ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕ. ಭಾರತಕ್ಕೆ ಒಂದಲ್ಲ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಐಸಿಸಿ ಏಕದಿನ, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಟೆಸ್ಟ್ನಲ್ಲಿ ತಮ್ಮ ತಂಡವನ್ನು ನಂಬರ್ 1 ಮಾಡಿದ ವಿಶ್ವದ ಏಕೈಕ ನಾಯಕ ಎಂಎಸ್ ಧೋನಿ.
2007 ರಿಂದ 2013 ರವರೆಗೆ ಧೋನಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವು ಸುವರ್ಣ ಅವಧಿಯನ್ನು ಹೊಂದಿತ್ತು. ಈ ವೇಳೆ ಟೀಮ್ ಇಂಡಿಯಾದಲ್ಲಿ ಹಲವು ಯುವ ಆಟಗಾರರು ಮಿಂಚಿದ್ದಾರೆ. ಅಲ್ಲದೆ, ಅವರ ನಾಯಕತ್ವದಲ್ಲಿ ಸಾಕಷ್ಟು ಕಲಿತ್ತಿದ್ದಾರೆ. 2019ರ ಏಕದಿನ ವಿಶ್ವಕಪ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ಧೋನಿ ವಿದಾಯ ಹೇಳಿದ್ದಾರೆ. ಈಗ ಧೋನಿ ಯಶಸ್ವಿ ನಾಯಕತ್ವದ ರಹಸ್ಯವನ್ನು ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಬಿಚ್ಚಿಟ್ಟಿದ್ದಾರೆ.

'ಎಂಎಸ್ ಧೋನಿ ಎಂದಿಗೂ ಯಾವುದೇ ಆಟಗಾರನ ಬಳಿಗೆ ಹೋಗಿ ಯಾವ ರೀತಿಯ ಮೈದಾನ ಬೇಕು ಎಂದು ಕೇಳುವುದಿಲ್ಲ. ನಿಮ್ಮ ತಪ್ಪುಗಳಿಂದ ಕಲಿಯಲು ಅವರು ನಿಮಗೆ ಅವಕಾಶ ನೀಡುತ್ತಾರೆ ಎಂದು ಭಜ್ಜಿ ಹೇಳಿದ್ದಾರೆ.
ಇದಕ್ಕೆ ಉದಾಹರಣೆಯಾಗಿ ಹರ್ಭಜನ್ ಸಿಂಗ್ ಅವರು ಐಪಿಎಲ್ನಲ್ಲಿ ಸಿಎಸ್ಕೆ ಪರ ಆಡುತ್ತಿದ್ದಾಗ ಪಂದ್ಯವೊಂದರಲ್ಲಿ ನಡೆದ ಘಟನೆಯ ಬಗ್ಗೆ ಹೇಳಿದ್ದಾರೆ. "ಎಂಎಸ್ ಧೋನಿ ಕೀಪಿಂಗ್ ಮಾಡುತ್ತಿದ್ದಾಗ ನಾನು ಶಾರ್ಟ್ ಫೈನ್ ಲೆಗ್ನಲ್ಲಿ ಫೀಲ್ಡಿಂಗ್ ನಿಂತಿರುವಾಗ ನಡೆದ ಘಟನೆ ನೆನಪಿದೆ. ಶಾರ್ದೂಲ್ ಠಾಕೂರ್ ಬೌಲಿಂಗ್ ಮಾಡುತ್ತಿದ್ದಾಗ ಕೇನ್ ವಿಲಿಯಮ್ಸನ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಮುಂದಿನ ಎಸೆತದಲ್ಲಿ, ವಿಲಿಯಮ್ಸನ್ ಅದೇ ಲೆಂಗ್ತ್ ಬಾಲ್ಗೆ ಅದೇ ಶಾಟ್ ಆಡಿದರು.
