ದೇಶೀಯ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ರಾಜಸ್ಥಾನ ಹಾಗೂ ಹರಿಯಾಣ ತಂಡಗಳು ಪ್ರಿ ಕ್ವಾರ್ಟರ್ ಫೈನಲ್ದಲ್ಲಿ ಗೆಲುವು ದಾಖಲಿಸಿ, ಎಂಟರ ಘಟ್ಟಕ್ಕೆ ಪ್ರವೇಶ ಪಡೆದಿವೆ. ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರಿಯಾಣ, ಗುಜರಾತ್ ತಂಡದ ವಿರುದ್ಧ ಕಾದಾಟ ನಡೆಸಿದರೆ, ವಿದರ್ಭ ತಂಡದ ವಿರುದ್ಧ ರಾಜಸ್ಥಾನ ಹೊರಾಟ ನಡೆಸಲಿದೆ. ಬಂಗಾಳ ತಂಡದ ಪರ ಭರವಸೆಯ ಬೌಲರ್ ಮೊಹಮ್ಮದ್ ಶಮಿ ಮೂರು ವಿಕೆಟ್ ಪಡೆದು ಸೋಲಿನಲ್ಲಿ ಮಿಂಚಿದ್ದಾರೆ.
ವಡೋಧರಾದಲ್ಲಿ ಗುರುವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಹರಿಯಾಣ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 298 ರನ್ ಸೇರಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಬಂಗಾಳ ತಂಡ 226 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಮುಂದಿನ ಹಂತ ಪ್ರವೇಶಿಸುವ ಕನಸು ನುಚ್ಚು ನೂರಾಯಿತು.

ಮೊದಲು ಬ್ಯಾಟ್ ಮಾಡಿದ ಹರಿಯಾಣ ತಂಡದ ಆರಂಭ ಭರ್ಜರಿಯಾಗಿತ್ತು. ಅರ್ಷ ರಂಗ (23) ಹಾಗೂ ಹಿಮಾಂಶು ರಾಣಾ (14) ಮೊದಲ ವಿಕೆಟ್ಗೆ 5.2 ಓವರ್ಗಳಲ್ಲಿ 48 ರನ್ ಜೊತೆಯಾಟದ ಕಾಣಿಕೆ ನೀಡಿದರು. ನಾಯಕ ಅಂಕಿತ್ ರಾಣಾ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಪಾರ್ಥ್ ವತ್ಸ್ ಹಾಗೂ ನಿಶಾಂತ್ ಸಿಂಧು 4 ನೇ ವಿಕೆಟ್ಗೆ 98 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಪಾರ್ಥ್ 6 ಬೌಂಡರಿ ನೆರವಿನಿಂದ 62 ರನ್ ಸಿಡಿಸಿದರು. ನಿಶಾಂತ್ 64 ರನ್ ಸಿಡಿಸಿ ಔಟ್ ಆದರು. ಸುಮಿತ್ ಕುಮಾರ್ 41 ರನ್ ಬಾರಿಸಿದರು.
ಗುರಿಯನ್ನು ಹಿಂಬಾಲಿಸಿದ ಬಂಗಾಳ ತಂಡದ ಆರಂಭ ಭರ್ಜರಿಯಾಗಿತ್ತು. ಅಭಿಷೇಕ್ ಪೋರೆಲ್ ಹಾಗೂ ಸುದೀಪ್ ಕುಮಾರ್ ಮೊದಲ ವಿಕೆಟ್ಗೆ 70 ರನ್ ಜೊತೆಯಾಟದ ಕಾಣಿಕೆ ನೀಡಿದರು. ಅಭಿಷೇಕ್ 6 ಬೌಂಡರಿ ನೆರವಿನಿಂದ 57 ರನ್ ಸಿಡಿಸಿದರು. ಸುದೀಪ್ ಕುಮಾರ್ 36 ರನ್ ಸಿಡಿಸಿದರು. ಅನುಸ್ತುಪ್ ಮಜುಂದಾರ್ 36, ಕರಣ್ ಲಾಲ್ 28 ರನ್ ಸಿಡಿಸಿದರು. ಪಾರ್ಥ್ ವಸ್ತ್ 3, ನಿಶಾಂತ್ ಸಿಂಧು, ಅನ್ಶುಲ್ ತಲಾ 2 ವಿಕೆಟ್ ಕಬಳಿಸಿದರು.

ಇನ್ನೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 47.3 ಓವರ್ಗಳಲ್ಲಿ 267 ರನ್ಗಳಿಗೆ ಆಲೌಟ್ ಆಯಿತು. ರಾಜಸ್ಥಾನ ತಂಡದ ಪರ ಆರಂಭಿಕ ಅಭಿಜೀತ್ ತೋಮರ್ 12 ಬೌಂಡರಿ, 4 ಸಿಕ್ಸರ್ ಸಹಾಯದಿಂದ 111 ರನ್ ಸಿಡಿಸಿದರೆ, ನಾಯಕ ಮಹಿಪಾಲ್ ಲೋಮ್ರೋರ್ 3 ಬೌಂಡರಿ, 4 ಸಿಕ್ಸರ್ ನೆರವಿನಿಂದ 60 ರನ್ ಬಾರಿಸಿದರು. ಗುರಿಯನ್ನು ಹಿಂಬಾಲಿಸಿದ ತಮಿಳುನಾಡು ತಂಡದ ನಾರಾಯಣ್ ಜಗದೀಶನ್ 10 ಬೌಂಡರಿ ನೆರವಿನಿಂದ 65 ರನ್ ಸಿಡಿಸಿದರೆ, ಆಲ್ ರೌಂಡರ್ ವಿಜಯ್ ಶಂಕರ್ 49, ಮೊಹಮ್ಮದ್ ಅಲಿ 34 ರನ್ ಸಿಡಿಸಿ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ತಮಿಳುನಾಡು 47.1 ಓವರ್ಗಳಲ್ಲಿ 248 ರನ್ಗಳಿಗೆ ಆಲೌಟ್ ಆಯಿತು.