ವಿಶ್ವಕಪ್ನಲ್ಲಿ ಭಾರತ ಏನು ಮಾಡಬೇಕೆಂಬುದನ್ನು ಬಿಚ್ಚಿಟ್ಟ ಕ್ಯಾಪ್ಟನ್ ಕೊಹ್ಲಿ!

ಮುಂಬೈ, ಮೇ 21: ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಒತ್ತಡ ನಿಭಾಯಿಸುವುದೇ ಬಹುಮುಖ್ಯ ಸಂಗತಿ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ವಿಶ್ವಕಪ್ಗೆ ಪ್ರಕಟಿಸಲಾದ 15 ಆಟಗಾರರ ತಂಡ ಇಂಗ್ಲೆಂಡ್ಗೆ ಬುಧವಾರ ಪ್ರಯಾಣ ಬೆಳೆಸಲಿದ್ದು, ಇದಕ್ಕೂ ಮುನ್ನ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತ ತಂಡದ ಕಪ್ತಾನ ಟೂರ್ನಿಯಲ್ಲಿ ಸ್ಪರ್ಧೆ ಬಹಳ ಕಠಿಣವಾಗಿರುತ್ತದೆ. ಹೀಗಾಗಿ ಪ್ರತಿಯೊಂದು ಪಂದ್ಯದಲ್ಲೂ ಒಂದೇ ರೀತಿಯ ಹುಮ್ಮಸ್ಸು ಕಾಯ್ದುಕೊಳ್ಳಬೇಕು ಎಂದಿದ್ದಾರೆ.
"ಯಾವುದೇ ರೀತಿಯ ಸಬೂಬಿಗೆ ಇಲ್ಲ ಆಸ್ಪದವಿಲ್ಲ. ಏಕೆಂದರೆ ಇದು ವಿಶ್ವಕಪ್ ಕ್ರಿಕೆಟ್ ಟೂರ್ನಿ. ಸ್ಥಿತಿಗತಿಗಳು ಏನೇ ಇರಲಿ ಒತ್ತಡ ನಿಭಾಯಿಸುವುದೇ ಇಲ್ಲಿ ಬಹುಮುಖ್ಯ ಸಂಗತಿ,'' ಎಂದು ಇಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಹೇಳಿದ್ದಾರೆ.
"ಇದೊಂದು ಸವಾಲು. ಲಾ ಲೀಗ ಮತ್ತು ಪ್ರೀಮಿಯರ್ ಲೀಗ್ನಲ್ಲಿರುವ ಫುಟ್ಬಾಲ್ ಜಗತ್ತಿನ ದೈತ್ಯ ತಂಡಗಳು ತಮ್ಮ ಹುಮ್ಮಸ್ಸನ್ನು 5 ತಿಂಗಳ ಸುದೀರ್ಘಕಾಲದ ವರೆಗೆ ಒಂದೇ ರೀತಿಯಲ್ಲಿ ಕಾಯ್ದುಕೊಳ್ಳುತ್ತವೆ. ನಮ್ಮ ತಂಡ ಕೂಡ ಇದೇ ರೀತಿಯ ಹುಮ್ಮಸ್ಸಿನಲ್ಲಿ ಆಡಬೇಕು. ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವನ್ನು ಆಡಲೇ ಬೇಕು. ಕೇವಲ ಯಾವುದೋ ಒಂದು ತಂಡದ ವಿರುದ್ಧ ಆಡುವ ಪಂದ್ಯದ ಕಡೆಗಷ್ಟೇ ಗಮನ ನೀಡಿದರೆ ಸಾಲದು. ಟೂರ್ನಿಯುದ್ದಕ್ಕೂ ಎದುರಾಗುವ ಎಲ್ಲಾ ತಂಡಗಳ ವಿರುದ್ಧ ಒಂದೇ ವಿಧದಲ್ಲಿ ಆಡಬೇಕು,'' ಎಂದಿದ್ದಾರೆ. ಜೂನ್ 16ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯದ ಕಡೆಗೆ ಎಲ್ಲರ ಗಮನ ನೆಟ್ಟಿದೆ.
ಇನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರ ಪ್ರಕಾರ ಭಾರತ ತಂಡ ತನ್ನ ಸಾಮರ್ಥ್ಯಕ್ಕೆ ತಕ್ಕೆ ಆಟವಾಡಿದರೆ ಪ್ರಶಸ್ತಿ ಗೆಲ್ಲುವುದು ಖಂಡಿತಾ. ಆದರೆ, ಎಲ್ಲಾ ತಂಡಗಳು ಬಲಿಷ್ಠವಾಗಿ ಕಾಣಿಸುತ್ತಿದ್ದು, ಕಠಿಣ ಸ್ಪರ್ಧೆ ಎದುರಾಗಲಿದೆ ಎಂದು ಹೇಳಿದ್ದಾರೆ.
"ವಿಶ್ವಕಪ್ ಬಹುಡೊಡ್ಡ ವೇದಿಕೆ. ಅಂದಹಾಗೆ ಇಂತಹ ಬಹುದೊಡ್ಡ ವೇದಿಕೆಗಳು ಲಭ್ಯವಾಗುವುದೇ ಆನಂದಿಸುವುದಕ್ಕೆ. ಇಲ್ಲಿ ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ ವಿಶ್ವಕಪ್ ಟ್ರೋಫಿಯನ್ನು ಮರಳಿ ತಾಯ್ನಾಡಿಗೆ ತರಬಹುದು. ಆದರೆ, ಸ್ಪರ್ಧೆ ಬಹಳ ಕಠಿಣವಾಗಿದೆ. 2015ರ ವಿಶ್ವಕಪ್ಗೆ ಹೋಲಿಸಿದರೆ ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ತಂಡಗಳು ಕೂಡ ಅತ್ಯಂತ ಬಲಿಷ್ಠ ತಂಡಗಳಾಗಿ ಹೊರಹೊಮ್ಮಿವೆ,'' ಎಂದು ಶಾಸ್ತ್ರಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದೇ ವೇಳೆ ಮಾಜಿ ನಾಯಕ ಎಂ.ಎಸ್ ಧೋನಿ ಕುರಿತಾಗಿಯೂ ಕೋಚ್ ಶಾಸ್ತ್ರಿ ಗುಣಗಾನ ಮಾಡಿದ್ದಾರೆ. "ಧೋನಿಗೆ ಏನನ್ನೂ ಹೇಳುವ ಅಗತ್ಯವಿಲ್ಲ. ಏನು ಮಾಡಬೇಕೋ ಅದನ್ನು ಅವರು ಮಾಡುತ್ತಾರೆ. ವಿರಾಟ್ ಜೊತೆಗೆ ಧೋನಿ ಉತ್ತಮ ಸಂವಹನ ಹೊಂದಿದ್ದಾರೆ. ವಿಕೆಟ್ಕೀಪಿಂಗ್ ವಿಚಾರದಲ್ಲಿ ಅವರನ್ನು ಮೀರಿಸುವವರು ಬೇರೆ ಯಾರೂ ಇಲ್ಲ. ಇನ್ನು ಐಪಿಎಲ್ನಲ್ಲಿ ಅವರ ಆಟ ಗಮನಿಸಿದರೆ ಅದ್ಭುತ ಲಯ ಕಂಡುಕೊಂಡಿದ್ದಾರೆ ಎಂಬುದು ತಿಳಿಯುತ್ತದೆ. ಈ ಬಾರಿಯ ವಿಶ್ವಕಪ್ನಲ್ಲಿ ಧೋನಿ ನಮ್ಮ ತಂಡ ಬಹುದೊಡ್ಡ ಆಟಗಾರ,'' ಎಂದಿದ್ದಾರೆ.
ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ 12ನೇ ಆವೃತ್ತಿಯಲ್ಲಿ ಭಾರತ ತಂಡ ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಇದಕ್ಕೂ ಮುನ್ನ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್ ರಾಹುಲ್, ವಿಜಯ್ ಶಂಕರ್, ಕೇದಾರ್ ಜಾಧವ್, ಎಂ.ಎಸ್ ಧೋನಿ (ವಿಕೆಟ್ಕೀಪರ್), ದಿನೇಶ್ ಕಾರ್ತಿಕ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications