ಫೆಬ್ರವರಿ 7 ರಿಂದ ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಟಿ20 ವಿಶ್ವಕಪ್ 2026 ಆಯೋಜಿಸುತ್ತಿವೆ. ಈ ಮೆಗಾ ಟೂರ್ನಿಗೆ ಈಗಾಗಲೇ ಎಲ್ಲ ತಂಡಗಳು ಅಭ್ಯಾಸ ನಡೆಸಿವೆ. ಟಿ20 ವಿಶ್ವಕಪ್ ಆರಂಭವಾಗುವ ಮುನ್ನವೇ ಭಾರತದ ಅಭಿಮಾನಿಗಳ ಮುಖದಲ್ಲಿ ಚಿಂತೆಯ ಗೆರೆಗಳು ಮೂಡುವಂತಹ ಸುದ್ದಿಯೊಂದು, ಟೀಮ್ ಇಂಡಿಯಾ ಕ್ಯಾಂಪ್ನಿಂದ ಬಂದಿದೆ. ಟೀಮ್ ಇಂಡಿಯಾದ ವೇಗದ ಬೌಲರ್ ಗಾಯಕ್ಕೆ ತುತ್ತಾಗಿದ್ದಾರೆ.
ಬುಧವಾರ ನವಿ ಮುಂಬೈನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಅಭ್ಯಾಸ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿತು. ಸಂಘಟಿತ ಆಟದ ಪ್ರದರ್ಶನ ನೀಡಿದ ಭಾರತ ತಂಡ, ಟಿ20 ವಿಶ್ವಕಪ್ಗೆ ತಾನು ರೆಡಿ ಎಂಬುದನ್ನು ಸಾರಿತು. ಈ ಪಂದ್ಯದಲ್ಲಿ ಬೌಲಿಂಗ್ ಮಾಡಿದ ಟೀಮ್ ಇಂಡಿಯಾದ ಯುವ ವೇಗದ ಬೌಲರ್ ಗಾಯಕ್ಕೆ ತುತ್ತಾಗಿದ್ದಾರೆ.

ಟೀಮ್ ಇಂಡಿಯಾದ ಯುವ ಬೌಲರ್ ಹರ್ಷಿತ್ ರಾಣಾ ಅಭ್ಯಾಸ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರಾಣಾ ಬೌಲಿಂಗ್ ಮಾಡುವಾಗ ತೊಂದರೆಯನ್ನು ಅನುಭವಿಸಿದರು. ಬಳಿಕ ಅವರು ಮೊಣಕಾಲು ಹಿಡಿದುಕೊಂಡು ಮೈದಾನದಿಂದ ಕುಂಟುತ್ತಾ ಮೈದಾನದಿಂದ ಹೊರ ನಡೆದರು. ಈ ಪಂದ್ಯದಲ್ಲಿ ರಾಣಾ ಕೇವಲ ಒಂದು ಓವರ್ ಬೌಲ್ ಮಾಡಿದ್ದು, 16 ರನ್ ನೀಡಿ ಕೈ ಸುಟ್ಟುಕೊಂಡಿದ್ದಾರೆ. ಇವರ ಗಾಯದ ಬಗ್ಗೆ ಇನ್ನು ಬಿಸಿಸಿಐ ಅಧಿಕೃತ ಮಾಹಿತಿ ನೀಡಿಲ್ಲ.
ಗಾಯದ ಬಗ್ಗೆ ಇನ್ನು ಬಂದಿಲ್ಲ ಮಾಹಿತಿ
ಟೀಮ್ ಇಂಡಿಯಾಕ್ಕೆ ಗಾಯ ಬಹುವಾಗಿ ಕಾಡುತ್ತಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ತಂಡದ ಹೊರನಡೆದಿದ್ದ ತಿಲಕ್ ವರ್ಮಾ, ಈಗ ಚೇತರಿಸಿಕೊಂಡಿದ್ದು ತಂಡ ಸೇರಿದ್ದಾರೆ. ಇನ್ನು ವಾಷಿಂಗ್ಟನ್ ಸುಂದರ್ ಗುಣಮುಖರಾಗುವ ಹಾದಿಯಲ್ಲಿದ್ದಾರೆ. ಇವರು ವಿಶ್ವಕಪ್ ವೇಳೆ ಫಿಟ್ ಆಗುವ ನಿರೀಕ್ಷೆ ಇದೆ. ಈ ಮಧ್ಯೆ ಹರ್ಷಿತ್ ರಾಣಾ ಅವರ ಗಾಯ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಟೀಮ್ ಇಂಡಿಯಾ ಫೆಬ್ರವರಿ 7 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಯುಎಸ್ಎ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.

ಟೀಮ್ ಇಂಡಿಯಾದ ಆಟಗಾರರು ಭರ್ಜರಿ ಲಯದಲ್ಲಿದ್ದು, ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಇರಾದೆ ಹೊಂದಿದ್ದಾರೆ. ಈ ವೇಳೆ ಹರ್ಷಿತ್ ರಾಣಾ ಗಾಯಕ್ಕೆ ತುತ್ತಾಗಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇವರು ಪವರ್ ಪ್ಲೇನಲ್ಲಿ ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವಾಗಬಲ್ಲ ಬೌಲರ್. ಇವರು ಗಾಯ ಗಂಭೀರವಾಗದಿರಲಿ ಎಂಬುದೇ ಅಭಿಮಾನಿಗಳ ಆಶಯ.
ಟಿ 20 ವಿಶ್ವಕಪ್ 2026 ಕ್ಕೆ ಭಾರತೀಯ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್, ಹರ್ಷಿತ್ ರಾಣಾ, ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ.