
ಟೀಮ್ ಇಂಡಿಯಾದ ಅನುಭವಿ ಆಟಗಾರ ಸುರೇಶ್ ರೈನಾ ಯುವ ಕ್ರಿಕೆಟಿಗನೊಬ್ಬನ ಬೆಂಬಲಕ್ಕೆ ನಿಂತಿದ್ದಾರೆ. ಆತನೋರ್ವ ಉತ್ಕೃಷ್ಟ ಆಟಗಾರ, ಟೀಮ್ ಇಂಡಿಯಾದ ಯುವರಾಜ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ರೀತಿಯಲ್ಲಿ ಎದುರಾಳಿ ಮೇಲೆ ಸವಾರಿ ಮಾಡಬಲ್ಲ ಸಾಮರ್ಥ್ಯ ಆತನಿಗೆ ಇದ ಎಂದು ಹೇಳಿದ್ದಾರೆ ರೈನಾ.
ಸುರೇಶ್ ರೈನಾ ಈ ರೀತಿ ಹೊಗಳಿಕೆಯ ಮಾತುಗಳನ್ನಾಡಿದ್ದು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಬಗ್ಗೆ. ಸಾಕಷ್ಟು ಅವಕಾಶಗಳು ಸಿಕ್ಕರೂ ರಿಷಭ್ ಪಂತ್ ಅದನ್ನು ಬಳಸಿಕೊಂಡು ತನ್ನ ಸಾಮರ್ಥ್ಯ ಸಾಭೀತುಪಡಿಸುವಲ್ಲಿ ವಿಫಲರಾಗಿದ್ದರು. ಹೀಗಾಗಿ ಕಳೆದೆರಡು ಸರಣಿಯಲ್ಲಿ ಪಂತ್ ಬೆಂಚ್ ಕಾಯಬೇಕಾಗಿ ಬಂದಿತ್ತು.
ಟೀಮ್ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಜೊತೆಗೆ ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದಿದ್ದ ಸುರೇಶ್ ರೈನಾ ರಿಷಭ್ ಪಂತ್ ಬಗ್ಗೆ ಹೇಳಿದ್ದಾರೆ. ಆತನೋರ್ವ ಅತ್ಯುತ್ತಮ ಆಟಗಾರ, ಆತ ಅದ್ಭುತವಾಗಿ ಆಡಿದರೆ ಯುವರಾಜ್ ಸಿಂಗ್ ಮತ್ತು ಸೆಹ್ವಾಗ್ ಅವರನ್ನು ನೆನಪಿಸಿತ್ತಾನೆ ಮತ್ತು ಆತನ ಫ್ಲಿಕ್ ಶಾಟ್ ದ್ರಾವಿಡ್ರನ್ನು ನೆನಪಿಸುತ್ತದೆ ಎಂದು ರೈನಾ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸುರೇಶ್ ರೈನಾ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಓರ್ವ ಬಲಿಷ್ಠ ನಾಯಕ, ಆತನಲ್ಲಿ ಸಾಕಷ್ಟು ಸಾಮರ್ಥ್ಯವಿದೆ, ಪರಿಸ್ಥಿತಿಯನ್ನು ನಿಯಂತ್ರಣ ಮಾಡುವ ಶಕ್ತಿಯಿದೆ ಎಂದುದ್ದಾರೆ ಸುರೇಶ್ ರೈನಾ.
ಸುರೇಶ್ ರೈನ್ ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿ ವಿಶ್ವಕಪ್ಗೆ ಸ್ಥಾನವನ್ನು ಪಡೆಯುವ ಭರವಸೆಯನ್ನು ರೈನಾ ಈ ಹಿಂದೆ ವ್ಯಕ್ತಪಡಿಸಿದ್ದರು ಆದರೆ ಕೊರೊನಾ ವೈರಸ್ ಹಾವಳಿಯಿಂದಾಗಿ ಎಲ್ಲವೂ ಅತಂತ್ರವಾಗಿದೆ.