
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಏಕದಿನ ಪಂದ್ಯ ಸಾಕಷ್ಟು ಏರಿಳಿತಗಳ ಕ್ಷಣಗಳಿಗೆ ಸಾಕ್ಷಿಯಾಯಿತು. ಭಾರತ ಸುಲಭವಾಗಿ ಗೆಲ್ಲಲಿದೆ ಎಂಬಂತಾ ಸ್ಥಿತಿಯಿಂದ ರೋಚಕ ಹಂತಕ್ಕೆ ತಲುಪಿ ಉಸಿರು ಬಿಗಿಹಿಡಿದು ನೋಡುವಂತೆ ಮಾಡಿತ್ತು ಈ ಪಂದ್ಯ. ಈ ಮಧ್ಯೆ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಶಿಖರ್ ಧವನ್ಗೆ ಕೈ ಮುಗಿದು ನಮಸ್ಕರಿಸಿದ್ದಾರೆ. ಇದಕ್ಕೆ ಕಾರಣವೂ ಕುತೂಹಲಕಾರಿಯಾಗಿದೆ.
ಭಾರತ ನೀಡಿದ 330 ರನ್ಗಳ ಬೃಹತ್ ಮೊತ್ತವನ್ನು ಇಂಗ್ಲೆಂಡ್ ಬೆನ್ನಟ್ಟಿತ್ತು. ಆದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕರು ಅಗ್ಗಕ್ಕೆ ವಿಕೆಟ್ ಒಪ್ಪಿಸಿ ತಂಡಕ್ಕೆ ಆಘಾತವನ್ನುಂಟು ಮಾಡಿದ್ದರು. ಆದರೆ ಬಳಿಕ ಬಂದ ಬೆನ್ ಸ್ಟೋಕ್ಸ್ ಭಾರತಕ್ಕೆ ಮತ್ತೊಮ್ಮೆ ಕಂಟಕವಾಗುವ ಲಕ್ಷಣವನ್ನು ತೋರಿಸಿದರು.
ಭುವನೇಶ್ವರ್ ಕುಮಾರ್ ಎಸೆತವೊಂದನ್ನು ಸಿಕ್ಸರ್ಗೆ ಚೆಂಡನ್ನು ಅಟ್ಟುವ ಭರದಲ್ಲಿ ಎಡವಿದ ಬೆನ್ ಸ್ಟೋಕ್ಸ್ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸುವ ಸಾಧ್ಯತೆಯಿತ್ತು. ಆದರೆ ಈ ಕ್ಯಾಚ್ಅನ್ನು ಬೆನ್ ಸ್ಟೋಕ್ಸ್ ಕೈಚೆಲ್ಲುವ ಮೂಲಕ ಅಪಾಯಕಾರಿ ಆಟಗಾರನಿಗೆ ಜೀವದಾನ ಮಾಡಿದರು. ಇದು ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾಗೆ ಸಿಟ್ಟೇರುವಂತೆ ಮಾಡಿತ್ತು. ಸಿಕ್ಕ ಅವಕಾಶವನ್ನು ಕೈಚೆಲ್ಲಿದ್ದಕ್ಕೆ ಪಾಂಡ್ಯ ಕೈಮುಗಿದು ಕ್ಷಮೆಯಾಚಿಸಿದರು.
ಆದರೆ ಈ ಜೀವದಾನವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಸ್ಟೋಕ್ಸ್ ಯಶಸ್ವಿಯಾಗಲಿಲ್ಲ. ಟಿ ನಟರಾಜನ್ ಎಸೆತವನ್ನು ಬಾರಿಸಿದ ಬೆನ್ ಸ್ಟೋಕ್ಸ್ ಶಿಖರ್ ಧವನ್ಗೆ ಕ್ಯಾಚ್ ನೀಡಿದರು. ಈ ಸಂದರ್ಭದಲ್ಲಿ ತಪ್ಪೆಸಗದ ಧವನ್ ಕ್ಯಾಚ್ ಪೂರ್ಣಗೊಳಿಸಿ ತಮ್ಮ ಎಂದಿನ ಶೈಲಿಯಲ್ಲಿ ತೊಡೆತಟ್ಟಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಅಪಾಯಕಾರಿ ಆಟಗಾರನಿಗೆ ಜೀವದಾನ ನೀಡಿ ನಾಯಕನ ಕೆಂಗಣ್ಣಿಗೆ ಗುರಿಯಾಗಿದ್ದ ಪಾಂಡ್ಯ ಧವನ್ ಹಿಡಿದ ಕ್ಯಾಚ್ನಿಂದಾಗಿ ನಿರಾಳರಾದರು. ತಕ್ಷಣವೇ ತಾವು ಇದ್ದಲ್ಲಿಂದಲೇ ಪಾಂಡ್ಯ ಧವನ್ಗೆ ಕೈಮುಗಿದು ನಮಸ್ಕರಿಸಿದರು. ಮಾತ್ರವಲ್ಲ ಮೈದಾನಕ್ಕೆ ಬಿದ್ದು ದೀರ್ಘದಂಡ ನಮಸ್ಕಾರವನ್ನೂ ಮಾಡಿದರು. ಬಳಿಕ ನಾಯಕ ಕೊಹ್ಲಿ ಕೂಡ ಪಾಂಡ್ಯರನ್ನು ನಗುತ್ತಲೇ ಅಪ್ಪಿಕೊಂಡರು.