

ನವದೆಹಲಿ, ಅಕ್ಟೋಬರ್ 1: ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅವರಿಂದ ಶ್ಲಾಘಿಸಲ್ಪಟ್ಟರೂ ಮುಂಬರಲಿರುವ ವೆಸ್ಟ್ ಇಂಡೀಸ್ ಟೆಸ್ಟ್ ಗೆ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಅವರಿಗೆ ಸ್ಥಾನ ನೀಡದ್ದಕ್ಕೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 4ರಿಂದ ಗುಜರಾತ್ ನ ರಾಜ್್ಕೋಟ್ ನಲ್ಲಿ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ತಂಡದ ಆಯ್ಕೆ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ಹೇಳಿಕೆ ನೀಡಿದ್ದರು. ಇದರಲ್ಲಿ ಏಷ್ಯಾ ಕಪ್ ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಅವರನ್ನು ಕೈ ಬಿಟ್ಟಿರುವುದಕ್ಕೆ ಸರಿಯಾದ ಕಾರಣ ನೀಡಿರಲಿಲ್ಲ.
'ಏಷ್ಯಾ ಕಪ್ ಟೂರ್ನಿಯಿಂದಾಗಿ ದಣಿದಿರುವುದರಿಂದ ಮುಂಬರಲಿರುವ ವಿಂಡೀಸ್ ಟೆಸ್ಟ್ ಗೆ ಜಸ್ ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಗಾಯದಿಂದ ಚೇತರಿಸಿಕೊಳ್ಳದಿರುವುದರಿಂದ ಹಾರ್ದಿಕ್ ಪಾಂಡ್ಯ ಮತ್ತು ಇಶಾಂತ್ ಶರ್ಮಾ ಅವರನ್ನು ತಂಡದ ಆಯ್ಕೆಯಲ್ಲಿ ಪರಿಗಣಿಸಲಾಗಿಲ್ಲ' ಎಂದು ಹೇಳಿದ್ದರು.
ಪ್ರವಾಸಿ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಗೆ ಶರ್ಮಾ ಅವರನ್ನು ತಂಡದಿಂದ ಕೈ ಬಿಟ್ಟಿರುವ ಸುದ್ದಿ ಕೇಳುತ್ತಲೇ ಸ್ಪಿನ್ ಮಾಂತ್ರಿಕ ಭಜ್ಜಿ ಟ್ವಿಟರ್ ಮೂಲಕ ತನ್ನ ಅಸಮಾಧಾನ ತೋರಿಕೊಂಡಿದ್ದಾರೆ. ಆಯ್ಕೆ ಸಮಿತಿಯಲ್ಲಿರುವವರು ಏನು ಯೋಚಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
'ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಗೆ ರೋಹಿತ್ ಶರ್ಮಾ ಅವರಿಗೆ ಸ್ಥಾನ ನೀಡಲಾಗಿಲ್ಲ. ಆಯ್ಕೆ ಸಮಿತಿಯಲ್ಲಿರುವವರು ಅಸಲಿಗೆ ಏನು ಯೋಚಿಸುತ್ತಿದ್ದಾರೆ? ಯಾರಿಗಾದರೂ ಇದರ ಬಗ್ಗೆ ಸುಳಿವಿದೆಯೇ? ಕಾರಣದ ತಿಳಿಯದ ಹೊರತಾಗಿ ನನಗಿದನ್ನು ಅರಗಿಸಿಕೊಳ್ಳಲೇ ಸಾಧ್ಯವಾಗುತ್ತಿಲ್ಲ' ಎಂದು ಹರ್ಭಜನ್ ಹೇಳಿದ್ದಾರೆ.