ಜುಲೈ 11 ಗುರುವಾರ, 2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತ ತಂಡದ ಆಟಗಾರರಿಗೆ ದೇಶದಲ್ಲಿ ಭಾರೀ ಪ್ರೀತಿ ವ್ಯಕ್ತವಾಗುತ್ತಿದೆ. ಅದು ಭಾರತ ತಂಡದ ಭವ್ಯ ಸ್ವಾಗತವಾಗಲಿ, ಪ್ರಧಾನಿ ಮೋದಿಯವರ ಭೇಟಿಯಾಗಲಿ ಅಥವಾ ಮುಂಬೈನಲ್ಲಿ ನಡೆದ ವಿಜಯೋತ್ಸವದ ಮೆರವಣಿಗೆಯಾಗಲಿ.
ಇದರೊಂದಿಗೆ ಟೀಮ್ ಇಂಡಿಯಾ ಆಟಗಾರರನ್ನು ಆಯಾಯ ರಾಜ್ಯಗಳ ಮುಖ್ಯಮಂತ್ರಿಗಳು ಸನ್ಮಾನಿಸುತ್ತಿದ್ದಾರೆ. ಇದೀಗ ಚಾಂಪಿಯನ್ ಭಾರತ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರನ್ನು ಹರಿಯಾಣ ರಾಜ್ಯ ಸರ್ಕಾರ ಸನ್ಮಾನಿಸಿದೆ.

ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಅವರು ಯುಜ್ವೇಂದ್ರ ಚಹಾಲ್ ಅವರನ್ನು ಭೇಟಿ ಮಾಡಿ ಸನ್ಮಾನಿಸಿದ್ದಾರೆ. ಈ ವೇಳೆ ಯುಜಿ ಸಿಎಂ ಪದಕ ಪ್ರದಾನ ಮಾಡಿರುವುದು ವಿಶೇಷವಾಗಿದೆ.
ಬಳಿಕ ಶಾಲು ಹೊದಿಸಿ ಮೂರ್ತಿಯನ್ನು ನೀಡಿ ಟೀಮ್ ಇಂಡಿಯಾ ಗೆಲುವಿಗೆ ಸಿಎಂ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಹರಿಯಾಣ ಸಿಎಂ ಸಾಮಾಜಿಕ ಜಾಲತಾಣ ಎಕ್ಸ್ (ಟ್ವೀಟರ್)ನಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿದ್ದ ಮತ್ತು ಹರಿಯಾಣದ ಮಣ್ಣಿನ ಮಗ ಯುಜ್ವೇಂದ್ರ ಚಹಾಲ್ ಅವರನ್ನು ಭೇಟಿಯಾಗಿದ್ದೇನೆ ಎಂದು ಸಿಎಂ ಬರೆದಿದ್ದಾರೆ.
ಯುಜ್ವೇಂದ್ರ ಚಹಾಲ್ ಹರಿಯಾಣ ಸೇರಿದಂತೆ ಇಡೀ ದೇಶದ ಅಸಂಖ್ಯಾತ ಯುವಕರನ್ನು ಕ್ರಿಕೆಟ್ ಕಡೆಗೆ ಮತ್ತು ಕ್ರೀಡೆಯಲ್ಲಿ ವೃತ್ತಿಜೀವನದತ್ತ ಪ್ರೇರೇಪಿಸಿದ್ದಾರೆ. ಈ ಅದ್ಭುತ ವಿಜಯಕ್ಕಾಗಿ ಅವರಿಗೆ ಮತ್ತು ಇಡೀ ಭಾರತ ತಂಡಕ್ಕೆ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಸಿಎಂ ಹೇಳಿದ್ದಾರೆ.
ಇದಕ್ಕೂ ಮುನ್ನ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ತೆಲಂಗಾಣ ಸರ್ಕಾರ ಸನ್ಮಾನಿಸಿತು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಮಹಾರಾಷ್ಟ್ರ ವಿಧಾನಸಭೆಗೆ ಕರೆದು ಗೌರವಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕುಲದೀಪ್ ಯಾದವ್ ಅವರನ್ನು ಸನ್ಮಾನಿಸಿದ್ದಾರೆ
2024ರ ಟಿ20 ವಿಶ್ವಕಪ್ನ 15 ಸದಸ್ಯರ ತಂಡದಲ್ಲಿ ಯುಜ್ವೇಂದ್ರ ಚಹಾಲ್ ಕೂಡ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಒಂದೇ ಒಂದು ಪಂದ್ಯದಲ್ಲೂ ಚಹಾಲ್ ಅವರಿಗೆ ಪ್ಲೇಯಿಂಗ್-11ರಲ್ಲಿ ಅವಕಾಶ ಸಿಗಲಿಲ್ಲ.
ಟೀಮ್ ಇಂಡಿಯಾ ಆಟಗಾರರ ಅತ್ಯುತ್ತಮ ಪ್ರದರ್ಶನದಿಂದಾಗಿ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಮತ್ತು ಯುಜ್ವೇಂದ್ರ ಚಹಾಲ್ ವಿಶ್ವಕಪ್ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗದೆ ಬೆಂಚ್ ಕಾಯುವ ಪರಿಸ್ಥಿತಿ ಎದುರಾಗಿತ್ತು.