
ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧದ ಪ್ರಾಬಲ್ಯವನ್ನು ಮುಂದುವರೆಸಿದೆ. ಸತತ ನಾಲ್ಕನೇ ಬಾರಿಗೆ ಟೀಂ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ತವರಿನಲ್ಲಿ ನಡೆದ ಟೆಸ್ಟ್ ಸರಣಿಯನ್ನು ಭಾರತ 2-1 ಅಂತರದಲ್ಲಿ ಗೆದ್ದುಕೊಂಡಿತು.
ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗದ ಬೌಲರ್ ಜೋಶ್ ಹೇಜಲ್ವುಡ್ ಟೆಸ್ಟ್ ಸರಣಿಯಿಂದ ಹೊರಗುಳಿದರು. ಸದ್ಯ ಐಪಿಎಲ್ನಲ್ಲಿ ಆಡುವುದು ಕೂಡ ಅನುಮಾನ ಎನ್ನಲಾಗಿದ್ದರೂ, ಆರ್ ಸಿಬಿ ತಂಡದ ಜೊತೆ ಸೇರಿಕೊಂಡಿದ್ದಾರೆ. ಆರ್ ಸಿಬಿ ಪ್ಯಾಡ್ಕಾಸ್ಟ್ನಲ್ಲಿ ಮಾತನಾಡಿರುವ ಜೋಶ್ ಹೇಜಲ್ವುಡ್ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಕುರಿತಂತೆ ಸಾಕಷ್ಟು ವಿಚಾರಗಳನ್ನು ಹೇಳಿದ್ದಾರೆ.
2017ರಲ್ಲಿ ಕೂಡ ಭಾರತ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 2-1 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿತ್ತು. ಅಂದಿನಿಂದ ಸತತವಾಗಿ ನಾಲ್ಕನೇ ಬಾರಿ ಸರಣಿಯನ್ನು 2-1 ಅಂತರದಲ್ಲೇ ಗೆದ್ದಿರುವುದು ವಿಶೇಷ. ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲುವಲ್ಲಿ ಭಾರತ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಅವರ ಕೊಡುಗೆಯನ್ನು ಮರೆಯುವಂತಿಲ್ಲ.
ಬಾರ್ಡರ್-ಗವಾಸ್ಕರ್ ಟ್ರೋಫಿಯ 2020-21 ಆವೃತ್ತಿಯಲ್ಲಿ ಮೊದಲ ಟೆಸ್ಟ್ನಲ್ಲಿ ಕೇವಲ 36 ರನ್ಗಳಿಗೆ ಆಲೌಟ್ ಆಗಿದ್ದ ಭಾರತ ನಂತರ ಸರಣಿಯನ್ನು ಗೆದ್ದಿದ್ದು ಇತಿಹಾಸ. ಮೊದಲ ಟೆಸ್ಟ್ ಬಳಿಕ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ತಂಡವನ್ನು ತೊರೆದರು. ವೇಗಿ ಮೊಹಮ್ಮದ್ ಶಮಿ ಕೂಡ ಹೊರಗುಳಿದಿದ್ದರು. ಕೆ ಎಲ್ ರಾಹುಲ್, ಉಮೇಶ್ ಯಾದವ್, ಮತ್ತು ರವೀಂದ್ರ ಜಡೇಜಾ ಕೂಡ ಸರಣಿಯ ವೇಳೆ ಗಾಯಗೊಂಡಿದ್ದರು. ಆದರೂ ಭಾರತ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು.

ಚೇತೇಶ್ವರ ಪೂಜಾರಗೆ ಬೌಲಿಂಗ್ ಮಾಡೋದು ಕಷ್ಟ!
2020-21ರ ಟೆಸ್ಟ್ ಸರಣಿಯಲ್ಲಿ ಆಡಿದ್ದ ಜೋಶ್ ಹೇಜಲ್ವುಡ್, ಆಸ್ಟ್ರೇಲಿಯಾ ಗೆಲುವಿಗೆ ಚೇತೇಶ್ವರ ಪೂಜಾರ ಅಡ್ಡಿಯಾಗಿದ್ದರು ಎಂದು ಹೇಳಿದ್ದಾರೆ. ಪೂಜಾರಗೆ ಬೌಲಿಂಗ್ ಮಾಡುವುದು ಕಷ್ಟ, ಅವರೊಬ್ಬ ಅದ್ಭುತ ಬ್ಯಾಟರ್ ಎಂದು ಹೊಗಳಿದ್ದಾರೆ. 2020-21 ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಪೂಜಾರ 4 ಟೆಸ್ಟ್ ಗಳಿಂದ 271 ರನ್ ಗಳಿಸಿದ್ದರು.
"ಪೂಜಾರ ಅವರ ವಿಕೆಟ್ ಪಡೆಯುವುದು ಬೌಲರ್ ಗಳಿಗೆ ದೊಡ್ಡ ಸಾಧನೆಯಾಗಿದೆ. ಅವರ ವಿಕೆಟ್ ಪಡೆದರೆ, ನೀವು ಅದನ್ನು ಕಷ್ಟಪಟ್ಟು ಗಳಿಸಿದ್ದೀರಿ ಎಂದರ್ಥ, ಅವರು ಸುಲಭವಾಗಿ ತಮ್ಮ ವಿಕೆಟ್ ಕೈ ಚೆಲ್ಲಲ್ಲ, ನೀವು ಸಾಕಷ್ಟು ಶ್ರಮವಹಿಸಬೇಕು." ಎಂದು ಹೇಳಿದರು.

ಆಸ್ಟ್ರೇಲಿಯಾ ಅಭಿಮಾನಿಗಳು ಅವರನ್ನು ದ್ವೇಷಿಸುತ್ತಾರೆ!
ಹಲವು ವರ್ಷಗಳಿಂದ ಪೂಜಾರ ಜೊತೆಗೆ ತಾವು ಪೈಪೋಟಿ ಹೊಂದಿರುವುದಾಗಿ ಜೋಶ್ ಹೇಜಲ್ವುಡ್ ಹೇಳಿದ್ದಾರೆ. ಆಸ್ಟ್ರೇಲಿಯಾದ ಕ್ರಿಕೆಟ್ ಅಭಿಮಾನಿಗಳು ಚೇತೇಶ್ವರ ಪೂಜಾರ ಅವರನ್ನು ದ್ವೇಷಿಸಲು ಇಷ್ಟಪಡುತ್ತಾರೆ, ಆದರೆ ಅವರು ಅದ್ಭುತವಾದ ಬ್ಯಾಟರ್, ಟೆಸ್ಟ್ ಕ್ರಿಕೆಟ್ನಲ್ಲಿ ವಿಕೆಟ್ ಪಡೆಯುವುದು ಯಾವಾಗಲೂ ಸವಾಲಾಗಿರುತ್ತದೆ ಎಂದು ಹೇಳಿದರು.
ಗಬ್ಬಾ ಟೆಸ್ಟ್ನಲ್ಲಿ ಭಾರತದ ಐತಿಹಾಸಿಕ ಗೆಲುವಿನಲ್ಲಿ ಪೂಜಾರ ಅವರ ಕೊಡುಗೆಯನ್ನು ಮರೆಯುವ ಹಾಗಿಲ್ಲ. ಸಾಕಷ್ಟು ಹೊಡೆತ ತಿಂದರೂ ಛಲ ಬಿಡದೆ ಆಡಿದ ಅವರು ರಿಷಬ್ ಪಂತ್, ಶುಭಮನ್ ಗಿಲ್ ಅವರ ಜೊತೆ ಉತ್ತಮ ಜೊತೆಯಾಟ ಆಡಿದ್ದರು.
ಸ್ನಾಯುರಜ್ಜು ಗಾಯದಿಂದ ಬಳಲುತ್ತಿರುವ ಜೋಶ್ ಹೇಜಲ್ವುಡ್ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಆರಂಭದ ಕೆಲವು ಪಂದ್ಯಗಳಿಗೆ ಅವರು ಅಲಭ್ಯವಾಗುವುದು ಖಚಿತವಾದರೂ, ಯಾವಾಗ ಫಿಟ್ ಆಗುತ್ತಾರೆ ಎಂದು ಹೇಳುವುದು ಕಷ್ಟ. ಕಳೆದ ಐಪಿಎಲ್ನಲ್ಲಿ ಹೇಜಲ್ವುಡ್ 20 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು.