ವೆಸ್ಟ್ ಇಂಡೀಸ್ ವಿರುದ್ಧ ಜುಲೈ 12ರಿಂದ ಆರಂಭವಾಗುವ ಸರಣಿಗಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶುಕ್ರವಾರ, ಜೂನ್ 23ರಂದು ಭಾರತದ ಟೆಸ್ಟ್ ಮತ್ತು ಏಕದಿನ ತಂಡಗಳನ್ನು ಪ್ರಕಟಿಸಿದೆ.
ಭಾರತ ತಂಡವು ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಜುಲೈ 12ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಪ್ರವಾಸ ಆರಂಭವಾಗಲಿದೆ. ನಂತರ ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ಇದೇ ವೇಳೆ ಭಾರತ ತಂಡದಲ್ಲಿ ಕೆಲವು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.

ಭಾರತದ ಎರಡೂ ತಂಡಗಳಿಗೂ ಖಾಯಂ ನಾಯಕ ರೋಹಿತ್ ಶರ್ಮಾ ಮುನ್ನಡೆಸಲಿದ್ದರೆ, ಟೆಸ್ಟ್ ಸರಣಿಗೆ ಅಜಿಂಕ್ಯ ರಹಾನೆ ಮತ್ತು ಏಕದಿನ ಸರಣಿಗೆ ಹಾರ್ದಿಕ್ ಪಾಂಡ್ಯ ಉಪನಾಯಕರಾಗಿದ್ದಾರೆ.
ಇನ್ನು ಭಾರತದಲ್ಲಿಯೇ ನಡೆಯುವ 2023ರ ಏಕದಿನ ವಿಶ್ವಕಪ್ ಮುಗಿದ ನಂತರ ಹಾರ್ದಿಕ್ ಪಾಂಡ್ಯ ಭಾರತ ತಂಡದ ವೈಟ್-ಬಾಲ್ ನಾಯಕನಾಗಬೇಕು ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.
ಭಾರತೀಯ ತಂಡ ಮತ್ತು ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕತ್ವ ವಹಿಸಿಕೊಂಡ ನಂತರ ಹಾರ್ದಿಕ್ ಪಾಂಡ್ಯ ಅದ್ಭುತವಾಗಿ ಮುನ್ನಡೆಸಿರುವುದು ಈಗಾಗಲೇ ಬಹಿರಂಗವಾಗಿದೆ. ಗುಜರಾತ್ ಟೈಟನ್ಸ್ ತಂಡದ ನಾಯಕರಾದ ನಂತರದ ಸತತ ಎರಡು ವರ್ಷ ಫೈನಲ್ಗೆ ಮುನ್ನಡೆಸಿದರು. 2022ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದರೆ, ಈ ವರ್ಷ ಫೈನಲ್ನಲ್ಲಿ ಸಿಎಸ್ಕೆ ವಿರುದ್ಧ ಸೋತರು.

ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತನ್ನ ನಾಯಕತ್ವದ ವಿಷಯದಲ್ಲಿ ಹಲವು ಕ್ರಿಕೆಟ್ ಪಂಡಿತರ ಮನಗೆದ್ದಿದ್ದಾರೆ. ಇಂಡಿಯನ್ ಎಕ್ಸ್ಪ್ರೆಸ್ ಉಲ್ಲೇಖಿಸಿದಂತೆ ದಿ ವೀಕ್ನೊಂದಿಗೆ ಮಾತನಾಡಿರುವ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, "ಹಾರ್ದಿಕ್ ಪಾಂಡ್ಯ ಅವರ ದೇಹವು ಸಾಕಷ್ಟು ಫಿಟ್ ಆಗಿದ್ದರೆ ಈ ವರ್ಷದ ವಿಶ್ವಕಪ್ ನಂತರ ಭಾರತೀಯ ವೈಟ್ ಬಾಲ್ ತಂಡದ ನಾಯಕರಾಗಬೇಕು," ಎಂದು ಹೇಳಿದ್ದಾರೆ.
ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಮತ್ತೆ ನೋಡಲು ಅನೇಕ ಪಂಡಿತರು ಬಯಸಿದ್ದಾರೆ. ಅಂತಹವರಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮತ್ತು ಲ್ಯಾನ್ಸ್ ಕ್ಲೂಸೆನರ್ ಸೇರಿದ್ದಾರೆ. ಆಲ್ರೌಂಡರ್ನನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಬಹುದಿತ್ತು ಎಂದು ಸಲಹೆ ನೀಡಿದ್ದಾರೆ.
ಆದರೆ, ಹಾರ್ದಿಕ್ ಪಾಂಡ್ಯ ಅವರ ದೇಹವು ಕ್ರಿಕೆಟ್ನ ಟೆಸ್ಟ್ ಸ್ವರೂಪವನ್ನು ನಿಭಾಯಿಸಲು ಇನ್ನೂ ಸಾಧ್ಯವಿಲ್ಲ ಎಂದು ಭಾವಿಸಿರುವುದರಿಂದ ಅವರನ್ನು ಮತ್ತೆ ಟೆಸ್ಟ್ ಕ್ರಿಕೆಟ್ ಆಡಿಸದಿರಬಹುದು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ವಿಶೇಷವಾಗಿ ಟಿ20 ಮತ್ತು ಏಕದಿನ ಕ್ರಿಕೆಟ್ಗೆ ಬಂದರೆ, ಭಾರತೀಯ ಕ್ರಿಕೆಟ್ನಲ್ಲಿ ನಿಧಾನವಾಗಿ ಹಿರಿಯರ ಆಟಗಾರರನ್ನು ಹೊರಹಾಕಲು ಮತ್ತು ಯುವ ಆಟಗಾರರಿಗೆ ಅವಕಾಶ ನೀಡುವ ಸಮಯ ಬಂದಿದೆ ಎಂದು ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.
"ಟಿ20 ಕ್ರಿಕೆಟ್ನಲ್ಲಿ ಹಿರಿಯ ಆಟಗಾರರನ್ನು ಹೊರಹಾಕುವುದರಲ್ಲಿ ಯಾವುದೇ ಪ್ರಶ್ನೆಯೇ ಇಲ್ಲ. 50 ಓವರ್ಗಳ ಕ್ರಿಕೆಟ್ನಲ್ಲಿ ಮಿಶ್ರಣವಿರಬೇಕು ಮತ್ತು ಟೆಸ್ಟ್ ಪಂದ್ಯಗಳಲ್ಲಿ ಹಿರಿಯರಿಗೆ ಅವಕಾಶವಿರಲಿ," ಎಂದು ಭಾರತ ತಂಡದ ಮಾಜಿ ಮುಖ್ಯ ಕೋಚ್ ಆಗಿರುವ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.