ಶಿವಮೊಗ್ಗ, ಏಪ್ರಿಲ್ 22: ಶಿಕ್ಷಣ ಎಂದರೆ ಕೇವಲ ಓದು ಬರಹ ಅಲ್ಲ, ಒಬ್ಬ ವ್ಯಕ್ತಿಯ ಬದುಕು ಬದಲಿಸುವ ಜ್ಞಾನ. ಪಠ್ಯದಲ್ಲೂ ಮಾನವೀಯ ಮೌಲ್ಯಗಳನ್ನ ಅಳವಡಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ''ಸರ್ಕಾರಿ ಶಾಲೆಗಳ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಹೊಂದಿರುವ ಮನೋಭಾವ ಬದಲಾಗಬೇಕು. ಖಾಸಗಿ ಶಾಲೆಯಲ್ಲಿ ಓದಿದರೆ ಮಾತ್ರ ಹೆಸರು ಮಾಡುತ್ತಾರೆ ಎಂಬುದು ತಪ್ಪು. ಸಹ್ಯಾದ್ರಿ ಕಾಲೇಜಿನಲ್ಲಿ ಓದಿದವರು ಭಾರತ ರತ್ನ, ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ, ಹೋರಾಟವನ್ನು ರೂಪಿಸುತ್ತಾರೆ ಎಂದಾದರೆ ಇವರೆಲ್ಲಾ ಸರ್ಕಾರಿ ಕಾಲೇಜಿನಲ್ಲಿ ಓದಿದ್ದಾರೆ ಎಂಬುದನ್ನು ಪೋಷಕರು ಮನಗಾಣಬೇಕು'' ಎಂದರು.
''ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕೆ ರಾಜ್ಯ ಸರ್ಕಾರ 25 ಸಾವಿರ ಕೋಟಿ ಖರ್ಚು ಮಾಡುತ್ತದೆ. ಹಾಗಾಗಿ ಸರ್ಕಾರಿ ವ್ಯವಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತದೆ'' ಎಂದರು.
ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ: ''ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕೆ ರಾಜ್ಯ ಸರ್ಕಾರ 25 ಸಾವಿರ ಕೋಟಿ ಖರ್ಚು ಮಾಡುತ್ತದೆ. ಹಾಗಾಗಿ ಸರ್ಕಾರಿ ವ್ಯವಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತದೆ.ಶಿಕ್ಷಕರು ದೇಶದ ಸಂಪತ್ತಾಗಿರುವ ವಿದ್ಯಾರ್ಥಿಗಳನ್ನು ಮೌಲ್ಯಯುತವಾಗಿ ರೂಪಿಸುವ ಹೊಣೆ ಹೊಂದಿದ್ದಾರೆ.ಎಷ್ಟೋ ಮಕ್ಕಳಿಗೆ ಈ ದೇಶದ ಇತಿಹಾಸವೇ ಗೊತ್ತಿಲ್ಲ'' ಎಂದು ಅವರು ಬೇಸರಿಸಿದರು.
''ಇತಿಹಾಸ ತಿಳಿಯದವನು ಇತಿಹಾಸ ರೂಪಿಸಲಾರ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ನುಡಿಯಂತೆ ಮಕ್ಕಳಿಗೆ ಇತಿಹಾಸ ತಿಳಿಯುವಂತೆ ಮಾಡಬೇಕು. ಸಮಾಜಕ್ಕೆ ಸ್ಪಂದಿಸುವಂತಹ ವಿದ್ಯಾರ್ಥಿಗಳನ್ನು ರೂಪಿಸಬೇಕು'' ಎಂದರು.
24 ಕೋಟಿ ಅನುದಾನ: ನಾವುದೊರೆಗಳಲ್ಲ.ಜನಸೇವಕರು.ಮೈಸೂರಿನವನಾಗಿ ಮೈಸೂರು ಅರಸರು ಸ್ಥಾಪಿಸಿದ ಸಹ್ಯಾದ್ರಿ ಕಾಲೇಜಿನ ಅಮೃತ ಮಹೋತ್ಸವ ಉದ್ಘಾಟಿಸುವುದು ನನ್ನ ಹೆಮ್ಮೆ ಎಂದ ಸಿಎಂ, ಈ ಸಂದರ್ಭವನ್ನು ನೆನಪಿಸುವ ಅಮೃತ ಮಹೋತ್ಸವ ಭವನ ನಿರ್ಮಿಸಬೇಕೆಂಬ ವಿಶ್ವ ವಿದ್ಯಾಲಯದ ಆಶಯದಂತೆ ಅದಕ್ಕೆ ಪೂರಕ ಅನುದಾನ ಬಿಡುಗಡೆ ಮಾಡಲಾಗುವುದು. ಅದಕ್ಕೆ ಪೂರಕವಾಗಿ ಕಾಲೇಜಿನ ಇತರ ಬೇಡಿಕೆಗಳನ್ನೂ ಈಡೇರಿಸಲಾಗುವುದು. ಅಮೃತ ಮಹೋತ್ಸವ ಭವನ ನಿರ್ಮಾಣಕ್ಕೆ ಕುಲಪತಿ ಕೋರಿರುವ 24 ಕೋಟಿ ಅನುದಾನ ಬಿಡುಗಡೆಗೆ ನೀಲಿನಕ್ಷೆ ಸಲ್ಲಿಸುವಂತೆ ಸೂಚಿಸಿದರು.