ ಕ್ಯಾಚ್ಗೆ ಬಲಿಯಾಗಿ ಫೆವಿಲಿಯನ್ಗೆ ತೆರಳಿದರು. ಓವರ್ನ ಎರಡನೇ ಎಸೆತದಲ್ಲಿ ಯಾವುದೇ ರನ್ ಹರಿದುಬಾರಲಿಲ್ಲ. ಮೂರನೇ ಎಸೆತದಲ್ಲಿ ಸದೀರ ಸಮತವಿಕ್ರಮ ಎಲ್ಬಿಡಬ್ಲ್ಯು ಆಗಿ ವಿಕೆಟ್ ಕಳೆದುಕೊಂಡರು. ನಂತರದ ಎಸೆತದಲ್ಲಿ ಚರಿತ ಅಸಲಂಕಾ ಇಶಾನ್ ಕಿಶನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರದ ಎಸೆತ ಎದುರಿಸಿದ ಧನಂಜಯ ಡಿಸಿಲ್ವ ಬೌಂಡರಿ ಬಾರಿಸಿದರು. ಆದರೆ ಕೊನೆಯ ಎಸೆತದಲ್ಲಿ ಅವರು ಕೂಡ ರಾಹುಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಇನ್ನು ಸಿರಾಜ್ ಅಬ್ಬರ ಅಷ್ಟಕ್ಕೇ ನಿಲ್ಲಲಿಲ್ಲ. ತನ್ನ ಮುಂದಿನ ಓವರ್ನಲ್ಲಿ ಸಿರಾಜ್ ಲಂಕಾ ನಾಯಕ ದಾಸುನ್ ಶನಕ ಅವರನ್ನು ಬೌಲ್ಡ್ ಮಾಡುವ ಮೂಲಕ ಫೆವಿಲಿಯನ್ಗೆ ಅಟ್ಟಿದ್ದಾರೆ. ಈ ಮೂಲಕ ಶ್ರೀಲಂಕಾ ತಂಡದ ಸ್ಥಿತಿ ಕೇವಲ 12 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಸಿರಾಜ್ ತಮ್ಮ 5ನೇ ವಿಕೆಟ್ ಕೂಡ ಪೂರ್ಣಗೊಳಿಸಿ ವೇಗವಾಗಿ ಐದು ವಿಕೆಟ್ ಗೊಂಚಲು ಪಡೆದ ದಾಖಲೆಯನ್ನು ಸರಿಗಟ್ಟಿದರು. ಬಳಿಕ 17 ರನ್ಗಳಿಸಿದ್ದ ಕುಸಾಲ್ ಮೆಂಡಿಸ್ ಅವರನ್ನು ಕೂಡ ಬೌಲ್ಡ್ ಮಾಡುವ ಮೂಲಕ 6 ವಿಕೆಟ್ಗಳ ಗೊಂಚಲು ಪೂರ್ಣಗೊಳಿಸಿದರು.