ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವಿಶ್ವಕಪ್ನಲ್ಲಿ ಗಾಯಕ್ಕೆ ತುತ್ತಾಗಿದ್ದು ಮುಂಬರುವ ಎರಡು ಪಂದ್ಯಗಳಿಗೆ ಅಲಭ್ಯವಾಗುವುದು ಖಚಿತವಾಗಿದೆ. ತಂಡದ ಸಂಯೋಜನೆಯಲ್ಲಿ ಪ್ರಮುಖ ಪಾತ್ರವಾಹಿಸುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆದಷ್ಟು ಶೀಘ್ರವಾಗಿ ತಂಡಕ್ಕೆ ಮರಳಲಿ ಎನ್ನುವುದು ಎಲ್ಲರ ಬಯಕೆ.
ಆದರೆ ಈಗ ದೊರೆಯುತ್ತಿರುವ ಮಾಹಿತಿಯ ಪ್ರಕಾರ ಹಾರ್ದಿಕ್ ಪಾಂಡ್ಯ ಗ್ರೇಡ್ 1 ಲಿಗಮೆಂಟ್ ಟಿಯರ್ಗೆ ಒಳಗಾಗಿದ್ದಾರೆ. ಹೀಗಾಗಿ ಹಾರ್ದಿಕ್ ಕಮ್ಬ್ಯಾಕ್ ನಿರೀಕ್ಷೆಗಿಂತ ತಡವಾಗುತ್ತಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ಕೈಬಿಟ್ಟು ಅಕ್ಷರ್ ಪಟೇಲ್ ಅವರನ್ನು ಟೀಮ್ ಇಂಡಿಯಾದ 15ರ ಬಳಗಕ್ಕೆ ಸೇರ್ಪಡೆಗೊಳಿಸಲಿದ್ದಾರೆ ಎನ್ನುವ ಬಗ್ಗೆಯೂ ಚರ್ಚೆಗಳು ನಡೆದಿದೆ. ಈ ಚರ್ಚೆಗೆ ಇದೀಗ ಬಿಸಿಸಿಐ ಸ್ಪಷ್ಟನೆಯನ್ನು ನೀಡಿದೆ.

ಬಿಸಿಸಿಐನ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ವರದಿಯ ಪ್ರಕಾರ ಬಿಸಿಸಿಐ ಹಾರ್ದಿಕ್ ಪಾಂಡ್ಯ ಚೇತರಿಕೆಯವರೆಗೆ ಕಾಯಲು ಸಿದ್ಧವಾಗಿದ್ದು ತಂಡದಿಂದ ಅವರನ್ನು ಕೈಬಿಡದಿರಲಿ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾರ್ದಿಕ್ ಬೆಂಗಳೂರಿನ ಎನ್ಸಿಎನಲ್ಲಿದ್ದು ಕೊಂಡು ಶೀಘ್ರ ಚೇತರಿಕೆಯ ಹಾದಿಯಲ್ಲಿದ್ದಾರೆ ಎನ್ನಲಾಗಿದೆ.
"ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ನಿತಿನ್ ಪಟೇಲ್ ಅವರ ನೇತೃತ್ವದ ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ. ಆದರೆ ಆರಂಭಿಕ ಹಂತದಲ್ಲಿ ಅಂದುಕೊಂಡದ್ದಕ್ಕಿಂತ ಗಾಯ ಹೆಚ್ಚು ಗಂಭೀರವಾಗಿದೆ. ಸಣ್ಣ ಪ್ರಮಾಣದಲ್ಲಿ ಅವರು ಲಿಗಮೆಂಟ್ ಟಿಯರ್ಗೆ ಒಳಗಾದಂತೆ ಕಾಣಿಸುತ್ತಿದ್ದು ಚೇತರಿಕೆಗೆ ಕನಿಷ್ಠ ಎರಡು ವಾರಗಳ ಅಗತ್ಯವಿದೆ"
"ಅವರ ಗಾಯ ಚೇತರಿಕೆ ಕಾಣದೆ ಎನ್ಸಿಎ ಅವರನ್ನು ಬಿಟ್ಟುಕೊಡುವುದಿಲ್ಲ. ಶೀಘ್ರದಲ್ಲೇ ಅವರನ್ನು ಪಿಚ್ಗೆ ಮರಳಿಸುವ ಭರವಸೆಯಿದೆ ಎಂದು ವೈದ್ಯಕೀಯ ತಂಡ ಟೀಮ್ ಮ್ಯಾನೇಜ್ಮೆಂಟ್ಗೆ ಭರವಸೆ ನೀಡಿದೆ. ತಂಡ ಕೂಡ ಬದಲಿ ಆಟಗಾರನನ್ನು ಬಯಸದೆ ಹಾರ್ದಿಕ್ ಪಾಂಡ್ಯ ಅವರಿಗಾಗಿ ಕಾಯಲು ಸಿದ್ಧವಿದೆ" ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿದೆ.
ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಹೊರಗುಳಿದಿದ್ದರು. ಇದೀಗಮುಂದಿನ ಭಾನುವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಹಾಗೂ ಅದಾದ ಬಳಿಕದ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಅಲಭ್ಯವಾಗಲಿದ್ದಾರೆ ಎಂದು ಖಚಿತವಾಗಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿದಿದ್ದ ಸೂರ್ಯಕುಮಾರ್ ಯಾದವ್ ಹಾಗೂ ಶಮಿ ಆಡುವ ಬಳಗದಲ್ಲಿ ಮುಂದುವರಿಯುವುದು ಖಚಿತವಾಗಿದೆ.