ಆರ್ಸಿಬಿ ಸಂಭ್ರಮಾಚರಣೆಯ ವೇಳೆ ನಡೆದ ಕಾಲ್ತುಳಿತದ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು, ಸರ್ಕಾರ ಕೋರ್ಟ್ಗೆ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದೆ. ಈ ವೇಳೆ ಸರ್ಕಾರ ಆರ್ಸಿಬಿ ಸಂಭ್ರಮಾಚರಣೆಯ ಕಾರ್ಯಕ್ರಮ ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಆಗಿದ್ದು ಎಂದು ವರದಿಯಲ್ಲಿ ತಿಳಿಸಿದ್ದು, ಇದೇ ದುರ್ಘಟನೆಗೆ ಕಾರಣ ಎಂದು ತಿಳಿಸಿದೆ.
ಸರ್ಕಾರ ಕೋರ್ಟ್ಗೆ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದೆ. ಈ ತನಿಖಾ ವರದಿಯಲ್ಲಿ ಆರ್ಸಿಬಿ, ಈವೆಂಟ್ ಮ್ಯಾನೇಜ್ಮೆಂಟ್ ಡಿಎನ್ಎ, ಕೆಎಸ್ಸಿಎ ಮಾಡಿರುವ ಲೋಪಗಳನ್ನು ಎಳೆ ಎಳೆಯಾಗಿ ತಿಳಿಸಿದೆ. ಆಯೋಜಕರು, ಪೂರ್ವ ನಿಯೋಜನೆ ಕ್ರಮ ಕೈಗೊಳ್ಳದೇ ಇರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾರ್ಯಕ್ರಮದ ಆಯೋಜನೆಯ ವೇಳೆ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವಲ್ಲಿ ಆರ್ಸಿಬಿ ಸೇರಿದಂತೆ ಇತರರು ವಿಫಲರಾಗಿದ್ದಾರೆ ಎಂದು ತಿಳಿಸಲಾಗಿದೆ. ಅಲ್ಲದೆ ಮೂರು ಸಂಸ್ಥೆಗಳ ನಿರ್ಲಕ್ಷ್ಯವನ್ನು ತನಿಖೆಯಲ್ಲಿ ಎತ್ತಿ ತೋರಿಸಲಾಗಿದೆ. ಚಿನ್ನಸ್ವಾಮಿ ಮೈದಾನದತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಆದರೆ ಅಲ್ಲಿ ಸರಿಯಾದ ವ್ಯವಸ್ಥೆಗಳು ಇರಲಿಲ್ಲ. ಈ ಬಗ್ಗೆ ಯೋಚನೆ ಹಾಗೂ ಯೋಜನೆಯನ್ನು ಮಾಡಿದ್ದರೆ ಸಂಬಂಧ ಪಟ್ಟ ಇಲಾಖೆ ಪ್ಲ್ಯಾನ್ ಮಾಡಿಕೊಳ್ಳಬಹುದಿತ್ತು. ಅನುಮತಿ ಪಡೆಯದೇ ಇರುವುದರಿಂದ ಅನಾಹುತ ಸಂಭವಿಸಿದೆ ಎಂದು ತಿಳಿಸಲಾಗಿದೆ.
ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದನ್ನು ತೋರಿಸಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸಹ ಸರಿಯಾದ ಪ್ಲ್ಯಾನ್ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಸರ್ಕಾರ ಸಹ ಪ್ಲ್ಯಾನ್ನಿಂಗ್ ಫೇಲ್ ಆಗಿದ್ದರ ಬಗ್ಗೆ ಒಪ್ಪಿಕೊಂಡಿದೆ. ಕಾರ್ಯಕ್ರಮಕ್ಕೆ ಸರಿಯಾದ ಬಂದೋಬಸ್ತ್ ಆಗಿರಲಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆರ್ಸಿಬಿ ತಂಡದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮಾತನಾಡಿದ್ದ ವಿಡಿಯೋ ಒಂದನ್ನು ಸಾಮಾಜಿಕ ತಾಣದಲ್ಲಿನ ಹಂಚಿಕೊಳ್ಳಲಾಗಿದೆ. ಅಲ್ಲದೆ ಅನೇಕ ಲೋಪದೋಷಗಳನ್ನು ಸರ್ಕಾರ ನೀಡಿದ ವರದಿಯಲ್ಲಿ ತಿಳಿಸಲಾಗಿದೆ.
ಜೂನ್ 3 ರಂದು ಅಹಮದಾಬಾದ್ನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಪಂಜಾಬ್ ತಂಡವನ್ನು 6 ರನ್ಗಳಿಂದ ಮಣಿಸಿದ ಆರ್ಸಿಬಿ ಇತಿಹಾಸ ನಿರ್ಮಿಸಿತ್ತು. ಜೂನ 3 ರಂದು ಬೆಂಗಳೂರಿನೆಲ್ಲಡೆ ಸಂಭ್ರಮಾಚರಣೆ ಮಾಡಲಾಯಿತು. ಇದಾದ ಒಂದೇ ದಿನದ ಬಳಿಕ ಆರ್ಸಿಬಿ ತಂಡ ಬೆಂಗಳೂರಿಗೆ ಬಂದಿತು. ಆ ಬಳಿಕ ಹೊಟೇಲ್ನಲ್ಲಿ ಕೊಂಚ ವಿಶ್ರಾಂತಿ ಪಡೆದ ಆಟಗಾರರು, ನಂತರ ವಿಧಾನಸೌಧದಲ್ಲಿ ನಡೆದ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದಾದ ನಂತರ ಆರ್ಸಿಬಿ ಫ್ರಾಂಚೈಸಿ ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ನಡೆಯಿತು. ಈ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರಿಂದ ಅವರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗದೇ, ಕಾಲ್ತುಳಿತ ಸಂಭವಿಸಿದೆ. ಈ ದುರಂತದಲ್ಲಿ 11 ಜನ ಸಾವನ್ನಪ್ಪಿದ್ದು, ಹಲವು ಜನರಿಗೆ ಗಾಯವಾಗಿತ್ತು.