ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರ್ಷ ಅಮೋಘ ಪ್ರದರ್ಶನ ನೀಡುತ್ತಿದೆ. 17 ವರ್ಷಗಳ ಬಿಳಿಕ ಚೆನ್ನೈನಲ್ಲಿ ಸಿಎಸ್ಕೆ ತಂಡವನ್ನು ಮಣಿಸಿದ್ದ ಆರ್ಸಿಬಿ, 10 ವರ್ಷಗಳ ಬಳಿಕ ಮುಂಬೈನಲ್ಲಿ ಆತಿಥೇಯ ತಂಡವನ್ನು ಸೋಲಿಸಿ ಅಬ್ಬರಿಸಿದೆ. ಮುಂಬೈ ಇಂಡಿಯನ್ಸ್ 12 ರನ್ಗಳ ಸೋಲು ಕಂಡು ನಿರಾಸೆ ಅನುಭವಿಸಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ನಾಯಕ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಆಟದ ಪ್ರದರ್ಶನ ನೀಡಿ ಗಮನ ಸೆಳೆದರು. ಪಂದ್ಯದ ಬಳಿಕ ಈ ಪಂದ್ಯದ ಬಗ್ಗೆ ಹಲವು ಇಂಟ್ರಸ್ಟಿಂಗ್ ವಿಚಾರಗಳ ಬಗ್ಗೆ ಹೇಳಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 221 ರನ್ ಸೇರಿಸಿತು. ವಿರಾಟ್ ಕೊಹ್ಲಿ ಹಾಗೂ ರಜತ್ ಪಟಿದಾರ್ ಅರ್ಧಶತಕದ ಬಲದಿಂದ ಬಿಗ್ ಸ್ಕೋರ್ ಕಲೆ ಹಾಕಲು ಸಾಧ್ಯವಾಯಿತು. ಆರ್ಸಿಬಿ ನೀಡಿದ್ದ ಬೃಹತ್ ಮೊತ್ತವನ್ನು ಹಿಂಬಾಲಿಸಿದ ಮುಂಬೈ 209 ರನ್ಗಳನ್ನು ಮಾತ್ರ ಕಲೆ ಹಾಕಲು ಸಾಧ್ಯವಾಯಿತು. ಈ ವೇಳೆ ತಿಲಕ್ ವರ್ಮಾ 29 ಎಸೆತಗಳಲ್ಲಿ 56 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 15 ಎಸೆತಗಳಲ್ಲಿ 42 ರನ್ ಸಿಡಿಸಿ ಮಿಂಚಿದರು. ಸೋಲಿನ ಬಗ್ಗೆ ಹಾರ್ದಿಕ್ ಬೇಸರ ವ್ಯಕ್ತ ಪಡಿಸಿದರು.

ಪ್ರಸಕ್ತ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ನೀಡುತ್ತಿರುವ ಪ್ರದರ್ಶನ ಹಾರ್ದಿಕ್ ಪಾಂಡ್ಯ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈ ಪಂದ್ಯ ಸೋತ ಬಳಿಕ ಕೃನಾಲ್, ತಮ್ಮ ಹಾರ್ದಿಕ್ರನ್ನು ತಬ್ಬಿಕೊಂಡು ಸಾಂತ್ವಾನ ಹೇಳಿದರು. ಇದೇ ವೇಳೆ ಮಾತನಾಡಿದ ಅವರು, ತಂಡದ ಬ್ಯಾಟಿಂಗ್ ಉತ್ತಮವಾಗಿತ್ತು. ನಾವು ಎರಡು ಬಿಗ್ ಶಾಟ್ಗಳನ್ನು ಬಾರಿಸುವಲ್ಲಿ ವಿಫಲರಾಗಿದ್ದೇವೆ. ಈ ಪಿಚ್ನಲ್ಲಿ ಬೌಲರ್ಗಳಿಗೆ ಬೌಲ್ ಮಾಡುವುದು ಕಷ್ಟವಾಗಿತ್ತು. ಇನ್ನು 12 ರನ್ಗಳು ಕಡಿಮೆ ಆಗಿದ್ದರೇ ಫಲಿತಾಂಶವೇ ಬೇರೆಯದ್ದಾಗುತ್ತಿತ್ತು ಎಂದಿದ್ದಾರೆ.
ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಲಭ್ಯರಿದ್ದರು. ಹೀಗಾಗಿ ನಮನ್ ಧೀರ್ ಅವರ ಕ್ರಮಾಂಕದಲ್ಲಿ ವ್ಯತ್ಯಾಸ ಆಯಿತು. ಕಳೆದ ಪಂದ್ಯದ ಬಳಿಕ ತಿಲಕ್ ವರ್ಮಾ ಅವರ ಬಗ್ಗೆ ಚರ್ಚೆ ನಡೆಯಿತು. ಆದರೆ ತಿಲಕ್ ಆರ್ಸಿಬಿ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದರು ಎಂದು ಅವರ ಬೆನ್ನು ತಟ್ಟಿದರು.

ಬಿಗ್ ಸ್ಕೋರಿಂಗ್ ಗೇಮ್ಗಳಲ್ಲಿ ಪವರ್ ಪ್ಲೇ ಬಹಳ ಮುಖ್ಯ. ನಾವು ಕೆಲವು ಓವರ್ಗಳಲ್ಲಿ ರನ್ಗಳಿಸುವಲ್ಲಿ ಹಿಂದೆ ಬಿದ್ದ ಕಾರಣ ನಾನು ಚೇಸಿಂಗ್ನಲ್ಲಿ ಹಿಂದೆ ಬಿದ್ದೇವು. ಜಸ್ಪ್ರಿತ್ ಬುಮ್ರಾ ಆಗಮನ ತಂಡಕ್ಕೆ ಖುಷಿ ನೀಡಿದೆ. ಎಲ್ಲರೂ ಪಾಸಿಟಿವ್ ಇಂಟೇಟ್ ಮೂಲಕ ಮುಂದಿನ ಪಂದ್ಯಗಳಲ್ಲಿ ಆಡಬೇಕಿದೆ ಎಂದು ಹಾರ್ದಿಕ್ ಆಟಗಾರರಿಗೆ ಕಿವಿ ಮಾತು ಹೇಳಿದರು.
ಮುಂಬೈ ಇಂಡಿಯನ್ಸ್ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 13ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದೆಹಲಿಯಲ್ಲಿ ಆಡಲಿದೆ.