ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭಾರೀ ಸುದ್ದಿಯಲ್ಲಿದ್ದಾರೆ. ಕಳಪೆ ಪ್ರದರ್ಶನದಿಂದಾಗಿ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದೆ. ಭಾರತ ಮತ್ತು ಆಸ್ಟ್ರೇಲಯಾ ನಡುವಿನ ಐದನೇ ಟೆಸ್ಟ್ ಪಂದ್ಯವೂ ಸಿಡ್ನಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಿಂದ ರೋಹಿತ್ ಶರ್ಮಾ ಹೊರಗುಳಿದರುವ ಕಾರಣ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ನಾಯಕನ್ನಾಗಿ ಮಾಡಲಾಗಿದೆ. ಇದೀಗ ರೋಹಿತ್ ಶರ್ಮಾ ಅವರು ಮುಂಬರುವ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ನಾಯಕನ್ನಾಗಿ ಭಾರತ ತಂಡವನ್ನು ಮುನ್ನಡೆಸುತ್ತಾರಾ? ಎಂಬ ಚರ್ಚೆಗಳು ಶುರುವಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನದಿಂದಾಗಿ ರೋಹಿತ್ ಶರ್ಮಾ ವೃತ್ತಿಜೀವನದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ವೇಳೆಗೆ ರೋಹಿತ್ ಶರ್ಮಾ ನಾಯಕತ್ವದಿಂದ ಕೆಳಗಿಳಿಯಬೇಕು ಎಂಬ ಸಲಹೆಗಳು ಬರುತ್ತಿವೆ. ಇದರ ನಡುವೆ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಶರ್ಮಾ ಬದಲಿಗೆ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಾರೆ ಎಂದು ವರದಿಗಳು ಹೇಳುತ್ತಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ವರದಿಗಳು ಪ್ರಕಾರ, ರೋಹಿತ್ ಶರ್ಮಾ ಅವರು ಸಿಡ್ನಿ ಟೆಸ್ಟ್ ನಂತರ ನಿವೃತ್ತಿ ಘೋಷಣೆ ಮಾಡಬಹುದು. ಇದಾದ ನಂತರ ಟಿ20 ವಿಶ್ವಕಪ್ ಚಾಂಪಿಯನ್ ನಾಯಕ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಭಾರತವನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸುತ್ತಿದ್ದಾರೆ. ಇದೀಗ ಏಕದಿನ ನಾಯಕತ್ವದಿಂದಲ್ಲೂ ರೋಹಿತ್ ಶರ್ಮಾ ಕೆಳಗಿಳಿದರೆ, ಹಾರ್ದಿಕ್ ಪಾಂಡ್ಯ ನಾಯಕನ್ನಾಗಲೂ ಪ್ರಬಲ ಆಟಗಾರನಾಗಿದ್ದಾರೆ.
ಹಾರ್ದಿಕ್ ಅವರು ಭಾರತ ತಂಡದ ನಾಯಕನಾಗಿ ತಮ್ಮ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಇದಲ್ಲದೆ, ಐಪಿಎಲ್ನಲ್ಲಿಯೂ ನಾಯಕನ್ನಾಗಿ ಪಾಂಡ್ಯ ಯಶಸ್ಸು ಕಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರ ಹೊರೆಯನ್ನು ತಗ್ಗಿಸಲು ಬಿಸಿಸಿಐ ನಿರ್ಧರಿಸಿದರೆ, ಹಾರ್ದಿಕ್ ಅವರನ್ನು ಏಕದಿನ ನಾಯಕತ್ವಕ್ಕೆ ಪರಿಗಣಿಸಬಹುದು ಎಂದು ಬಿಸಿಸಿಐ ಆಪ್ತ ಮೂಲಗಳು ಸುಳಿವು ನೀಡಿವೆ.
ಹೆಚ್ಚಿನ ಒತ್ತಡದ ಸಂದರ್ಭಗಳಲ್ಲಿ ತಂಡವನ್ನು ಮುನ್ನಡೆಸುವ ಕೌಶಲ್ಯವನ್ನು ಹಾರ್ದಿಕ್ ಹೊಂದಿದ್ದಾರೆ. ಆಲ್ರೌಂಡರ್ ಮತ್ತು ನಾಯಕರಾಗಿ ಅವರ ಅನುಭವವು ಚಾಂಪಿಯನ್ಸ್ ಟ್ರೋಫಿಯಂತಹ ಐಸಿಸಿ ಟೂರ್ನಿಗಳಿಗೆ ಅವರನ್ನು ಮೊದಲ ಆಯ್ಕೆಯನ್ನಾಗಿ ಮಾಡುತ್ತದೆ ಎಂಬ ನಿರೀಕ್ಷೆಯಿದೆ. ಇಂತಹ ಸಂದರ್ಭದಲ್ಲಿ ತಮ್ಮಲ್ಲಿರುವ ನಾಯಕತ್ವದ ಸಾಮರ್ಥ್ಯಗಳಿಂದ ರೋಹಿತ್ ಶರ್ಮಾ ಅನುಪಸ್ಥಿಯಲ್ಲಿ ಭಾರತ ತಂಡವನ್ನು ಪಾಂಡ್ಯ ಉತ್ತಮ ಆಯ್ಕೆಯಾಗಿದ್ದಾರೆ.
ಭಾರತ ತಂಡದ ಏಕದಿನ ನಾಯಕತ್ವ ವಹಿಸಿಕೊಳ್ಳವ ನಿರೀಕ್ಷೆಯಲ್ಲಿರುವ ಹಾರ್ದಿಕ್ ಪಾಂಡ್ಯ ಅವರಿಗೆ ಇಬ್ಬರು ಸ್ಟಾರ್ ಆಟಗಾರರು ಪೈಪೋಟಿ ನೀಡಲು ರೆಡಿಯಾಗಿದ್ದಾರೆ. ಶ್ರೀಲಂಕಾ ಪ್ರವಾಸದ ಸಂದರ್ಭದಲ್ಲಿ ಭಾರತ ತಂಡದ ಉಪನಾಯಕನ್ನಾಗಿ ಶುಭಮನ್ ಗಿಲ್ ಅವರನ್ನು ನೇಮಿಸಲಾಗಿತ್ತು. ಈಗ ಗಿಲ್ ಕೂಡ ರೋಹಿತ್ ಶರ್ಮಾ ಬದಲಿಗೆ ಟೀಮ್ ಇಂಡಿಯಾ ಮುನ್ನಡೆಸಲು ಸಜ್ಜಾಗಿದ್ದಾರೆ. ಮತ್ತೊಂದೆಡೆ ಭಾರತ ಟಿ20 ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿರುವ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಗೆ ನಾಯಕನ್ನಾಗುವ ಅವಕಾಶವಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಸತತವಾಗಿ ಟಿ20 ಸರಣಿಗಳನ್ನು ಗೆದ್ದಿದೆ.