ಈ ಸಂದರ್ಭದಲ್ಲಿ ನಾನು ಎಂಎಸ್ ಬಳಿ ಹೋಗಿ ಶಾರ್ದೂಲ್ ಗೆ ವಿಭಿನ್ನವಾಗಿ ಬೌಲಿಂಗ್ ಮಾಡಲು ಹೇಳುವಂತೆ ಕೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಪಾಜಿ ಈಗ ಹೇಳಿದರೆ ಅವನು ಕಲಿಯುವುದಿಲ್ಲ. ಅವನು ತಾನೇ ಕಲಿಯಲಿ. ಹೊಡೆತ ತಿಂದರೆ ತಾನೇ ಕಲಿಯುತ್ತೇನೆ ಎಂದಿದ್ದರು" ಎಂದು ಹರ್ಭಜನ್ ಅವರು, ಧೋನಿ ನಾಯಕತ್ವದ ತಂತ್ರವನ್ನು ಬಹಿರಂಗಪಡಿಸಿದ್ದಾರೆ.
ಇದೇ ವೇಳೆ ಧೋನಿ ಮತ್ತು ರೋಹಿತ್ ಶರ್ಮಾ ನಾಯಕತ್ವದ ನಡುವಿನ ವ್ಯತ್ಯಾಸದ ಬಗ್ಗೆಯೂ ಮಾತನಾಡಿದ್ದಾರೆ. ಧೋನಿ ಮತ್ತು ರೋಹಿತ್ ಸಂಪೂರ್ಣವಾಗಿ ವಿಭಿನ್ನ ನಾಯಕರು. ರೋಹಿತ್ ಅವರ ನಾಯಕತ್ವವು ಧೋನಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಅವರು ತಿಳಿಸಿದ್ದಾರೆ.
ರೋಹಿತ್ ಪ್ರತಿ ಆಟಗಾರರೊಂದಿಗೆ ಮಾತನಾಡುತ್ತಾರೆ. ಅವರು ನಿಮ್ಮ ಭುಜದ ಮೇಲೆ ಕೈಯಿಟ್ಟು ನಿಮ್ಮಿಂದ ಏನನ್ನು ನಿರೀಕ್ಷಿಸಬಹುದು ಎಂದು ಹೇಳುವಂತಹ ಆಟಗಾರ. 'ಇದನ್ನು ನೀನು ಮಾಡಬಲ್ಲೆ' ಎಂಬ ಭರವಸೆಯನ್ನು ಆಟಗಾರರಿಗೆ ನಾಯಕನಾಗಿ ಅವರು ನೀಡುತ್ತಾರೆ. ಅವರು ಮುಂಬೈ ಇಂಡಿಯನ್ಸ್ ತಂಡವನ್ನು 13 ವರ್ಷಗಳ ಕಾಲ ಮುನ್ನಡೆಸಿದ್ದಾರೆ.
ಈ ಅನುಭವದಿಂದ ಕಳೆದ ಎರಡು-ಮೂರು ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ನಾಯಕತ್ವ ಮೂಲಕ ದೊಡ್ಡ ಬದಲಾವಣೆ ತಂದಿದ್ದಾರೆ. ನೀವು ಕಡಿಮೆ ಸ್ವರೂಪಗಳಲ್ಲಿ ನಾಯಕನಾಗಿ ಸುಲಭವಾಗಿ ಗೆಲ್ಲಬಹುದು, ಆದರೆ ಟೆಸ್ಟ್ಗಳಲ್ಲಿ ಹಾಗಲ್ಲ. ನಿಜವಾದ ನಾಯಕತ್ವವನ್ನು ಟೆಸ್ಟ್ ಕ್ರಿಕೆಟ್ ಕಳುಹಿಸುತ್ತದೆ ಎಂದು ಹರ್ಭಜನ್ ಸಿಂಗ್ ವಿವರಿಸಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿಯೂ ಭಾರತ ಹಲವಾರು ಸಂದರ್ಭಗಳಲ್ಲಿ ಐಸಿಸಿ ಪ್ರಶಸ್ತಿಯನ್ನು ಗೆಲ್ಲುವ ಸಮೀಪಕ್ಕೆ ಬಂದಿದೆ. ಆದರೆ, ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ 2024ರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಿದೆ.