
ನವದೆಹಲಿ, ಏಪ್ರಿಲ್ 20: ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಆರಂಭಿಕ ಆಟಗಾರ ಕೆಎಲ್ ರಾಹುಲ್ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತಲಾ 20 ಲಕ್ಷ ರೂ.ಗಳ ದಂಡ ವಿಧಿಸಿದೆ. ಕಾಫೀ ವಿತ್ ಕರಣ್ ಟಿವಿ ಟಾಕ್ ಶೋನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಇಬ್ಬರೂ ದಂಡ ಕಟ್ಟಲಿದ್ದಾರೆ.
ಬಿಸಿಸಿಐ ಪ್ರಕಟಿಸಿರುವ ವರದಿಯಲ್ಲಿ, 'ಕರ್ತವ್ಯದಲ್ಲಿ ನಿರತರಾಗಿದ್ದಾಗ ಪ್ರಾಣ ತ್ಯಾಗ ಮಾಡಿದ ಅರೆ ಸೈನಿಕ ಪಡೆಗಳ 10 ಕಾನ್ಸ್ಟೇಬಲ್ಗಳ ಮಡದಿಯರಿಗೆ ತಲಾ 1 ಲಕ್ಷ ರೂ.ನಂತೆ ಇಬ್ಬರೂ ತಲಾ 10 ಲಕ್ಷ ರೂ. ನೀಡಬೇಕು. ಜೊತೆಗೆ ದೇಶದಲ್ಲಿ ಅಂಧರ ಕ್ರಿಕೆಟ್ನ ಪ್ರಚಾರಕ್ಕೆ ಇಬ್ಬರೂ ತಲಾ 10 ಲಕ್ಷ ರೂ. ನೀಡಬೇಕೆಂದು ಓಂಬುಡ್ಸ್ಮನ್ ಡಿಕೆ ಜೈನ್ ನಿರ್ದೇಶಿಸಿದ್ದಾರೆ' ಎಂದು ತಿಳಿಸಿದೆ.
'ಒಂದು ವೇಳೆ ಆಟಗಾರರು ನಾಲ್ಕು ವಾರದೊಳಗೆ ಈ ಹಣವನ್ನು ನೀಡದಿದ್ದಲ್ಲಿ, ಪಂದ್ಯಗಳ ಸಂಭಾವನೆಯಾಗಿ ಆಟಗಾರರಿಗೆ ನೀಡುವ ಹಣದಿಂದ ದಂಡವನ್ನು ಮುರಿದುಕೊಳ್ಳಲಾಗುವುದು' ಎಂದು ಡಿಕೆ ಜೈನ್ ಸಹಿ ಸಹಿತ ಪ್ರಕಟಿಸಿರುವ ಬಿಸಿಸಿಐ ವರದಿಯಲ್ಲಿ ಹೇಳಲಾಗಿದೆ.