ಭಾರತ ಹಾಗೂ ಬಾಂಗ್ಲಾದೇಶಗಳ ನಡುವೆ ಸಂಬಂಧಗಳು ಹದಗೆಡುತ್ತಿವೆ. ಕ್ರಿಕೆಟ್ ಸಂಬಂಧಗಳು ಸಹ ಈಗ ಹದಗೆಡುತ್ತಿವೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್ ಆಡಲು ತಾನು ಭಾರತ ಪ್ರವಾಸ ಮಾಡುವುದಿಲ್ಲ ಎಂದು ಐಸಿಸಿಗೆ ತಿಳಿಸಿದ್ದು, ಪಂದ್ಯಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಪತ್ರ ಬರೆದಿದೆ. ಬಾಂಗ್ಲಾ ಮನವಿಗೆ ಇನ್ನು ಐಸಿಸಿ ಯಾವುದೇ ಉತ್ತರ ನೀಡಿಲ್ಲ. ಈ ವೇಳೆ ಬಾಂಗ್ಲಾದೇಶ ನಡೆಯನ್ನು ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ.
ಬಾಂಗ್ಲಾದೇಶ ಭಾರತಕ್ಕೆ ಬರಲು ಹಿಂದೇಟು ಹಾಕುತ್ತಿದೆ. ಆ ದೇಶದಲ್ಲಿ ಏನೇ ತಪ್ಪು ನಡೆದರೂ ಅದು ಸಂಪೂರ್ಣವಾಗಿ ತಪ್ಪು. ಐಸಿಸಿ ಅವರ ಕೋರಿಕೆಯ ಬಗ್ಗೆ ನಿರ್ಧರಿಸಬೇಕು. ನಮ್ಮ ದೇಶವಂತೂ ಎಲ್ಲರನ್ನೂ ಸ್ವಾಗತಿಸುತ್ತದೆ. ಆದರೆ ಅವರು ಇಲ್ಲಿಗೆ ಬರಬೇಕೋ ಅಥವಾ ಬೇಡವೋ ಎಂಬುದು ಅವರಿಗೆ ಬಿಟ್ಟಿರುವುದು ಎಂದು ಮಾಜಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ತಿಳಿಸಿದ್ದಾರೆ.

ಬಾಂಗ್ಲಾದೇಶ ಆಟಗಾರ ಮುಸ್ತಾಫಿಜುರ್ ರಹಮಾನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಿನಿ ಹರಾಜಿನಲ್ಲಿ 9.2 ಕೋಟಿ ರೂ. ನೀಡಿ ಖರೀದಿಸಿತ್ತು. ಇವರು ಡೆತ್ ಓವರ್ಗಳಲ್ಲಿ ಬಿಗುವಿನ ದಾಳಿ ನಡೆಸಲು ಹೆಸರುವಾಸಿ. ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ಭಾರತದಲ್ಲಿ ಹಲವು ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಖಂಡಿಸಿದವು. ಅಲ್ಲದೆ ಮುಸ್ತಾಫಿಜುರ್ ರಹಮಾನ್ ಅವರನ್ನು ಐಪಿಎಲ್ನಿಂದ ಕೈ ಬಿಡಬೇಕು ಎಂಬ ಬೇಡಿಕೆ ಹೆಚ್ಚಾಯಿತು.
ಬಿಸಿಸಿಐ ಬಾಂಗ್ಲಾ ಆಟಗಾರನ ಬಗ್ಗೆ ಶಿಸ್ತು ಕ್ರಮವನ್ನು ಕೈಗೊಂಡಿತು. ಅದರಂತೆ ಕೆಕೆಆರ್ ತಂಡ ಮುಸ್ತಾಫಿಜುರ್ ಅವರನ್ನು ಕೈ ಬಿಡುವಂತೆ ಬಿಸಿಸಿಐ ಸೂಚನೆಯನ್ನು ನೀಡಿತು. ಅಲ್ಲದೆ ಅವರ ಬದಲಿಗೆ ಬೇರೆ ಆಟಗಾರರನ್ನು ಸೇರಿಸಿಕೊಳ್ಳುವಂತೆ ಸೂಚಿಸಿದೆ. ಈ ಬೆಳವಣಿಗೆಗಳ ಮಧ್ಯೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಸಹ ಟಿ20 ವಿಶ್ವಕಪ್ ಆಡಲು ತಾನು ಭಾರತಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿತು. ಅಲ್ಲದೆ ಭದ್ರತೆಯ ಕಾರಣಗಳನ್ನು ನೀಡಿ ಭಾರತಕ್ಕೆ ಬರಲು ಬಾಂಗ್ಲಾ ಹಿಂದೇಟು ಹಾಕಿದೆ. ಬಾಂಗ್ಲಾದೇಶ ಭಾರತದಲ್ಲಿ ತನ್ನ ಲೀಗ್ ಹಂತದ ಪಂದ್ಯಗಳನ್ನು ಕೋಲ್ಕತ್ತಾದಲ್ಲಿ ಮೂರು ಹಾಗೂ ಮುಂಬೈನಲ್ಲಿ ಒಂದನ್ನು ಆಡಬೇಕಿತ್ತು.

ಭಾರತದ '72 ದಿ ಲೀಗ್' ವೃತ್ತಿಪರ ಗಾಲ್ಫ್ ಪ್ರವಾಸದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷ ಕಪಿಲ್ ದೇವ್ ಉಪಸ್ಥಿತರಿದ್ದರು. ಈ ವೇಳೆ ಅವರಿಗೆ ಬಾಂಗ್ಲಾದೇಶದ ಆಟಗಾರರನ್ನು ಹೊರಗಿಡುವ ಸಾಧ್ಯತೆಯ ಬಗ್ಗೆ ಕೇಳಿದಾಗ, ನಾವು ಈ ಬಗ್ಗೆ ಚರ್ಚಿಸಿದ್ದೇವೆ. ಇನ್ನು ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ. ಕ್ರಿಕೆಟ್ ತಂಡದ ಕ್ರೀಡೆ. ಆದರೆ ಗಾಲ್ಫ್ ವೈಯಕ್ತಿಕ ಕ್ರೀಡೆ. ಭಾರತದಲ್ಲಿ ಗಾಲ್ಫ್ ಆಡಲು ತಂಡದ ಅವಶ್ಯಕತೆ ಇದೆ. ಐಪಿಎಲ್ ನಿಂದ ಕ್ರಿಕೆಟ್ನಲ್ಲಿ ಬದಲಾವಣೆ ಆಗಿದೆ. ಇದೇ ರೀತಿ ನಾವು ಈ ಲೀಗ್ ಸಹಾಯದಿಂದ ಗಾಲ್ಫ್ ನಲ್ಲೂ ಬದಲಾವಣೆ ಮಾಡಲು ಬಯಸಿದ್ದೇವೆ ಎಂದು ಕಪಿಲ್ ದೇವ್ ಹೇಳಿದ್ದಾರೆ.