
ಪಂಜಾಬ್, ಮಾರ್ಚ್ 27: ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಟ್ವಿಟರ್ನಲ್ಲೊಂದು ವೀಡಿಯೋ ಶೇರ್ ಮಾಡಿದ್ದಾರೆ. ಜನರ ಗುಂಪೊಂದು ಕರ್ತವ್ಯದಲ್ಲಿರುವ ಪೊಲೀಸ್ ಒಬ್ಬರಿಗೆ ಹಲ್ಲೆ ನಡೆಸುತ್ತಿರುವ ವೀಡಿಯೋ ಹಂಚಿಕೊಂಡಿರುವ ಭಜ್ಜಿ ಜನರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ನಿಂದಾಗಿ ವಿಶ್ವದಲ್ಲೆಡೆ ಭೀತಿ ಆವರಿಸಿದೆ. ಸೋಂಕು ಆತಂಕಕಾರಿಯಾಗಿ ಹಬ್ಬುತ್ತಿರುವುದರಿಂದ ಭಾರತದಲ್ಲಿ 21 ದಿನಗಳ ನಿಷೇಧ ವಿಧಿಸಲಾಗಿದೆ. ಹೀಗಾಗಿ ಜನ ಮತ್ತು ಪೊಲೀಸರ ಮಧ್ಯೆ ಅಲ್ಲಿಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಘಟನೆಗಳೂ ವರದಿಯಾಗಿವೆ.
ಟ್ವಿಟರ್ನಲ್ಲಿ ವೀಡಿಯೋ ಹಂಚಿಕೊಂಡಿರುವ ಹರ್ಭಜನ್, ಜನ ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳುವಂತೆ ಕೋರಿಕೊಂಡಿದ್ದಾರೆ. 'ಪೊಲೀಸರ ಬಗೆಗಿನ ನಮ್ಮ ಫ..... ಮನಸ್ಥಿತಿ ಬದಲಾಯಿಸಿಕೊಳ್ಳಬೇಕಿದೆ. ನಮ್ಮನ್ನು ಉಳಿಸುವುದಕ್ಕಾಗಿ ಅವರು ಅವರ ಜೀವವನ್ನೇ ಅಪಾಯದಲ್ಲಿ ಇಟ್ಟುಕೊಂಡಿರುತ್ತಾರೆ ಎನ್ನವುದನ್ನು ನಾವು ಮರೆಯಬಾರದು. ಅವರಿಗೂ ಕುಟುಂಬವಿದೆ. ಅವರು ನಮ್ಮ ದೇಶಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾಕೆ ನಮಗೆ ಸುಮ್ಮನೆ ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ. ನಾಳೆಯ ಒಳ್ಳೆಯದಕ್ಕಾಗಿ ಇವತ್ತು ನಾವು ಸಂವೇದನಾಶೀಲರಾಗಬೇಕಿದೆ' ಎಂದು ಭಜ್ಜಿ ಕೊಂಚ ಗರಂ ಆಗೇ ಬರೆದುಕೊಂಡಿದ್ದಾರೆ.
ತನ್ನ ವೀಡಿಯೋ ಜೊತೆಗೆ ಜನರಿಗೆ ಸಂದೇಶ ಸಾರಿ ಹರ್ಭಜನ್ ಬರೆದುಕೊಂಡಿರುವುದಷ್ಟೇ ಅಲ್ಲ, ಮನೆಯಲ್ಲೇ ಇದ್ದು ತಮ್ಮನ್ನು ತಾವು ಸೋಂಕಿನಿಂದ ರಕ್ಷಿಸಿಕೊಳ್ಳುವಂತೆ ಇತರ ಸೆಲೆಬ್ರಿಟಿಗಳು ಕೋರಿಕೊಂಡಿರುವ ಟ್ವೀಟ್ಗಳನ್ನೂ ರೀ ಟ್ವೀಟ್ ಮಾಡುತ್ತಿದ್ದಾರೆ. ಕೋವಿಡ್-19 ಹಬ್ಬುವುದನ್ನು ತಡೆಗಟ್ಟಲು ಸರ್ಕಾರ ಲಾಕ್ಡೌನ್ನ ಮೊರೆ ಹೋಗಿದೆ.