ಜುಲೈ 9 ಮಂಗಳವಾರ, ಭಾರತ ತಂಡವು ಜುಲೈ 27 ರಿಂದ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಸದ್ಯ ಟೀಮ್ ಇಂಡಿಯಾ 5 ಟಿ20 ಪಂದ್ಯಗಳ ಸರಣಿಗಾಗಿ ಜಿಂಬಾಬ್ವೆ ಪ್ರವಾಸದಲ್ಲಿದೆ.
ಈಗಾಗಲೇ 2 ಪಂದ್ಯಗಳು ನಡೆದಿದ್ದು, ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು ಸಮಬಲ ಸಾಧಿಸಿವೆ. ಇನ್ನುಳಿದಿರುವ ಮೂರು ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿವು ತಂಡ ಸರಣಿ ಕೈ ವಶಪಡಿಸಿಕೊಳ್ಳಲಿದೆ.

ಇದಾದ ಬಳಿಕ ಶ್ರೀಲಂಕಾ ಪ್ರವಾಸಕ್ಕೆ ತೆರಳುವ ಟೀಮ್ ಇಂಡಿಯಾವನ್ನು ಯಾರು ಮುನ್ನೆಡೆಸುತ್ತಾರೆ ಎಂಬುದು ಸಂದ್ಯಕ್ಕೆ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಏಕೆಂದರೆ ಟಿ20 ವಿಶ್ವಕಪ್ ಗೆಲುವಿನ ಬಳಿಕ ಹಿರಿಯ ಅನುಭವಿ ಆಟಗಾರರು ವಿಶ್ರಾಂತಿ ಪಡೆಯುತ್ತಿದ್ದಾರೆ.
ಹೀಗಾಗಿ ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಣಕ್ಕೀಳಿಯುವುದು ಬಹುತೇಕ ಡೌಟ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾವನ್ನು ಯಾರು ಮುನ್ನೆಡೆಸುತ್ತಾರೆ ಎಂಬುದು ಪ್ರಶ್ನೆ ಆಗಿದೆ.
ಜಿಂಬಾಬ್ವೆ ಪ್ರವಾಸದಲ್ಲಿರುವ ಭಾರತ ತಂಡವನ್ನು ಮೊದಲ ಬಾರಿಗೆ ಯುವ ಬ್ಯಾಟರ್ ಶುಭಮನ್ ಗಿಲ್ ಅವರು ನಾಯಕರಾಗಿ ಮುನ್ನೆಡೆಸುತ್ತಿದ್ದಾರೆ. ಇತ್ತ ಟಿ20 ವಿಶ್ವಕಪ್ ಭಾರತ ತಂಡಕ್ಕೆ ಆಯ್ಕೆಯಾಗದೆ ಉಳಿದಿದ್ದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಕೆಎಲ್ ರಾಹುಲ್ ಶ್ರೀಲಂಕಾ ಪ್ರವಾಸಕ್ಕೆ ಮರಳುವ ಸಾಧ್ಯತೆಗಳು ಹೆಚ್ಚಿವೆ.
ಇನ್ನೊಂದೆಡೆ ಟಿ20 ವಿಶ್ವಕಪ್ ಚಾಂಪಿಯನ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಶ್ರೀಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಈ ರೀತಿಯ ಸನ್ನಿವೇಶದಲ್ಲಿ ಟೀಮ್ ಇಂಡಿಯಾ ನಾಯಕತ್ವಕ್ಕೆ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಪೈಪೋಟಿ ನಡೆಸಲಿದ್ದಾರೆ.
ಈಗಾಗಲೇ ಹಲವು ಸರಣಿಗಳಲ್ಲಿ ಕುಚುಚು ಗೆಳೆಯರು ಟೀಮ್ ಇಂಡಿಯಾವನ್ನು ಮುನ್ನೆಡೆಸಿರುವ ಅನುಭವಿದೆ. ಹೀಗಾಗಿ ಅನುಭವ ಕಡಿಮೆ ಇರುವ ಕಾರಣ ಶುಭಮನ್ ಗಿಲ್ ಅವರಿಗೆ ಈ ಪ್ರವಾಸದಲ್ಲಿ ನಾಯಕತ್ವ ತಪ್ಪುವ ಸಾಧ್ಯತೆಗಳು ಹೆಚ್ಚಿವೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಎಲ್ಲಾ ಮೂರು ಫಾರ್ಮ್ಯಾಟ್ಗಳಲ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದಾರೆ. 2022ರ ಟಿ20 ವಿಶ್ವಕಪ್ ನಂತರ, ಹಾರ್ದಿಕ್ ಪಾಂಡ್ಯ ನಿರಂತರವಾಗಿ ಟಿ20 ಸ್ವರೂಪದಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಆದರೆ 2023ರ ಏಕದಿನ ವಿಶ್ವಕಪ್ನಲ್ಲಿ ಹಾರ್ದಿಕ್ ಗಾಯಗೊಂಡ ಬಳಿಕ ಉಪನಾಯಕನಾಗಿ ಟೀಮ್ ಇಂಡಿಯಾದಲ್ಲಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಅಥವಾ ಕೆಎಲ್ ರಾಹುಲ್ ನಾಯಕತ್ವದ ಜವಾಬ್ದಾರಿಯನ್ನು ನಿಭಾಯಿಸಬಹುದು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ಈ ಸರಣಿಯಿಂದಲ್ಲೂ ವಿಶ್ರಾಂತಿ ನೀಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕುಚುಕು ಗೆಳಯರಿಗೆ ನಾಯಕತ್ವದ ಅವಕಾಶ ಸಿಗಬಹುದು.
ಶ್ರೀಲಂಕಾ ವಿರುದ್ಧ ಭಾರತ ಮೊದಲು 3 ಟಿ20 ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ 3 ಏಕದಿನ ಪಂದ್ಯಗಳ ಸರಣಿಯೂ ನಡೆಯಲಿದೆ.
ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾರ್ದಿಕ್ ಪಾಂಡ್ಯ ಅಥವಾ ಕೆಎಲ್ ರಾಹುಲ್ ಅವರನ್ನು ತಂಡದ ನಾಯಕರನ್ನಾಗಿ ಮಾಡಬಹುದು. ಇದು ಸಾಧ್ಯವಾದರೆ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಹಾಗು ಏಕದಿನ ಸರಣಿಗೆ ಕೆಎಲ್ ರಾಹುಲ್ ಅವರಿಗೆ ನಾಯಕತ್ವವನ್ನು ವಹಿಸಬಹುದು.