
ಭಾರತ ಮಹಿಳಾ ಕ್ರಿಕೆಟ್ ತಂಡ ಟಿ20 ವಿಶ್ವಕಪ್ಗೆ ಸಿದ್ಧವಾಗುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾಗಿರುವ ನಾಯಕಿ ಹರ್ಮನ್ಪ್ರೀತ್ ಕೌರ್ ತನ್ನ ಜೀವನದಲ್ಲಿ ಮಹತ್ವದ ಪಾತ್ರವಹಿಸಿದ ಇಬ್ಬರು ದಿಗ್ಗಜರನ್ನು ಸ್ಮರಿಸಿಕೊಂಡಿದ್ದಾರೆ. ಹರ್ಮನ್ಪ್ರೀತ್ ಕೌರ್ ಉಲ್ಲೇಖಿಸಿರುವ ಆ ದಿಗ್ಗಜ ಕ್ರಿಕೆಟಿಗರು ಬೇರೆ ಯಾರೂ ಅಲ್ಲ. ಟೀಮ್ ಇಂಡಿಯಾದ ಮಾಜಿ ನಾಯಕರಾದ ಸೌರವ್ ಗಂಗೂಲಿ ಹಾಗೂ ಎಂಎಸ್ ಧೋನಿ.
ಟೈಮ್ಸ್ ಆಫ್ ಇಂಡಿಯಾ ಜೊತೆಗೆ ಮಾತನಾಡಿರುವ ಹರ್ಮನ್ಪ್ರೀತ್ ಕೌರ್ ಭಾರತ ತಂಡದ ನಾಯಕತ್ವವನ್ನು ವಹಿಸುವಲ್ಲಿ ಭಾರತದ ಇಬ್ಬರು ಮಾಜಿ ನಾಯಕರು ವಹಿಸಿದ ಪಾತ್ರವನ್ನು ಹೇಳಿದ್ದಾರೆ. "ಎಂಎಸ್ ಧೋನಿ ಮೈದಾನದಲ್ಲಿ ಚಾಣಾಕ್ಷ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ನೀವು ಇಂದು ಕೂಡ ನೀವು ಧೋನಿಯ ಹಳೇಯ ವಿಡಿಯೋಗಳನ್ನು ನೋಡಿದರೆ ಈಗಲೂ ಸಾಕಷ್ಟು ವಿಚಾರಗಳು ಕಲಿಯಲು ದೊರೆಯುತ್ತವೆ. ನಾನು ಧೋನಿ ಹಾಗೂ ಸೌರವ್ ಗಂಗೂಲಿ ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡಿದ್ದೇನೆ" ಎಂದಿದ್ದಾರೆ ಹರ್ಮನ್ಪ್ರೀತ್ ಕೌರ್.
"ನಾನು ಯಾವಾಗಲೂ ಕಲಿಯಲು ದೊರೆಯುವ ಸಣ್ಣ ಸಣ್ಣ ಅವಕಾಶಗಳನ್ನು ಕೂಡ ಬಳಸಿಕೊಳ್ಳುತ್ತೇನೆ. ನಾಯಕತ್ವದ ವಿಚಾರವಾಗಿ ಮಾತನಾಡಿದಾಗ ಧೋನಿ ಹಾಗೂ ಗಂಗೂಲಿ ಬಹಳ ದೊಡ್ಡ ಪಾತ್ರವನ್ನು ನನ್ನ ಜೀವನದಲ್ಲಿ ನಿರ್ವಹಿಸಿದ್ದಾರೆ" ಎಂದಿದ್ದಾರೆ. ಈ ಸಂದರ್ಭದಲ್ಲಿ ಅವರು ತಂಡವನ್ನು ಮುನ್ನಡೆಸುವಾಗ ಈ ಇಬ್ಬರು ದಿಗ್ಗಜರನ್ನು ಅನುಸರಿಸುವುದಾಗಿ ಹೇಳಿಕೊಂಡಿದ್ದಾರೆ.
"ಅವರು ತಂಡವನ್ನು ಮುನ್ನಡೆಸಿದ ರೀತಿಯನ್ನು ನಾನು ಅನುಸರಿಸುತ್ತೇನೆ. ಸೌರವ್ ತಂಡವನ್ನು ಮುನ್ನಡೆಸಿದಾಗ ಭಾರತದ ಪುರುಷರ ಕ್ರಿಕೆಟ್ ಬೆಳೆಯಲು ಆರಂಭಿಸಿತ್ತು. ಅವರು ತಂಡವನ್ನು ಮುನ್ನಡೆಸುತ್ತಿದ್ದ ರೀತಿ, ಡ್ರೆಸ್ಸಿಂಗ್ ರೂಮ್ನಲ್ಲಿನ ವಾತಾವರಣ, ಹಾಗೂ ಆಟಗಾರರನ್ನು ಬೆಂಬಲಿಸುತ್ತಿದ್ದ ರೀತಿ ಅದ್ಭುತ" ಎಂದಿದ್ದಾರೆ ಹರ್ಮನ್ಪ್ರೀತ್ ಕೌರ್.
ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಹರ್ಮನ್ ಎಲ್ಲಾ ತಂಡಗಳು ಬಲಿಷ್ಠವಾಗಿರುವುದರಿಂದ ಯಾವುದೇ ಪಂದ್ಯವನ್ನು ಕೂಡ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.