ಜುಲೈ 4 ಗುರುವಾರ, ಮುಂಬೈನ ಪ್ರತಿಷ್ಠಿತ ವಾಂಖೆಡೆ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾಗೆ ಅದ್ಧೂರಿ ಅಭಿನಂದನೆ ಸಮಾರಂಭ ಮುಗಿಲು ಮುಟ್ಟಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಸಹಸ್ರಾರು ಅಭಿಮಾನಿಗಳು ಟೀಮ್ ಇಂಡಿಯಾ ಆಟಗಾರರನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.
ಸ್ಟೇಡಿಯಂ ವಾತಾವರಣವು ಸಂಪೂರ್ಣ ಉತ್ಸಾಹದಿಂದ ಕೂಡಿದೆ. ಡೋಲುಗಳನ್ನು ಬಾರಿಸುತ ತ್ರಿವರ್ಣ ಧ್ವಜವನ್ನು ಬೀಸುತ್ತಿರುವ ಅಭಿಮಾನಿಗಳು 'ಇಂಡಿಯಾ, ಇಂಡಿಯಾ ಎಂದು ಘೋಷಣೆಗಳನ್ನು ಕೂಗಿದ್ದಾರೆ.

ಈ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಭಿಮಾನಿಗಳು ನೀಡಿದ ಬೆಂಬಲಕ್ಕಾಗಿ ಧನ್ಯವಾದಗಳನ್ನು ಹೇಳಿದ್ದಾರೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ ಮೈದಾನಕ್ಕೆ ಕಾಲಿಡುತ್ತಿದ್ದಂತೆ ಅಭಿಮಾನಿಗಳ ಉತ್ಸಾಹಕ್ಕೆ ಗಡಿಯೇ ಇರಲಿಲ್ಲ.
"ಮುಂಬೈ ಎಂದಿಗೂ ನಿರಾಸೆಗೊಳಿಸುವುದಿಲ್ಲ. ನಮಗೆ ಘನವಾದ ಸ್ವಾಗತ ಸಿಕ್ಕಿದೆ. ತಂಡದ ಪರವಾಗಿ ನಾವು ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ನನಗೆ ತುಂಬಾ ಸಂತೋಷವಾಗಿದೆ ಮತ್ತು ಸಮಾಧಾನವಾಗಿದೆ" ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.
ಇದೇ ವೇಳೆ ರೋಹಿತ್ ತಮ್ಮ ಸಹ ಆಟಗಾರ ಹಾರ್ದಿಕ್ ಪಾಂಡ್ಯ ಅವರನ್ನು ಹೊಗಳಿದ್ದಾರೆ. ಇದು ಉತ್ಸಾಹಭರಿತ ಅಭಿಮಾನಿಗಳಿಂದ "ಹಾರ್ದಿಕ್, ಹಾರ್ದಿಕ್" ಎಂಬ ಘೋಷಣೆಗಳ ಕೂಗಲು ಪ್ರಚೋದಿಸಿದೆ. ಇನ್ನೊಂದೆಡೆ ರೋಹಿತ್ ಶರ್ಮಾ ಭಾಷಣವನ್ನು ಕೇಳಿ ಹಾರ್ದಿಕ್ ಪಾಂಡ್ಯ ಕಣ್ಣೀರಿಟ್ಟದ್ದಾರೆ.
ಪ್ರಶಸ್ತಿ ಗೆಲುವಿಗೆ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರವಹಿಸಿದ್ದಾರೆ. ಪಾಂಡ್ಯ ಅವರ ಸಾಮರ್ಥ್ಯವು ಡೇವಿಡ್ ಮಿಲ್ಲರ್ ಅವರನ್ನು ಔಟ್ ಮಾಡಿ ಭಾರತಕ್ಕೆ ಸಹಾಯ ಮಾಡಿತು ಎಂದು ರೋಹಿತ್ ಹೇಳಿದ್ದಾರೆ. ಈ ವೇಳೆ ಭಾವುಕರಾದ ಹಾರ್ದಿಕ್ ಪಾಂಡ್ಯ ಎದ್ದುನಿಂತು ವೇದಿಕೆ ಮೇಲಿನಿಂದಲ್ಲೇ ಅಭಿಮಾನಿಗಳನ್ನು ಅಪ್ಪಿಕೊಂಡರು.
2024ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ನಾಯಕತ್ವವನ್ನು ರೋಹಿತ್ ಶರ್ಮಾ ಅವರಿಂದ ಹಾರ್ದಿಕ್ ಪಾಂಡ್ಯಗೆ ವಹಿಸಲಾಗಿತ್ತು. ಇದಾದ ಬಳಿಕ ಹಾರ್ದಿಕ್ ಮತ್ತು ರೋಹಿತ್ ನಡುವೆ ಉತ್ತಮ ಬಾಂಧವ್ಯವಿದ್ದರೂ, ಹಿಟ್ಮ್ಯಾನ್ ಅಭಿಮಾನಿಗಳು ಪಾಂಡ್ಯರನ್ನು ಕಿಚಾಯಿಸುತ್ತಿದ್ದರು.
ಇದನ್ನು ಮಾತ್ರ ಹಾರ್ದಿಕ್ ಪಾಂಡ್ಯ ನಯವಾಗಿಯೇ ಸ್ವೀಕರಿಸುತ್ತದ್ದರು. ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನದಿಂದಾಗಿ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿತ್ತು. ಅಲ್ಲದೆ, ಹಾರ್ದಿಕ್ ಪಾಂಡ್ಯ ಕೂಡ ನಾಯಕತ್ವದ ವೈಫಲ್ಯ ಅನುಭವಿಸಿದ್ದರು.
ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಚೊಚ್ಚಲ ಐಸಿಸಿ ಟ್ರೋಫಿ ಗೆಲ್ಲುವ ಸನಿಹದಲ್ಲಿತ್ತು. ಇದಕ್ಕಾಗಿ ಕೊನೆಯ ಓವರ್ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ಗಳ ಬೇಕಿದಾಗ ಹಾರ್ದಿಕ್ ಪಾಂಡ್ಯ ಭರ್ಜರಿ ಬೌಲಿಂಗ್ ಪ್ರದರ್ಶನ ಮಾಡಿದ್ದರು.
ಕೊನೆಯ ಓವರ್ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ (17 ಎಸೆತಗಳಲ್ಲಿ 21 ರನ್) ವಿಕೆಟ್ ಪಡೆದು ಪಂದ್ಯವನ್ನು ಭಾರತದ ಪರವಾಗಿ ತಿರುಗಿಸಿದರು. ಇದರೊಂದಿಗೆ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ಗಳಿಂದ ಗೆದ್ದು ಎರಡನೇ ಟಿ20 ವಿಶ್ವಕಪ್ ಎತ್ತಿ ಹಿಡಿಯಲು ಪಾಂಡ್ಯ ಪ್ರಮುಖ ಪಾತ್ರವಹಿಸಿದ್ದರು.