ಭಾರತ ತಂಡದ ಮಾಜಿ ದಿಗ್ಗಜ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಆಯ್ಕೆಯಾದ ಟೀಮ್ ಇಂಡಿಯಾದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಕಳೆದ ವಾರ ಚಾಂಪಿಯನ್ಸ್ ಟ್ರೋಫಿಗಾಗಿ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ 15 ಮಂದಿಯ ಭಾರತ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಆಯ್ಕೆದಾರರು ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಮೇಲೆ ಮಾತ್ರ ವಿಶ್ವಾಸ ವ್ಯಕ್ತಪಡಿಸಿ ಆಯ್ಕೆ ಮಾಡಿದ್ದರು.
ಸಂಜು ಸ್ಯಾಮ್ಸನ್ ಡಿಸೆಂಬರ್ 2023 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಆ ಸಮಯದಲ್ಲಿ ರಿಷಬ್ ಪಂತ್ ಕಾರು ಅಪಘಾತದಲ್ಲಿ ಉಂಟಾದ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದರು. 2024ರ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದ್ದರೂ, ರಿಷಬ್ ಪಂತ್ ಈ ಸ್ವರೂಪದಲ್ಲಿ ಪುನರಾಗಮನ ಮಾಡಿದರು.

ಚಾಂಪಿಯನ್ಸ್ ಟ್ರೋಫಿಗೆ ಸಂಜು ಸ್ಯಾಮ್ಸನ್ ಅವರನ್ನು ಕಡೆಗಣಿಸಿರುವ ಬಗ್ಗೆ ಹರ್ಭಜನ್ ಸಿಂಗ್ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಏಕದಿನ ಮಾದರಿಗೆ 'ಸೂಟ್' ಆಗಿದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ನಾನು ಅವರ ಬಗ್ಗೆ ಕೆಟ್ಟ ಭಾವನೆ ಹೊಂದಿದ್ದೇನೆ. ಆದರೆ ಸಂಜು ಸ್ಯಾಮ್ಸನ್ ರನ್ ಗಳಿಸಿದರೂ, ತಂಡದಿಂದ ಕೈಬಿಡಲಾಗಿದೆ. ನೀವು ಕೇವಲ 15 ಆಟಗಾರರನ್ನು ಮಾತ್ರ ಆಯ್ಕೆ ಮಾಡಬಹುದು ಎಂದು ನನಗೆ ತಿಳಿದಿದೆ. ಆದರೆ ಅವರ ಬ್ಯಾಟಿಂಗ್ ಏಕದಿನ ಸ್ವರೂಪಕ್ಕೆ ಸರಿಹೊಂದುತ್ತದೆ ಅಂದುಕೊಂಡಿದ್ದೇನೆ ಎಂದಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಸರಾಸರಿ 55-56 ಆಗಿದೆ. ಆದರೆ ಅವರು ಎರಡನೇ ವಿಕೆಟ್ ಕೀಪರ್ ಆಗಿ ತಂಡದಲ್ಲಿಲ್ಲ. ನಾವು ಅವರನ್ನು ಆಯ್ಕೆ ಮಾಡುವ ಬಗ್ಗೆ ಮಾತನಾಡುವಾಗ, ಯಾರ ಜಾಗಕ್ಕೆ ಅವರನ್ನು ಆಯ್ಕೆ ಮಾಡಬೇಕು? ಎಂದು ಜನರು ಕೇಳುತ್ತಾರೆ. ಅವರಿಗಾಗಿ ತಂಡದಲ್ಲಿ ಜಾಗವನ್ನು ಮಾಡಬಹುದು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಇದಲ್ಲದೆ, ಯುಜ್ವೇಂದ್ರ ಚಹಾಲ್ ಅವರನ್ನು ನಿರ್ಲಕ್ಷಿಸಿದ ಬಗ್ಗೆಯೂ ಹರ್ಭಜನ್ ಸಿಂಗ್ ಮಾತನಾಡಿದ್ದಾರೆ. ಹೆಚ್ಚುವರಿ ವಿಭಿನ್ನ ಬೌಲಿಂಗ್ಗಾಗಿ ಬಿಸಿಸಿಐ ಆಯ್ಕೆದಾರರು ಲೆಗ್ ಸ್ಪಿನ್ನರ್ ಅನ್ನು ಪರಿಗಣಿಸಬೇಕಾಗಿತ್ತು. ಸಂಜು ಸ್ಯಾಮ್ಸನ್ ತಂಡದಲ್ಲಿಲ್ಲ. ಯುಜ್ವೇಂದ್ರ ಚಹಾಲ್ ಕೂಡ ತಂಡದಲ್ಲಿಲ್ಲ. ನೀವು ನಾಲ್ಕು ಸ್ಪಿನ್ನರ್ಗಳನ್ನು ಆಯ್ಕೆ ಮಾಡಿದ್ದೀರಿ. ಅವರಲ್ಲಿ ಇಬ್ಬರು ಎಡಗೈ ಆಟಗಾರರು. ವೈವಿಧ್ಯತೆಗಾಗಿ ನೀವು ಲೆಗ್ ಸ್ಪಿನ್ನರ್ ಅನ್ನು ಸಹ ಸೇರಿಸಿಕೊಳ್ಳಬಹುದು. ಯುಜ್ವೇಂದ್ರ ಚಹಾಲ್ ಒಬ್ಬ ಶ್ರೇಷ್ಠ ಬೌಲರ್. ಈ ತಂಡಕ್ಕೆ ಹೊಂದಿಕೆಯಾಗದ ಅವರು ಏನು ತಪ್ಪು ಮಾಡಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗಾಗಿ ಮೊದಲ ಬಾರಿಗೆ ಏಕದಿನ ತಂಡಕ್ಕೆ ಸೇರ್ಪಡೆಗೊಂಡಿರುವ ಯಶಸ್ವಿ ಜೈಸ್ವಾಲ್ ಅವರು ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ತೆರೆಯಬೇಕಿತ್ತು. ಆದರೆ, ಶುಭಮನ್ ಗಿಲ್ ಅವರನ್ನು ಉಪನಾಯಕನನ್ನಾಗಿ ಮಾಡಿರುವುದರಿಂದ ಈ ಸಾಧ್ಯತೆ ಕಡಿಮೆಯಾಗಿದೆ. ಶುಭಮನ್ ಗಿಲ್ ಉಪನಾಯಕ ಆಗಿರುವುದರಿಂದ ಆರಂಭಿ ಬ್ಯಾಟರ್ ಆಗಿದ್ದಾರೆ. ಯಶಸ್ವಿ ಜೈಸ್ವಾಲ್ ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದಿಲ್ಲ. ಏಕೆಂದರೆ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಆ ಸ್ಥಾನಗಳಲ್ಲಿರುತ್ತಾರೆ ಎಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ.