Maharaja Trophy : ಶ್ರೀಜಿತ್ ಶತಕ ವ್ಯರ್ಥ, ಗುಲ್ಬರ್ಗಕ್ಕೆ ಗೆಲುವು
ಸಂಘಟಿತ ಆಟದ ಪ್ರದರ್ಶನ ನೀಡಿದ ಗುಲ್ಬರ್ಗ ಮಿಸ್ಟೆಕ್ಸ್ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ 4 ವಿಕೆಟ್ಗಳಿಂದ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಐದನೇ ಜಯ ದಾಖಲಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ತಂಡಕ್ಕೆ ಕೃಷ್ಣನ್ ಶ್ರೀಜಿತ್ ಆಸರೆಯಾದರು. ಭರವಸೆಯ ಆಟಗಾರರು ನೆರವಿಗೆ ಬಾರಲಿಲ್ಲ. ಕೃಷ್ಣನ್ ಶ್ರೀಜಿತ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾದರು. ಇವರ ಅಬ್ಬರದ ಶತಕದ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 179 ರನ್ ಸೇರಿಸಿತು.

ಒಂದು ಬದಿಯಲ್ಲಿ ವಿಕೆಟ್ಗಳು ಪಟ ಪಟನೇ ಬೀಳುತ್ತಾ ಇದ್ದರೂ ಸಹ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಕೃಷ್ಣನ್ ಶ್ರೀಜಿತ್ ಅಬ್ಬರಿಸಿದರು. 51 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಮೋಘ ಅಜೇಯ 100 ರನ್ ಸಿಡಿಸಿದರು. ಇವರನ್ನು ಬಿಟ್ಟರೆ ಮೊಹಮ್ಮದ್ ತಹಾ 35 ರನ್ ಬಾರಿಸಿದರು. ಉಳಿದಂತೆ ಸ್ಟಾರ್ ಬ್ಯಾಟರ್ಗಳು ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು.
ಗುಲ್ಬರ್ಗ ಪರ ಬಿಗುವಿನ ದಾಳಿಯನ್ನು ಸಂಘಟಿಸಿದ ಮೋನಿಶ್ ರೆಡ್ಡಿ 32 ರನ್ ನೀಡಿ 4 ವಿಕೆಟ್ ಕಬಳಿಸಿದರು. ಉಳಿದಂತೆ ವಿಜಯ್ಕುಮಾರ್ ವೈಶಾಖ್, ಅಭಿಷೇಕ್ ಪ್ರಭಾಕರ್, ಪೃಥ್ವಿರಾಜ್ ಶೇಕಾವತ್ ತಲಾ ಒಂದು ವಿಕೆಟ್ ಉರುಳಿಸಿದರು.
ಕಳಪೆ ಆರಂಭ
ಗುರಿಯನ್ನು ಹಿಂಬಾಲಿಸಿದ ಗುಲ್ಬರ್ಗ ಮಿಸ್ಟೆಕ್ಸ್ ತಂಡದ ಆರಂಭ ಕಳಪೆಯಾಗಿತ್ತು. ಟಾಪ್ ಆರ್ಡರ್ ಬ್ಯಾಟರ್ಗಳಾದ ಲವನಿತ್ ಸಿಸೋಡಿಯಾ, ಕೆ.ವಿ ಅನೀಶ್, ಬಿಆರ್ ಶರತ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಸೌರಭ್ ಮುತ್ತೂರು ಸಹ ನಿರಾಸೆ ಅನುಭವಿಸಿದರು.
ವಿಜಯ್ ಕುಮಾರ್ ವೈಶಾಖ್ ಮಹತ್ವದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಕ್ಷಮತೆಯನ್ನು ಪ್ರದರ್ಶಿಸಿದರು. ಇವರು 33 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ 51 ರನ್ ಸಿಡಿಸಿದರು.
ಉಳಿದಂತೆ ರಿತೇಶ್ ಭಟ್ಕಳ್ ಅಜೇಯ 35 ಹಾಗೂ ಪ್ರವೀಣ್ ದುಬೆ ಅಜೇಯ 34 ರನ್ ಬಾರಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಅಂತಿಮವಾಗಿ ಗುಲ್ಬರ್ಗ ಇನ್ನು ಐದು ಎಸೆತ ಬಾಕಿ ಇರುವಂತೆಯೇ ಅಗತ್ಯ ರನ್ ಕಲೆ ಹಾಕಿತು.
ಪರಾಜಿತ ತಂಡದ ಪರ ವಿದ್ವತ್ ಕಾವೇರಪ್ಪ, ಕೆಸಿ ಕರಿಯಪ್ಪ, ಮಾಧವ್ ತಲಾ ಎರಡು ವಿಕೆಟ್ ಉರುಳಿಸಿದರು.
ಮಳೆಯಿಂದ ರದ್ದು
ಇದಕ್ಕೂ ಮೊದಲು ನಡೆಯಬೇಕಿದ್ದ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮಂಗಳೂರು ಡ್ರಾಗನ್ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications