
ಟೀಮ್ ಇಂಡಿಯಾ ಈಗ ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ತನ್ನ ಚಿತ್ತ ನೆಟ್ಟಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್ನ ಹೊಸ ರೂಪಾಂತರಿ ಒಮೈಕ್ರಾನ್ನ ಏರಿಕೆಯ ಕಾರಣದಿಂದಾಗಿ ಈ ಹಿಂದೆ ನಿಗದಿಪಡಿಸಿದ್ದಕ್ಕಿಂತ 9 ದಿನಗಳ ನಂತರ ಸರಣಿ ಆಯೋಜನೆಯಾಗಲಿದೆ. ಈ ಸರಣಿಗೆ ತೆರಳುವ ಟೀಮ್ ಇಂಡಿಯಾ ಸದಸ್ಯರ ಆಯ್ಕೆ ಕೂಡ ಶೀಘ್ರದಲ್ಲಿಯೇ ನಡೆಯಲಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಹನುಮ ವಿಹಾರಿ ಅಕ್ಷರಶಃ ತಲೆನೋವು ತಂದಿಟ್ಟಿದ್ದಾರೆ.
ಹನುಮ ವಿಹಾರಿ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಮೋಘ ಪ್ರದರ್ಶನದ ಮೂಲಕ ಮಿಂಚಿದ ಆಟಗಾರ. ಗಾಯದ ಮಧ್ಯೆಯೂ ಸಿಡ್ನಿ ಟೆಸ್ಟ್ನಲ್ಲಿ ಭಾರತವನ್ನು ಸೋಲಿನಿಂದ ಕಾಪಾಡಿದ ಆಟಗಾರ ಹನಿಮ ವಿಹಾರಿ. ಆದರೆ ಆ ಪಂದ್ಯದ ಬಳಿಕ ಹನುಮ ವಿಹಾರಿಗೆ ಅವಕಾಶ ದೊರೆಯದಿರುವುದು ಅಚ್ಚರಿಯಾದರೂ ನಿಜ. ಆದರೆ ಈಗ ದಕ್ಷಿಣ ಆಫ್ರಿಕಾ ಎ ವಿರುದ್ಧ ಭಾರತ ಎ ತಂಡದ ಪರವಾಗಿ ಆಡಿರುವ ಹನುಮ ವಿಹಾರಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ.
ಬ್ಯಾಟಿಂಗ್ ಮೂಲಕವೇ ಆಯ್ಕೆಗಾರರಿಗೆ ಕುಟುಕಿದ ಹನುಮ ವಿಹಾರಿ: ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಭಾರತ ಎ ತಮಡದ ಪರವಾಗಿ ಆಡಿರುವ ಹನುಮ ವಿಹಾರಿ ಈ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಸತತ ಮೂರು ಇನ್ನಿಂಗ್ಸ್ಗಳಲ್ಲಿ ಮೂರು ಅದ್ಭುತ ಅರ್ಧ ಶತಕ ಬಾರಿಸಿ ಭಾರತೀಯ ಕ್ರಿಕೆಟ್ ತಮಡದ ಆಯ್ಕೆಗಾರರಿಗೆ ಆಂದ್ರ ಪ್ರದೇಶ ಮೂಲದ ಈ ಆಟಗಾರ ಕುಟುಕಿದ್ದಾರೆ. ಮತ್ತೊಮ್ಮೆ ಟೀಮ್ ಇಂಡಿಯಾದ ಬಾಗಿಲನ್ನು ಬಲವಾಗಿ ಬಡಿದಿದ್ದಾರೆ.
ಕೊಹ್ಲಿ, ದ್ರಾವಿಡ್ಗೆ ತಲೆನೋವು: ಹನುಮ ವಿಹಾರಿ ದಕ್ಷಿಣ ಆಪ್ರಿಕಾ ಪ್ರವಾಸದಲ್ಲಿ ಭಾರತ ಎ ತಂಡದ ಪರವಾಗಿ ನೀಡಿದ ಈ ಪ್ರದರ್ಶನ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈಗಾಗಲೇ ತಮಡದಲ್ಲಿ ಒಂದು ಸ್ಥಾನಕ್ಕೆ ಸಾಕಷ್ಟು ಪೈಪೋಟಿಯಿದ್ದು ಹನುಮ ವಿಹಾರಿ ಕೂಡ ಈ ಸ್ಪರ್ಧೆಯಲ್ಲಿದ್ದಾರೆ.
ಪೂಜಾರ, ರಹಾನೆ ಸ್ಥಾನಕ್ಕೆ ಕುತ್ತು?: ಮತ್ತೊಂದೆಡೆ ಹನುಮ ವಿಹಾರಿ ಪ್ರದರ್ಶನ ತಂಡದ ಪ್ರಮುಖ ಇಬ್ಬರು ಆಟಗಾರರ ಸ್ಥಾನಕ್ಕೆ ಕುತ್ತಾಗುವ ಸಾಧ್ಯೆತಿದೆ. ಸತತವಾಗಿ ಕಳಪೆ ಪ್ರದರ್ಶನದಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಸ್ಥಾನ ಅಲುಗಾಡುತ್ತಿದ್ದು ಇದಕ್ಕಾಗಿ ವಿಹಾರಿ ಕೂಡ ಪೈಪೋಟಿ ನೀಡಲು ಮುಂದಾಗಿದ್ದಾರೆ. ಮತ್ತೊಂದೆಡೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅವಕಾಶ ಪಡೆದು ಮಿಂಚಿರುವ ಶ್ರೇಯಸ್ ಐಯ್ಯರ್ ಕೂಡ ಈ ಇಬ್ಬರು ಅನುಭವಿಗಳ ಒತ್ತಡ ಹೆಚ್ಚಿಸಿದ್ದಾರೆ.