ಪ್ರಸಕ್ತ ಸಾಲಿನ ಟಿ20 ವಿಶ್ವಕಪ್ನಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿತು. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಸ್ಥಿರ ಪ್ರದರ್ಶನ ನೀಡಿದ ಸೂರ್ಯಕುಮಾರ್ ಯಾದವ್ ಪಡೆ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತು. ತವರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದ ಬ್ಲ್ಯೂ ಬಾಯ್ಸ್ ಸಂಭ್ರಮ ಮೈದಾನದಲ್ಲಿ ಮನೆ ಮಾಡಿತ್ತು. ದೇಶಕ್ಕೆ ಕೀರ್ತಿ ತಂದ ಆಟಗಾರರನ್ನು ಅಭಿಮಾನಿಗಳು ಸಹ ಕೊಂಡಾಡಿದರು. ಇದೇ ವೇಳೆ ಆಟಗಾರರು ತ್ರಿವರ್ಣ ಧ್ವಜವನ್ನು ಹಿಡಿದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳಿಂದ ಮಣಿಸಿದ ಭಾರತ ತಂಡ ಪ್ರಶಸ್ತಿ ಎತ್ತಿ ಸಂಭ್ರಮಿಸಿತ್ತು. ಈ ವೇಳೆ ಹಲವು ಆಟಗಾರರು ತ್ರಿವರ್ಣ ಧ್ವಜವನ್ನು ಮೈಮೇಲೆ ಹಾಕಿಕೊಂಡು ಸಂಭ್ರಮಿಸಿದರು. ವಿಶ್ವಕಪ್ ಗೆಲುವಿನ ಸಮಯದಲ್ಲಿ ಭಾರತದ ಧ್ವಜಕ್ಕೆ ಅಗೌರವ ತೋರಿದ ಆರೋಪದ ಮೇಲೆ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಿರುದ್ಧ ಈಗ ದೂರು ದಾಖಲಾಗಿದೆ.

ವಕೀಲ ವಾಜೇದ್ ಖಾನ್ ಅವರು ಪುಣೆಯ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಹಾರ್ದಿಕ್ ಪಾಂಡ್ಯ ಅವರ ವಿರುದ್ಧ ದೂರನ್ನು ನೀಡಿದ್ದಾರೆ. ದೂರಿನಲ್ಲಿ ವಾಜೇದ್ ಖಾನ್ ಅವರು ಹಾರ್ದಿಕ್ ಪಾಂಡ್ಯ ಧ್ವಜವನ್ನು ಮೈಮೇಲೆ ಹಾಕಿಕೊಂಡು ಗೆಳತಿಯೊಂದಿಗೆ ಸಂಭ್ರಮಿಸುವಾಗ ನೃತ್ಯ ಮಾಡಿದ್ದಾರೆ.ಅಲ್ಲದೆ ಧ್ವಜವನ್ನು ತಮ್ಮ ದೇಹದ ಸುತ್ತ ಸುತ್ತಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಸುದ್ದಿ ಸಂಸ್ಥೆ ಎಎನ್ಐಗೆ ವಕೀಲ ವಾಜೇದ್ ಖಾನ್ ಹೇಳಿಕೆ ನೀಡಿದ್ದಾರೆ. 1971 ರ ರಾಷ್ಟ್ರೀಯ ಧ್ವಜ ಕಾಯ್ದೆಯ ಸೆಕ್ಷನ್ 2 ರ ಪ್ರಕಾರ, ನಾವು ರಾಷ್ಟ್ರಧ್ವಜವನ್ನು ಗೌರವಿಸಬೇಕು. ಹಾರ್ದಿಕ್ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ಕಳೆದು ಹೋಗಿದ್ದರು. ಇದೇ ವೇಳೆ ಅವರು ತಮ್ಮ ಗೆಳತಿಯೊಂದಿಗೆ ರಾಷ್ಟ್ರ ಧ್ವಜವನ್ನು ಹೊದ್ದುಕೊಂಡು ಮಲಗಿದ್ದರು. ಇದು ಧ್ವಜಕ್ಕೆ ಮಾಡಿದ ಅವಮಾನ ಎಂದು ತಿಳಿಸಿದರು.
ಆರಂಭದಲ್ಲಿ ಈ ಪ್ರಕರಣದ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಆರಂಭದಲ್ಲಿ ನಿರಾಕರಿಸಿದರು. ಬಳಿಕ ರಾಷ್ಟ್ರಧ್ವಜ ಇಡೀ ದೇಶದ ಸಂಕೇತವಾಗಿದೆ ಮತ್ತು ನಾವು ಶಿವಾಜಿ ನಗರ ಪೊಲೀಸರಿಗೆ ದೂರು ನೀಡಬಹುದು ಎಂದು ತಿಳಿಸಿದೆ. ಬಳಿಕ ಅವರು ನನ್ನ ದೂರನ್ನು ದಾಖಲಿಸಿಕೊಂಡರು ಎಂದು ವಕೀಲ ವಾಜೇದ್ ಖಾನ್ ತಿಳಿಸಿದ್ದಾರೆ.

ದೂರುದಾರರ ಪ್ರಕಾರ, ಈ ಕಾಯ್ದೆಯಡಿ ಅಪರಾಧ ಸಾಬೀತಾದರೆ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ, ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಸದ್ಯ ಪೊಲೀಸರು ದೂರು ಸ್ವೀಕರಿಸಿದ್ದು, ಈ ಬಗ್ಗೆ ತನಿಖೆ ನಡೆಸಬೇಕಿದೆ. ಹಾರ್ದಿಕ್ ಪಾಂಡ್ಯ ಆಡಿದ 9 ಪಂದ್ಯಗಳಲ್ಲಿ 217 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಅರ್ಧಶತಕಗಳು ಸೇರಿವೆ. ಈ ವೇಳೆ 9 ವಿಕೆಟ್ ಪಡೆದಿದ್ದಾರೆ.
32 ವರ್ಷದ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರು. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತಂಡಕ್ಕೆ ಆಧಾರವಾಗಿರುವ ಹಾರ್ದಿಕ್ ಟಿ20 ವಿಶ್ವಕಪ್ನಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸಿದ ಆಟಗಾರ. ಚೆನ್ನೈನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಇವರು ನೀಡಿದ ಅಮೋಘ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇನ್ನು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. 19ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಕೆಕೆಆರ್ ವಿರುದ್ಧ ಮಾರ್ಚ್ 29 ರಂದು ಕಣಕ್ಕೆ ಇಳಿಯಲಿದೆ.