ಭಾರತ ತಂಡದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧದ ಅರೆಸ್ಟ್ ವಾರೆಂಟ್ಗೆ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಪಾಲುದಾರರಾಗಿದ್ದ ಕಂಪನಿಯ ಉದ್ಯೋಗಿಗಳಿಗೆ ಇಪಿಎಫ್ ಹಣ ಪಾವತಿಸದೆ ವಂಚಿಸಿದ ಆರೋಪದ ಮೇಲೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ರಾಬಿನ್ ಉತ್ತಪ್ಪ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಪೀಠ ಈ ಆದೇಶ ನೀಡಿದೆ.
ರಾಬಿನ್ ಉತ್ತಪ್ಪ ಅರೆಸ್ಟ್ ವಾರೆಂಟ್ಗೆ ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿ ಉತ್ತಪ್ಪ ಪರ ವಕೀಲರು, ಅರ್ಜಿದಾರರಾದ ರಾಬಿನ್ ಉತ್ತಪ್ಪ ಅವರು ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಹೆಸರಿನ ಖಾಸಗಿ ಕಂಪನಿಯಲ್ಲಿ ಪಾಲುದಾರರಾಗಿದ್ದಾರೆ. ಆದಾಗ್ಯೂ, ಅವರು 2020 ರಲ್ಲಿ ತಮ್ಮ ಪಾಲುದಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡುವಂತಿಲ್ಲ. ಹೀಗಾಗಿ ಅವರಿಗೆ ನೀಡಿರುವ ವಸೂಲಾತಿ ನೋಟಿಸ್ ಹಾಗೂ ಪುಲಕೇಶಿನಗರ ಪೊಲೀಸರು ನೀಡಿರುವ ಅರೆಸ್ಟ್ ವಾರೆಂಟ್ ಅನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು. ವಾದವನ್ನು ಆಲಿಸಿದ ಪೀಠವು ಎಫ್ಐಆರ್ ಮತ್ತು ವಸೂಲಾತಿ ನೋಟಿಸ್ಗೆ ತಡೆ ನೀಡಿ ಆದೇಶ ನೀಡಿತು.

ರಾಬಿನ್ ಉತ್ತಪ್ಪ ಅವರು ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೆಟ್ ಲಿಮಿಟೆಡ್ ಹೆಸರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹಲವು ಉದ್ಯೋಗಿಗಳಿಗೆ ಪಿಎಫ್ ಹಣ ನೀಡಿಲ್ಲ. ವೇತನದಲ್ಲಿ ಪಿಎಫ್ ಹಣ ಕಡಿತಗೊಳಿಸಿ ನೌಕರರ ಖಾತೆಗೆ ಜಮಾ ಮಾಡದೆ 23 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ದೂರಿಗೆ ಸಂಬಂಧಿಸಿದಂತೆ ಪಿಎಫ್ ಪ್ರಾದೇಶಿಕ ಅಧಿಕಾರಿ ಷಡಕ್ಷರಿ ಗೋಪಾಲ್ ರೆಡ್ಡಿ ಡಿಸೆಂಬರ್ 4 ರಂದು ಬೆಂಗಳೂರಿನ ಪುಲಕೇಶಿ ನಗರ ಠಾಣೆ ಪೊಲೀಸರಿಗೆ ಪತ್ರ ಬರೆದು ರಾಬಿನ್ ಉತ್ತಪ್ಪ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಮನವಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಉತ್ತಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದಕ್ಕೂ ಮುನ್ನ ಪತ್ರಿಕಾ ಪ್ರಕಟಣೆ ಹೊರಡಿಸಿ, ಆರೋಪ ಮಾಡಿರುವ ಕಂಪನಿಯ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಸ್ಪಷ್ಟಪಡಿಸಿದ್ದರು.
ರಾಬಿನ್ ಉತ್ತಪ್ಪ ಎಲ್ಲಾ ಮಾದರಿಯ ಕ್ರಿಕೆಟ್ಗೆ 2022ರ ಸೆಪ್ಟೆಂಬರ್ ತಿಂಗಳಲ್ಲಿ ನಿವೃತ್ತಿ ಘೋಷಿಸಿದ್ದರು. ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ನಂತರ ಅವರು ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಅವರು ಭಾರತದಲ್ಲಿ ವಾಸಿಸುತ್ತಿಲ್ಲ. ಭಾರತವನ್ನು ತೊರೆದು ದುಬೈನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಪಾಡ್ಕ್ಯಾಸ್ಟ್ವೊಂದರಲ್ಲಿ ಉತ್ತಪ್ಪ ಭಾರತವನ್ನು ತೊರೆಯಲು ಕಾರಣವನ್ನು ನೀಡಿದ್ದರು. ಈ ಕಾರಣ ತಿಳಿದ ಭಾರತೀಯರು ಅಚ್ಚರಿಗೊಳ್ಳಗಾಗಿದ್ದರು.
'ತಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹಾಗು ಟ್ರಾಫಿಕ್ ಜಾಮ್ನಿಂದ ತಪ್ಪಿಸಿಕೊಳ್ಳಲು ದುಬೈನಲ್ಲಿ ವಾಸಿಸುತ್ತಿರುವುದಾಗಿ' ಉತ್ತಪ್ಪ ಹೇಳಿದ್ದರು. ಉತ್ತಪ್ಪ ಕಳೆದೊಂದು ವರ್ಷದಿಂದ ಖಾಯಂ ಆಗಿ ದುಬೈನಲ್ಲಿ ತಮ್ಮ ಕುಟುಂಬದೊಂದಿಗೆ ನೆಲಸಿದ್ದಾರೆ.