ಬಹು ನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಮೇ 1ರಂದು ತಾತ್ಕಾಲಿಕ ತಂಡಗಳನ್ನು ಸಲ್ಲಿಸುವ ಗಡುವು ಇದ್ದು, ಎರಡು ದಿನಗಳ ಮುನ್ನವೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿತು.
ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಬಿಸಿಸಿಐ ಮಂಗಳವಾರದಂದು ಸಭೆ ನಡೆಸಿದ ಬಳಿಕ, ಟಿ20 ವಿಶ್ವಕಪ್ ತಂಡವನ್ನು ಘೋಷಿಸಲಾಯಿತು.

ಇದೇ ಜೂನ್ನಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥ್ಯದಲ್ಲಿ ನಡೆಯಲಿರುವ 20 ತಂಡಗಳುಳ್ಳ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಅನುಭವಿ ಆಟಗಾರ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.
ತಂಡದಲ್ಲಿ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಶಿವಂ ದುಬೆ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್ದೀಪ್ ಸಿಂಗ್ ಸೇರಿದಂತೆ ಕೆಲವು ನಿರೀಕ್ಷಿತ ಆಟಗಾರರಿದ್ದರೆ, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಹಾಲ್ ಮೊಹಮ್ಮದ್ ಸಿರಾಜ್ನಂತಹ ಆಟಗಾರರು ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನು ಕೆಎಲ್ ರಾಹುಲ್, ಶುಭ್ಮನ್ ಗಿಲ್, ರಿಂಕು ಸಿಂಗ್, ರುತುರಾಜ್ ಗಾಯಕ್ವಾಡ್, ಸಂದೀಪ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಪ್ರಮುಖ ಆಟಗಾರರನ್ನು ಟಿ20 ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ.

ಇದೇ ವೇಳೆ ಟಿ20 ವಿಶ್ವಕಪ್ ಭಾರತ ತಂಡದ ಆಯ್ಕೆಯಲ್ಲಿ ಮುಂಬೈ ಲಾಬಿ ಮೀರಿಸಿ ಗುಜರಾತ್ ಲಾಬಿ ಭಾರೀ ಕೆಲಸ ಮಾಡಿದೆ ಎಂದು ಭಾರತೀಯ ಕ್ರಿಕೆಟ್ ಪ್ರೇಮಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಹೌದು. ಈ ಹಿಂದೆ ಭಾರತ ಕ್ರಿಕೆಟ್ ತಂಡಕ್ಕೆ ಆಟಗಾರರ ಆಯ್ಕೆಯಲ್ಲಿ ಮುಂಬೈ ಲಾಬಿ ಸದ್ದು ಮಾಡುತ್ತಿತ್ತು. ಇದೀಗ ಗುಜರಾತ್ ಕಡೆಗೆ ತಿರುಗಿದೆ. ಇದಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಾರಣ ಎಂದು ಹೇಳಲಾಗುತ್ತಿದೆ.
ಸದ್ಯ 2024ರ ಟಿ20 ವಿಶ್ವಕಪ್ಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಮುಂಬೈ ಮತ್ತು ಗುಜರಾತ್ ಮೂಲದ ಆಟಗಾರರೇ ತುಂಬಿಕೊಂಡಿದ್ದಾರೆ. ಇವರೆರಡು ರಾಜ್ಯಗಳಿಂದ 8 ಸದಸ್ಯರು ಸ್ಥಾನ ಪಡೆದಿದ್ದಾರೆ. ಮುಂಬೈನಿಂದ 4 ಆಟಗಾರರಿದ್ದರೆ, ಗುಜರಾತ್ ರಾಜ್ಯದಿಂದ 4 ಆಟಗಾರರು ಆಯ್ಕೆಯಾಗಿದ್ದಾರೆ.

ಸದ್ಯ ನಡೆಯುತ್ತಿರುವ ಐಪಿಎಲ್ 2024ರಲ್ಲಿ ಹಾರ್ದಿಕ್ ಪಾಂಡ್ಯ ಕಳಪೆ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರ ಕೃಪೆಯಿಂದ ಸ್ಥಾನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಟಿ20 ವಿಶ್ವಕಪ್ಗೆ ಮುಂಬೈನಿಂದ ಆಯ್ಕೆಯಾದ ಆಟಗಾರರೆಂದರೆ, ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ. ಇದೇ ವೇಳೆ ಗುಜರಾತ್ನಿಂದ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ.
ಮಹಾರಾಷ್ಟ್ರ - 4 - ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ
ಗುಜರಾತ್ - 4 - ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಜಸ್ಪ್ರೀತ್ ಬುಮ್ರಾ
ದೆಹಲಿ - 2 - ವಿರಾಟ್ ಕೊಹ್ಲಿ, ರಿಷಭ್ ಪಂತ್
ಕೇರಳ - 1 - ಸಂಜು ಸ್ಯಾಮ್ಸನ್
ಉತ್ತರಪ್ರದೇಶ - 1 - ಕುಲದೀಪ್ ಯಾದವ್
ಹರಿಯಾಣ - 1 - ಯುಜ್ವೇಂದ್ರ ಚಹಾಲ್
ಪಂಜಾಬ್ - 1 - ಅರ್ಶ್ದೀಪ್ ಸಿಂಗ್
ಹೈದರಾಬಾದ್ - 1 - ಮೊಹಮ್ಮದ್ ಸಿರಾಜ್