ಇದೇ ಜೂನ್ನಲ್ಲಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿ-ಆತಿಥ್ಯದಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ರೋಹಿತ್ ಶರ್ಮಾ ನಾಯಕತ್ವದ 15 ಸದಸ್ಯರ ಭಾರತ ತಂಡವನ್ನು ಮಂಗಳವಾರ, ಏಪ್ರಿಲ್ 30ರಂದು ಪ್ರಕಟಿಸಿದೆ.
ತಂಡದಲ್ಲಿ ನಿರೀಕ್ಷಿತವಾಗಿ ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಶಿವಂ ದುಬೆ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್ದೀಪ್ ಸಿಂಗ್ ಸೇರಿದಂತೆ ಕೆಲವು ಆಟಗಾರರು ಆಯ್ಕೆಯಾಗಿದ್ದಾರೆ. ಅಲ್ಲದೆ, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಹಾಲ್ ಮೊಹಮ್ಮದ್ ಸಿರಾಜ್ನಂತಹ ಆಟಗಾರರು ಅನಿರೀಕ್ಷಿತವಾಗಿ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇನ್ನು ಕೆಎಲ್ ರಾಹುಲ್, ಶುಭ್ಮನ್ ಗಿಲ್, ರಿಂಕು ಸಿಂಗ್, ರುತುರಾಜ್ ಗಾಯಕ್ವಾಡ್, ಸಂದೀಪ್ ಶರ್ಮಾ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಪ್ರಮುಖ ಆಟಗಾರರನ್ನು ಟಿ20 ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ.
ಇದೇ ವೇಳೆ 2024ರ ಟಿ20 ವಿಶ್ವಕಪ್ಗೆ ಮುಂಚಿತವಾಗಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಫಾರ್ಮ್ ಬಗ್ಗೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಪ್ರಶ್ನೆ ಮಾಡಿದ್ದಾರೆ.
2024ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಆಡಿದ 10 ಪಂದ್ಯಗಳಲ್ಲಿ 21.88ರ ಸರಾಸರಿ ಮತ್ತು 150.38ರ ಸ್ಟ್ರೈಕ್-ರೇಟ್ನಲ್ಲಿ ಕೇವಲ 197 ರನ್ ಗಳಿಸಿದ್ದಾರೆ.
ಬೌಲಿಂಗ್ನಲ್ಲಿ 11ರ ಎಕಾನಮಿ ದರದಲ್ಲಿ ರನ್ ನೀಡಿ ಕೇವಲ 6 ವಿಕೆಟ್ಗಳನ್ನು ಪಡೆಯುವ ಮೂಲಕ ಹಾರ್ದಿಕ್ ಪಾಂಡ್ಯ ಕಳಪೆ ಫಾರ್ಮ್ನಲ್ಲಿದ್ದಾರೆ. ಹೆಚ್ಚುವರಿಯಾಗಿ, ಅವರು ತಮ್ಮ ಓವರ್ಗಳ ಸಂಪೂರ್ಣ ಕೋಟಾವನ್ನು ಸಹ ಪೂರ್ಣಗೊಳಿಸಿಲ್ಲ.
ಜೂನ್ 1ರಿಂದ 29ರವರೆಗೆ ನಡೆಯಲಿರುವ 20-ರಾಷ್ಟ್ರಗಳ ಪಂದ್ಯಾವಳಿಯಲ್ಲಿ ಭಾರತ ತಂಡ ಭಾಗವಹಿಸುವ ಮೊದಲು ಹಾರ್ದಿಕ್ ಪಾಂಡ್ಯ ತನ್ನ ಆಟವನ್ನು ಬೇಗನೆ ಹೆಚ್ಚಿಸಿಕೊಳ್ಳಬೇಕಿದೆ ಎಂದು ಮ್ಯಾಥ್ಯೂ ಹೇಡನ್ ಅಭಿಪ್ರಾಯಪಟ್ಟಿದ್ದಾರೆ.
"ಈ ಸಂದರ್ಭದಲ್ಲಿ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ದೊಡ್ಡ ಪ್ರಶ್ನಾರ್ಥಕ ಚಿಹ್ನೆ. ವಾಸ್ತವವಾಗಿ, ಅವರು ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಫಾರ್ಮ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಇನ್ನು ಪ್ರಮುಖ ಆಲ್ರೌಂಡರ್ ಆಗಿ ಭಾರತ ತಂಡಕ್ಕಾಗಿ ಏನು ಮಾಡುತ್ತಾರೆ," ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಪ್ರಶ್ನಿಸಿದ್ದಾರೆ.

"ಹಾರ್ದಿಕ್ ಪಾಂಡ್ಯ ಪೂರ್ಣ ಕೋಟಾ ಬೌಲಿಂಗ್ ಮಾಡುತ್ತಿಲ್ಲ ಮತ್ತು ಅವರು ಮೊದಲನೆಯದಾಗಿ ಬ್ಯಾಟಿಂಗ್ ಫಾರ್ಮ್ನಲ್ಲಿಲ್ಲ. ಅಲ್ಲದೆ ಮೊದಲು ಬೌಲಿಂಗ್ನಲ್ಲಿ ಹೆಚ್ಚಿನ ಉತ್ತಮ ಪ್ರದರ್ಶನ ನೀಡಬೇಕು ಮತ್ತು ಸಮಯ ಕಳೆದಂತೆ ತಮ್ಮ ಬ್ಯಾಟಿಂಗ್ ಬಗ್ಗೆ ಚಿಂತಿಸಬೇಕು. ಅವರು ಸಂಪೂರ್ಣ ಓವರ್ಗಳ ಕೋಟಾವನ್ನು ಬೌಲಿಂಗ್ ಮಾಡಬೇಕಾಗಿದೆ," ಎಂದು ಮ್ಯಾಥ್ಯೂ ಹೇಡನ್ ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದರು.
ಮಂಗಳವಾರ, ಏಪ್ರಿಲ್ 30ರಂದು ಬಿಸಿಸಿಐ ಘೋಷಿಸಿದ 15 ಸದಸ್ಯರ ಭಾರತೀಯ ತಂಡದಲ್ಲಿ ರೋಹಿತ್ ಶರ್ಮಾ ನಾಯಕನಾಗಿದ್ದರೆ, ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಹೆಸರಿಸಿತು.
ಮುಂಬೈ ಇಂಡಿಯನ್ಸ್ ತಂಡದ ಎಲ್ಲ ಆಟಗಾರರೂ ಸ್ಪರ್ಧೆಯಿಂದ ಹೊರಗುಳಿದಿರುವುದರಿಂದ, ಟಿ20 ವಿಶ್ವಕಪ್ಗೆ ಹೋಗುವ ಆಟಗಾರರು ವಿಶ್ವಕಪ್ಗೆ ಮೊದಲು ಸ್ವಲ್ಪ ಫಾರ್ಮ್ ಅನ್ನು ಪಡೆಯಲು ನೋಡಬೇಕು ಎಂದು ವೆಸ್ಟ್ ಇಂಡೀಸ್ ಲೆಜೆಂಡ್ ಬ್ರಿಯಾನ್ ಲಾರಾ ಹೇಳಿದ್ದಾರೆ.
"ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಹೋಗುವ ಆಟಗಾರರು ಸ್ವಲ್ಪ ಫಾರ್ಮ್ ಕಂಡುಕೊಳ್ಳಬೇಕು. ಮುಂಬೈ ಇಂಡಿಯನ್ಸ್ ಆಟಗಾರರು ಸದ್ಯ ಹೆಚ್ಚಿನ ಸ್ವಾತಂತ್ರ್ಯದೊಂದಿಗೆ ಆಡಬಹುದು. ಅವರು ತಾಂತ್ರಿಕವಾಗಿ 2024ರ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಅವರು ತಮ್ಮ ಉಳಿದ ಪಂದ್ಯಗಳಲ್ಲಿ ಉತ್ತಮ ಫಾರ್ಮ್ ಅನ್ನು ಕಂಡುಕೊಳ್ಳಬೇಕು," ಎಂದು ಬ್ರಿಯಾನ್ ಲಾರಾ ತಿಳಿಸಿದರು.
ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಜೂನ್ 5ರಂದು ಐರ್ಲೆಂಡ್ ವಿರುದ್ಧ ಭಾರತ ತಂಡ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲು ಸಜ್ಜಾಗಿದೆ.