ನವದೆಹಲಿ, ಅಕ್ಟೋಬರ್ 01: ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಆಸೆ ಇರಿಸಿಕೊಂಡಿದ್ದರು. ಆದರೆ ಹಾರ್ದಿಕ್ ರನ್ನು ಕಾಡುತ್ತಿರುವ ಕೆಳ ಬೆನ್ನುಹುರಿ ನೋವು ತೀವ್ರವಾಗಿ ಬಾಧಿಸುತ್ತಿದ್ದು, ದೀರ್ಘಕಾಲ ಮೈದಾನದಿಂದ ಹೊರಗುಳಿಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
"ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೂ ಹಾರ್ದಿಕ್ ಅಲಭ್ಯರಾಗುತ್ತಿದ್ದಾರೆ. ಹಾರ್ದಿಕ್ ಅವರಿಗೆ ನೋವು ಮತ್ತೆ ಉಲ್ಭಣಿಸಿರುವುದರಿಂದ ಶೀಘ್ರದಲ್ಲೇ ಯುನೈಟೆಡ್ ಕಿಂಗ್ಡಮ್ ಗೆ ತೆರಳಿ ಚಿಕಿತ್ಸೆ ಪಡೆಯಲಿದ್ದಾರೆ" ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಕಳೆದ ಸೆಪ್ಟೆಂಬರ್ ನಲ್ಲಿ ದುಬೈನಲ್ಲಿ ನಡೆದ ಏಷ್ಯಾ ಕಪ್ ಪಂದ್ಯಾವಳಿ ವೇಳೆ ಹಾರ್ದಿಕ್ ಪಾಂಡ್ಯಗೆ ಮೊದಲಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆ, ವಿಶ್ರಾಂತಿ ಬಳಿಕ ಮತ್ತೆ ಮೈದಾನಕ್ಕಿಳಿಯುವ ಉತ್ಸಾಹದಲ್ಲಿದ್ದ ಬರೋಡಾದ ಆಲ್ ರೌಂಡರ್ ಗೆ ಮತ್ತೆ ಹಿನ್ನಡೆಯಾಗಿದೆ.
ದಕ್ಷಿಣ ಆಫ್ರಿಕಾ ಸರಣಿಯಿಂದ ಪ್ರಮುಖ ವೇಗಿ ಜಸ್ ಪ್ರೀತ್ ಬೂಮ್ರಾ ಅವರು ಹೊರಗುಳಿಯುವಂತಾಗಿದ್ದೇ ಭಾರತಕ್ಕೆ ಆಘಾತ ಎಂದುಕೊಂಡರೆ, ಈಗ ಹಾರ್ದಿಕ್ ಪಾಂಡ್ಯಗೆ ಉಂಟಾಗಿರುವ ಪರಿಸ್ಥಿತಿಯಿಂದ ಚಿಂತೆ ಇನ್ನಷ್ಟು ಹೆಚ್ಚಿದೆ.
"ಒಂದು ವೇಳೆ ಯುಕೆಯಲ್ಲಿ ಹಾರ್ದಿಕ್ ಅವರಿಗೆ ಸರಿಯಾದ ಚಿಕಿತ್ಸೆ ಸಿಗದಿದ್ದರೆ ಅಥವಾ ಅವರ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಅವರನ್ನು ಜರ್ಮನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಲಾಗುವುದು, ಬೆನ್ನು ಹುರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಬೇರೆ ಮಾರ್ಗವಿಲ್ಲ, ಸರ್ಜರಿ ನಂತರ ಕನಿಷ್ಠ 5 ತಿಂಗಳು ವಿಶ್ರಾಂತಿ ಬೇಕಾಗುತ್ತದೆ" ಎಂದು ಹಾರ್ದಿಕ್ ಅವರ ಆಪ್ತ ವೈದ್ಯರು ಪ್ರತಿಕ್ರಿಯಿಸಿದ್ದಾರೆ.
ಗಾಯದ ಸಮಸ್ಯೆಯಿಂದ ಟೆಸ್ಟ್ ತಂಡಕ್ಕೆ ಹಾರ್ದಿಕ್ ರನ್ನು ಪರಿಗಣಿಸಿಲ್ಲ, ವಿಜಯ್ ಹಜಾರೆ ಟ್ರೋಫಿಯಲ್ಲಿ ಬರೋಡಾ ಪರ ಆಡುತ್ತಿಲ್ಲ. 2020ರ ಐಪಿಎಲ್ ನಲ್ಲಿ ಬಹುಶಃ ಆಡುವ ನಿರೀಕ್ಷೆಯಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವ ಟಿ20ರಲ್ಲಿ ಆಡುವುದು ಹಾರ್ದಿಕ್ ಪಾಂಡ್ಯ ಮುಖ್ಯ ಗುರಿಯಾಗಲಿದೆ.
25 ವರ್ಷ ವಯಸ್ಸಿನ ಪಾಂಡ್ಯ 11 ಟೆಸ್ಟ್ ಪಂದ್ಯಗಳಲ್ಲಿ 17 ವಿಕೆಟ್ ಪಡೆದು, 532ರನ್ ಗಳಿಸಿದ್ದಾರೆ. 54 ಏಕದಿನ ಪಂದ್ಯಗಳಿಂದ 937ರನ್ ಗಳಿಸಿದ್ದು, 54 ವಿಕೆಟ್ ಗಳಿಸಿದ್ದಾರೆ. 40 ಟಿ20 ಪಂದ್ಯಗಳಿಂದ 310ರನ್ ಹಾಗೂ 38 ವಿಕೆಟ್ ಕಬಳಿಸಿದ್ದಾರೆ.