ನವದೆಹಲಿ, ಏಪ್ರಿಲ್ 26: ವಿಮಾನದೊಳಗಿದ್ದ ವಿಕಲ ಚೇತನ ವ್ಯಕ್ತಿಯೊಬ್ಬನ ಮೇಲೆ ಜನಾಂಗೀಯ ನಿಂದನೆ ಮಾಡಿದ ಪೈಲಟ್ ಅನ್ನು ಕ್ರಿಕೆಟಿಗ ಹರ್ಭಜನ್ ಸಿಂಗ್ ತರಾಟೆಗೆ ತೆಗೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಪತ್ರದ ಮುಖೇನ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೂ ತಂದಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಿರುವ ಹರ್ಭಜನ್ ಸಿಂಗ್, ತಮ್ಮ ಪಂದ್ಯಗಳಿಗಾಗಿ ದೇಶದ ತುಂಬೆಲ್ಲಾ ಓಡಾಡುತ್ತಿದ್ದಾರೆ.

ಟ್ವಿಟರ್ ನಲ್ಲಿ ಹರ್ಭಜನ್ ಸಿಂಗ್ ಈ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರಾದರೂ, ಘಟನೆ ನಡೆದ ಜಾಗ, ಸಂದರ್ಭ, ಹಿನ್ನೆಲೆಗಳನ್ನು ವಿವರಿಸಿಲ್ಲ. ಹಾಗಾಗಿ, ಇತ್ತೀಚೆಗಷ್ಟೇ ಈ ಘಟನೆ ನಡೆದಿರಬಹುದು ಎಂದು ಊಹಿಸಲಾಗಿದೆ.
ಟ್ವಿಟರ್ ನಲ್ಲಿ ಅವರು, ''ತಾವು, ಬೆರ್ಡ್ ಹೋಸ್ಲಿನ್ ಎಂಬ ವಿದೇಶಿ ಪೈಲಟ್ ಗೆ ಬಾರಿಸಿದ್ದೇನೆ. ಭಾರತೀಯ ಹಾಗೂ ಅಂಗವಿಕಲ ಪ್ರಯಾಣಿಕನನ್ನುಆ ಪೈಲಟ್ ಜನಾಂಗೀಯ ದ್ವೇಷ ಕಾರುವ ಮಾದರಿಯಲ್ಲಿ ಹೀನಾಯವಾಗಿ ಬೈದ. ಇದರಿಂದ ರೊಚ್ಚಿಗೆದ್ದ ನಾನು ಆತನನ್ನು ನಿಂದಿಸಿದ್ದೇನೆ '' ಎಂದು ಅವರು ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಅವರು, ''ಇಂಥ ಸಿಬ್ಬಂದಿಯಿರುವುದು ಜೆಟ್ ವಿಮಾನ ಸಂಸ್ಥೆಗೆ ಕಳಂಕ. ಇಂಥವರ ಮೇಲೆ ಸಂಸ್ಥೆಯು ಕ್ರಮ ಕೈಗೊಳ್ಳಬೇಕು'' ಎಂದು ಅವರು ಆಗ್ರಹಿಸಿದ್ದಾರೆ.