ಜುಲೈ 11 ಗುರುವಾರ, ಗೌತಮ್ ಗಂಭೀರ್ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದಾರೆ. ಗೌತಮ್ ಗಂಭೀರ್ ಅವರ ತರಬೇತಿಯಲ್ಲಿ ಭಾರತ ತಂಡವು ಮುಂದಿನ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಟೂರ್ನಿಗಳನ್ನು ಆಡಲಿದೆ.
ಈ ಐಸಿಸಿ ಟೂರ್ನಿಗಳಲ್ಲಿ ಕೋಚ್ ಆಗಿ ಗೌತಮ್ ಗಂಭೀರ್ ದೊಡ್ಡ ಪರೀಕ್ಷೆ ಎದುರಿಸಲಿದ್ದಾರೆ. ಗೌತಮ್ ಗಂಭೀರ್ ಅವರು ತಮ್ಮ ಬಲವಾದ ಅಭಿಪ್ರಾಯಗಳಿಗೆ ಹೆಸರುವಾಸಿಯಾಗಿದ್ದು, ಸದಾ ಮೈದಾನದಲ್ಲಿ ಗಂಭೀರವಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಟೀಮ್ ಇಂಡಿಯಾ ಈ ಹಿಂದೆ ರಾಹುಲ್ ದ್ರಾವಿಡ್, ಗ್ಯಾರಿ ಕರ್ಸ್ಟನ್, ಡಂಕನ್ ಫ್ಲೆಚರ್ ಅವರಂತಹ ಶಾಂತ ವ್ಯಕ್ತಿಗಳನ್ನು ಕೋಚ್ಗಳಾಗಿ ಹೊಂದಿತ್ತು. ಆದರೆ ರವಿಶಾಸ್ತ್ರಿ ಅವರು ಅಬ್ಬರದ ಕೋಚ್ ಆಗಿ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ತಂಡವನ್ನು ಎತ್ತರಕ್ಕೆ ಕೊಂಡೊಯ್ದಿದ್ದರು.
ಹೀಗಾಗಿ ಮುಂಬರುವ ದಿನಗಳಲ್ಲಿ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ನಾಯಕ ರೋಹಿತ್ ಶರ್ಮಾ ಜೊತೆ ಗಂಭೀರ್ ಕೆಲಸ ಮಾಡಬೇಕಿದೆ. ಭಾರತದ ಐಸಿಸಿ ಟ್ರೋಫಿ ಬರವು ಟಿ20 ವಿಶ್ವಕಪ್ 2024 ಗೆಲ್ಲುವ ಮೂಲಕ ಕೊನೆಗೊಂಡಿರಬಹುದು. ಆದರೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಐಸಿಸಿ ಪ್ರಶಸ್ತಿಗಳಿಗಾಗಿ ಟೀಮ್ ಇಂಡಿಯಾ ಕಾಯುವಿಕೆ ಮುಂದುವರೆದಿದೆ.
ಭಾರತ ಕೊನೆಯ ಬಾರಿಗೆ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಮತ್ತೊಂದೆಡೆ ಎರಡು ಬಾರಿ ಫೈನಲ್ ತಲುಪಿದ್ದರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅನ್ನು ಇನ್ನೂ ಗೆದ್ದಿಲ್ಲ.
ಗಂಭೀರ್ ಅವರು ರೋಹಿತ್ ಅವರ ನಾಯಕತ್ವದ ಅಭಿಮಾನಿಯಾಗಿದ್ದಾರೆ. ಆದ್ದರಿಂದ ನಾಯಕ-ಕೋಚ್ ಸಂಬಂಧವು ಸಾಕಷ್ಟು ಸುಗಮವಾಗಿರುವುದನ್ನು ನಿರೀಕ್ಷಿಸಬಹುದು.
ಆದರೆ ವಿರಾಟ್ ಕೊಹ್ಲಿ ಜೊತೆಗಿನ ಸಂಬಂಧದ ಮೇಲೆ ಎಲ್ಲರ ಕಣ್ಣು ಕೂಡ ನೆಟ್ಟಿದೆ. ಐಪಿಎಲ್ನಲ್ಲಿ ಇಬ್ಬರು ದಿಗ್ಗಜರ ನಡುವಿನ ಆನ್ಫೀಲ್ಡ್ ವಿವಾದ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.
ಐಪಿಎಲ್ 2024ರಲ್ಲಿ ಗಂಭೀರ್ ಮತ್ತು ಕೊಹ್ಲಿ ಆತ್ಮೀಯವಾಗಿ ಮಾತುಕತೆ ನಡೆಸಿದ್ದರು. ಹೀಗಾಗಿ ಇಬ್ಬರ ನಡುವಿನ ಅಂತರವು ಟೀಮ್ ಇಂಡಿಯಾದ ಒಳಗೆ ಕಾಣಿಸಿಕೊಳ್ಳಲುವುದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಟೀಮ್ ಇಂಡಿಯಾದ ಆಟಗಾರರಿಂದ ಅತ್ಯುತ್ತಮವಾದುದನ್ನು ಪಡೆಯಲು ಗೌತಮ್ ಗಂಭೀರ್ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವುದು ಅವಶ್ಯಕ.
ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಮ್ ಇಂಡಿಯಾ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ಆಲ್ರೌಂಡರ್ ರವೀಂದ್ರ ಜಡೇಜಾ ಚುಟುಕು ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈ ಅನುಭವಿಗಳ ಅನುಪಸ್ಥಿತಿಯಲ್ಲಿ ಗೌತಮ್ 2026ರ ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸಬೇಕಿದೆ.
ಇದರ ಮೊದಲ ಪ್ರಯೋಗ ನಡೆಸಲು ಯಂಗ್ ಭಾರತ ತಂಡವು ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಿಸಲು ಬಿಸಿಸಿಐ ಅವಕಾಶ ನೀಡಲಾಗಿದೆ.
ಈ ಮೂಲಕ ಟಿ20 ವಿಶ್ವಕಪ್ಗಾಗಿ ಗೌತಮ್ ಗಂಭೀರ್ ಹೊಸ ಹಾಗೂ ಯುವ ತಂಡವನ್ನು ಕಟ್ಟಬೇಕಿದೆ. ಶ್ರೀಲಂಕಾ ಪ್ರವಾಸದಿಂದಲೇ ಗಂಭೀರ್ ತಂಡ ಕಟ್ಟುವ ಕಡೆ ಗಮನಹರಿಸಲಿದ್ದಾರೆ.
ಮುಂಬರುವ ಚುಟುಕು ವಿಶ್ವಕಪ್ಗೆ ಗೌತಮ್ ಈಗಿನಿಂದಲೇ ಸರಿಯಾದ ತಯಾರಿ ನಡೆಸಿಕೊಳ್ಳಬೇಕಿದೆ. ಇಲ್ಲದೇ ಇದಲ್ಲಿ ಗೌತಮ್ ಟೀಕೆಗಳನ್ನು ಎದುರಿಸಬೇಕಾಗುತ್ತದೆ.