ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಪಂದ್ಯ ಗುವಾಹಟಿಯಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಈಗಾಗಲೇ ಗುವಾಹಟಿ ತಲುಪಿದೆ. ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಟೀಮ್ ಇಂಡಿಯಾ ಇದೆ. ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಸಮಯ ಗೊಂದಲವನ್ನು ಸೃಷ್ಟಿಸಿದೆ. ಗುವಾಹಟಿಯಲ್ಲಿ ಪಂದ್ಯ ನಡೆಯುವುದು ಯಾವಾಗ? ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ಗುವಾಹಟಿಗೆ ಬಂದಿವೆ. ಈ ಮೈದಾನ ಈಗಾಗಲೇ ಸೀಮಿತ ಓವರ್ಗಳ ಪಂದ್ಯಗಳಿಗೆ ಈ ಮೊದಲೇ ಆತಿಥ್ಯವನ್ನು ನೀಡಿತ್ತು. ಆದರೆ ಈ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯ ನಡೆಯುತ್ತಿದೆ. ಹೀಗಾಗಿ ಇಲ್ಲಿನ ಅಭಿಮಾನಿಗಳಲ್ಲಿ ನವ ಉತ್ಸಾಹ ಮನೆ ಮಾಡಿದೆ. ಟೀಮ್ ಇಂಡಿಯಾ ಗುವಾಹಟಿ ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸವನ್ನು ನಡೆಸಿದೆ. ಆದರೆ ಈ ವೇಳೆ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಅಭ್ಯಾಸದ ವೇಳೆ ಕಾಣಿಸಿಕೊಳ್ಳಲಿಲ್ಲ. ಗುರುವಾರ ಟೀಮ್ ಇಂಡಿಯಾ ಆಟಗಾರರು ಅಭ್ಯಾಸವನ್ನು ಮಾಡಿದರು. ಈ ವೇಳೆ ಗಿಲ್ ಅನುಪಸ್ಥಿತಿ ಎದ್ದು ಕಂಡಿತು.

ಗುವಾಹಟಿ ಈಶಾನ್ಯ ಭಾರತದಲ್ಲಿ ಇರುವ ರಾಜ್ಯ. ಈ ನಗರ ಬ್ರಹ್ಮಪುತ್ರಾ ನದಿಯ ದಡದಲ್ಲಿದೆ. ಈ ಸ್ಥಳದಲ್ಲಿ ಸೂರ್ಯಾಸ್ತ ಬೇಗ ಆಗುವುದರಿಂದ, ಪಂದ್ಯ ಈ ಮೈದಾನದಲ್ಲಿ ಬೇಗ ಮುಗಿಯುತ್ತದೆ. ಅಂದಹಾಗೆ ಟೆಸ್ಟ್ ಕ್ರಿಕೆಟ್ನಲ್ಲಿ ಒಂದು ದಿನಕ್ಕೆ 90 ಓವರ್ಗಳನ್ನು ಮಾಡಲಾಗುತ್ತದೆ. ಇನ್ನು ಗುವಾಹಟಿಯಲ್ಲಿ ಸಂಜೆ ಬೇಗನೆ ಆದರೆ, ಪಂದ್ಯಕ್ಕೆ ಅಡಚಣೆ ಆಗುತ್ತದೆ. ಹೀಗಾಗಿಯೇ ಪಂದ್ಯವನ್ನು ಬೇಗ ಆರಂಭಿಸಲು ನಿರ್ಧರಿಸಲಾಗಿದೆ.
ಸಾಮಾನ್ಯವಾಗಿ ಭಾರತದಲ್ಲಿ ಟೆಸ್ಟ್ ಪಂದ್ಯಗಳು ನಡೆದಾಗ ಪಂದ್ಯ ಬೆಳಗ್ಗೆ 9.30ಕ್ಕೆ ಆರಂಭವಾಗುತ್ತದೆ. ಪಂದ್ಯ ಆರಂಭವಾಗುವ ಅರ್ಧಗಂಟೆ ಮುಂಚಿತವಾಗಿ ಟಾಸ್ ನಡೆಯುತ್ತದೆ. ಆದರೆ ಗುವಾಹಟಿಯಲ್ಲಿ ಪಂದ್ಯ 9ಕ್ಕೆ ಆರಂಭವಾಗಲಿದೆ. ಅಲ್ಲದೆ ಟಾಸ್ 8.30ಕ್ಕೆ ನಡೆಯಲಿದೆ.
ಎರಡನೇ ಟೆಸ್ಟ್ ಪಂದ್ಯದಿಂದ ಶುಭಮನ್ ಗಿಲ್ ಹೊರನಡೆದಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಅಲ್ಲದೆ ಟೀಮ್ ಇಂಡಿಯಾದ ರಿಸ್ಟ್ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ಸಹ ರಜೆ ಕೋರಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಹೀಗದಾಗ ಎರಡನೇ ಟೆಸ್ಟ್ನಲ್ಲಿ ತಂಡದ ಸಂಯೋಜನೆ ಹೇಗಿರಲಿದೆ ಎಂಬುದೇ ದೊಡ್ಡ ಕುತೂಹಲ ಹೆಚ್ಚಿಸಿದೆ. ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ತಂಡವನ್ನು ಸೇರಿಕೊಳ್ಳಲಿರುವ ಬ್ಯಾಟರ್ ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಈ ವೇಳೆ 24 ವರ್ಷದ ಸಾಯಿ ಸುದರ್ಶನ್ ಹಾಗೂ ಕನ್ನಡಿಗ ದೇವದತ್ ಪಡಿಕ್ಕಲ್ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಇನ್ನು ಮೊದಲ ಟೆಸ್ಟ್ ವೇಳೆ ತಂಡದಿಂದ ಹೊರ ನಡೆದಿದ್ದ, ನಿತೀಶ್ ಕುಮಾರ್ ರೆಡ್ಡಿ ಎರಡನೇ ಟೆಸ್ಟ್ಗೆ ತಂಡ ಸೇರಿಕೊಂಡಿದ್ದಾರೆ. ಮ್ಯಾನೇಜ್ಮೆಂಟ್ ಯಾವೆಲ್ಲಾ ಪ್ಲೇಯರ್ಗೆ ಮಣೆ ಹಾಕುತ್ತದೆ ಎಂಬುದೇ ಕುತೂಹಲ ಮೂಡಿಸಿದೆ.