ದೇಶೀಯ ಕ್ರಿಕೆಟ್ನಲ್ಲಿ ಹರಿಯಾಣ ಕ್ರಿಕೆಟ್ ತಂಡ ಇತಿಹಾಸವನ್ನು ಬರೆದಿದೆ. ಏಕದಿನ ಮಾದರಿಯ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯಲ್ಲಿ ಹರಿಯಾಣ ಮೊದಲ ಬಾರಿಗೆ ಫೈನಲ್ಗೆ ಅರ್ಹತೆ ಪಡೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹರಿಯಾಣ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ತಮಿಳುನಾಡು 47.1 ಓವರ್ಗಳಲ್ಲಿ 230 ರನ್ಗಳಿಗೆ ಆಲೌಟ್ ಆಯಿತು.

ಟೂರ್ನಿಯುದ್ದಕ್ಕೂ ಹರಿಯಾಣ ಭರ್ಜರಿ ಪ್ರದರ್ಶನ ನೀಡಿತು. ಟೂರ್ನಿಯ ಗುಂಪು ಹಂತದಲ್ಲಿ ಪಂದ್ಯದಲ್ಲಿ ಅಜೇಯ ಓಟವನ್ನು ಮುಂದುವರೆಸಿದ್ದ ಹರಿಯಾಣ ಅಬ್ಬರಿಸಿತ್ತು. ಗುಂಪು ಹಂತದ ಪಂದ್ಯಗಳಲ್ಲಿ ಕ್ರಮವಾಗಿ ಉತ್ತರಾಖಂಡ, ಬಿಹಾರ, ಚಂಡೀಗಢ, ಮಿಜೋರಾಂ, ದೆಹಲಿ, ಕರ್ನಾಟಕ ಮತ್ತು ಜಮ್ಮು ಮತ್ತು ಕಾಶ್ಮೀರ ತಂಡವನ್ನು ಸೋಲಿಸಿತು. ಇದಾದ ಬಳಿಕ ಕ್ವಾರ್ಟರ್ ಫೈನಲ್ನಲ್ಲಿ ಹರಿಯಾಣ ತಂಡ ಬಂಗಾಳವನ್ನು ಸೋಲಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿತು. ನಂತರ ಸೆಮಿಫೈನಲ್ನಲ್ಲಿ ತಮಿಳುನಾಡು ತಂಡವನ್ನು ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿತು.
ಡಿಸೆಂಬರ್ 16, ಶನಿವಾರದಂದು ರಾಜ್ಕೋಟ್ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ರಾಜ್ಕೋಟ್ನಲ್ಲಿ ನಡೆದ ಸೆಮಿಫೈನಲ್ನಲ್ಲಿ ಹರಿಯಾಣ ತಮಿಳುನಾಡು ತಂಡವನ್ನು ಸೋಲಿಸಿತು. ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯ ಹರಿಯಾಣ ಮತ್ತು ತಮಿಳುನಾಡು ನಡುವೆ ನಡೆದಿತ್ತು. ಎರಡನೇ ಸೆಮಿಫೈನಲ್ ಗುರುವಾರ, ಡಿಸೆಂಬರ್ 14 ರಂದು ರಾಜಸ್ಥಾನ ಮತ್ತು ಕರ್ನಾಟಕ ನಡುವೆ ನಡೆಯಲಿದೆ. ಎರಡನೇ ಸೆಮಿಫೈನಲ್ನಲ್ಲಿ ಗೆದ್ದ ತಂಡ ಪ್ರಶಸ್ತಿಗಾಗಿ ಹರಿಯಾಣವನ್ನು ಎದುರಿಸಲಿದೆ.
ಸೆಮಿಫೈನಲ್ನಲ್ಲಿ ಹರಿಯಾಣ ಪರ ಹಿಮಾಂಶು ರಾಣಾ 11 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 116 ರನ್ಗಳ ಇನ್ನಿಂಗ್ಸ್ ಆಡಿದರು. ಇದಲ್ಲದೇ ಆರಂಭಿಕ ಆಟಗಾರ ಯುವರಾಜ್ ಸಿಂಗ್ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 65 ರನ್ ಗಳಿಸಿದರು. ಕೆಳ ಕ್ರಮಾಂಕದಲ್ಲಿ ಸುಮಿತ್ ಕುಮಾರ್ 48 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ತಮಿಳುನಾಡು ಪರ ಟಿ.ನಟರಾಜನ್ 3, ವರುಣ್ ಚಕ್ರವರ್ತಿ, ಸಾಯ್ ಕಿಶೋರ್ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ತಮಿಳುನಾಡು ಹರಿಯಾಣ ಬೌಲರ್ಗಳ ದಾಳಿಗೆ 47.1 ಓವರ್ಗಳಲ್ಲಿ 230 ರನ್ಗಳಿಗೆ ಆಲೌಟ್ ಆಯಿತು. ತಮಿಳುನಾಡು ಪರ ಬಾಬಾ ಇಂದ್ರಜೀತ್ 5 ಬೌಂಡರಿ ಸೇರಿದಂತೆ 64 ಬಾರಿಸಿ ತಂಡಕ್ಕೆ ಆಧಾರವಾದರು. ಇವರನ್ನು ಬಿಟ್ಟರೆ ಉಳಿದ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಹರ್ಯಾಣ ಪರ ಅನ್ಶುಲ್ ಕಾಂಬೋಜ್ ಗರಿಷ್ಠ 4 ವಿಕೆಟ್ ಪಡೆದರು. ಇದಲ್ಲದೇ ರಾಹುಲ್ ತೆವಾಟಿಯಾ 2 ವಿಕೆಟ್ ಪಡೆದರು. ಸುಮಿತ್ ಕುಮಾರ್, ನಿಶಾಂತ್ ಸಿಂಧು ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.