
ಕನ್ನಡಿಗ ಕರುಣ್ ನಾಯರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಂಚಿ ಮರೆಯಾದ ಆಟಗಾರ. ತಾನಾಡಿದ ಮೂರನೇ ಇನ್ನಿಂಗ್ಸ್ನಲ್ಲಿ ಕರುಣ್ ನಾಯರ್ ತ್ರಿಶತಕವನ್ನು ಬಾರಿಸಿ ಹುಬ್ಬೇರಿಸುವಂತೆ ಮಾಡಿದ್ದರು. ಭಾರತವ ಪರವಾಗಿ ತ್ರಿಶತಕ ದಾಖಲಿಸಿದ ಇಬ್ಬರೇ ಆಟಗಾರರಲ್ಲಿ ಕರುಣ್ ನಾಯರ್ ಕೂಡ ಒಬ್ಬರು. ದುರಾದೃಷ್ಟವಶಾತ್ ಅದಾಗಿ ಕೆಲವೇ ಟೆಸ್ಟ್ ಪಂದ್ಯಗಳ ಬಳಿಕ ಕರುಣ್ ಟೆಸ್ಟ್ ತಂಡದಿಂದ ಹೊರಬಿದ್ದರು.
ಸದ್ಯ ಕರ್ನಾಟಕ ರಣಜಿ ತಂಡವನ್ನು ಮುನ್ನಡೆಸುತ್ತಿರುವ ಕರುಣ್ ನಾಯರ್ಗೆ ಮತ್ತೆ ಅವಕಾಶ ದೊರಕದ ಬಗ್ಗೆ ಮಾಜಿ ಆಯ್ಕೆಗಾರರ ಮಂಡಳಿಯ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಹೇಳಿಕೆಯನ್ನು ನೀಡಿದ್ದಾರೆ. ಕರುಣ್ ನಾಯರ್ಗೆ ಮತ್ತೊಂದು ಅವಕಾಶ ಸಿಗಬೇಕಿತ್ತು ಎಂದಿದ್ದಾರೆ. ವಿಚಿತ್ರ ಅಂದರೆ ಆಗ ಆಯ್ಕೆಗಾರರ ಮಂಡಳಿಯಲ್ಲಿದ್ದಿದ್ದು ಇದೇ ಎಂಎಸ್ಕೆ ಪ್ರಸಾದ್.
ಈಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಎಸ್ಕೆ ಪ್ರಸಾದ್ ಆತನಿಗೆ ಮತ್ತೊಂದು ಅವಕಾಶವನ್ನು ನಾವು ನೀಡಬೇಕಾಗಿತ್ತು ಎಂದಿದ್ದಾರೆ. ಆತ ತ್ರಿಶತಕ ಬಾರಿಸಿದ ಬಳಿಕ ನಾವು ಆತನಿಗೆ ಮತ್ತೊಂದು ಅವಕಾಶವನ್ನು ನೀಡಲು ಸಾದ್ಯವಾಗಲಿಲ್ಲ. ಅದು ಬೇಸರದ ಸಂಗತಿ, ಕರುಣ್ ನಾಯರ್ಗೆ ಮಾತ್ರವಲ್ಲ ನಮಗೆಲ್ಲಾ ಬೇಸರ ತಂದಿದೆ ಎಂದಿದ್ದಾರೆ ಎಂಎಸ್ಕೆ ಪ್ರಸಾದ್.
ತ್ರಿಶತಕವನ್ನು ಬಾರಿಸಿದ ಬಳಿಕ ಕರುಣ್ ನಾಯರ್ ಮುಂದಿನ ನಾಲ್ಕು ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ ,26, 0, 23 ಮತ್ತು 5 ರನ್ ಗಳಿಸಲು ಮಾತ್ರ ಸಾಧ್ಯವಾಗಿತ್ತು. ಆಸ್ಟ್ರೇಲಿಯಾದಂತ ಕಠಿಣ ತಂಡದ ಎದುರು ಕರುನ್ ನಾಯರ್ ರನ್ ಗಳಿಸಲು ಆ ಸಂದರ್ಭದಲ್ಲಿ ವಿಫಲರಾಗಿದ್ದರು. ತ್ರಿಶತಕ ಗಳಿಸಿದ ಬಳಿಕ ಕೇವಲ ಮೂರೇ ಪಂದ್ಯಕ್ಕೆ ಕರುಣ್ ನಾಯರ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಬಿದ್ದರು.
2016ರ ಡಿಸೆಂಬರ್ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕರುಣ್ ನಾಯರ್ ದೊಡ್ಡ ಸದ್ದು ಮಾಡಿದ್ದರು. ಎಂಎ ಚಿದಂಬರಂ ಸ್ಟೇಡಿಯಮ್ ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಕರುಣ್ ನಾಯರ್ ಭರ್ಜರಿ ತ್ರಿಶತಕವನ್ನು ದಾಖಲಿಸಿದ್ದರು. ಈ ಇನ್ನಿಂಗ್ಸ್ ಬಳಿಕ ನಾಯರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬಹಳ ಕಾಲ ಉಳಿದುಕೊಳ್ಳಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಅದರೆ ಅದು ಮುಂದಿನ ಮೂರೇ ಪಂದ್ಯಕ್ಕೆ ಅಂತ್ಯವಾಯಿತು.