
ಚೆನ್ನೈ: ಮನುಷ್ಯನ ನಿಲುವುಗಳು ಸಂದರ್ಭಕ್ಕೆ ತಕ್ಕಂತೆ ಹೇಗೆಲ್ಲ ಬದಲಾಗುತ್ತವೆಯಲ್ಲವೆ? ಇದಕ್ಕೆ ಉತ್ತಮ ಉದಾಹರಣೆಯೆಂದರೆ ರಿಷಭ್ ಪಂತ್ ಬ್ಯಾಟಿಂಗ್. ಭಾರತದ ಯುವ ಬ್ಯಾಟ್ಸ್ಮನ್ ರಿಷಭ್ ಪಂತ್ ಮೊದಲಿನಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದರು. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಆದರೆ ನಮ್ಮ ನಿಲುವು ಬದಲಾಗಿದೆಯಷ್ಟೇ.
ಎಂಥ ಅಪಾಯಕಾರಿ ಬೌಲರೇ ಆಗಿರಲಿ, ರಿಷಭ್ ಪಂತ್ ಒಂಚೂರೂ ಹೆದರದೆ ಬ್ಯಾಟ್ ಬೀಸುತ್ತಿದ್ದರು. ದೊಡ್ಡ ದೊಡೆತಕ್ಕೆ ಮುಂದಾಗುತ್ತಿದ್ದರು. ಈ ಪ್ರಯತ್ನದ ವೇಳೆ ಬೇಗನೆ ಔಟ್ ಕೂಡ ಆಗುತ್ತಿದ್ದರು. ಆಗೆಲ್ಲ ಬಹುತೇಕ ಕ್ರಿಕೆಟ್ ಪರಿಣಿತರು ಪಂತ್ನನ್ನು ದೂರಿದ್ದಿದೆ. ಪಂತ್ ತಾಳ್ಮೆಯ ಆಟ ಆಟಬೇಕು, ಭಂಡ ಧೈರ್ಯ ಒಳ್ಳೇದಲ್ಲ. ಪಂತ್ಗೆ ಅವಕಾಶ ಸಾಕು ಎಂದವರೇ ಹೆಚ್ಚು.
ಆದರೆ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಪಂತ್ ಬಗ್ಗೆ ಹೆಚ್ಚಿನವರ ನಿಲುವು ಬದಲಾಗಿದೆ. ಪಂತ್ನನ್ನು ಈಗ ಎಲ್ಲರೂ ನಿರ್ಭೀತಿಯ ಆಟಗಾರ ಎಂದು ಬಣ್ಣಿಸುತ್ತಿದ್ದಾರೆ. ಕಾರಣ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಪಂತ್ ಸ್ಫೋಟಕ ಬ್ಯಾಟಿಂಗ್ನೊಂದಿಗೆ ಸರಣಿ ಗೆಲುವಿಗೆ ಕಾರಣರಾಗಿದ್ದರು. ಟೆಸ್ಟ್ನಲ್ಲೂ ಬಿರುಸಿನ ಬ್ಯಾಟಿಂಗ್ ನಡೆಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸದ್ಯ ನಡೆಯುತ್ತಿರುವ ಇಂಗ್ಲೆಂಡ್-ಭಾರತ ಟೆಸ್ಟ್ನಲ್ಲೂ ಪಂತ್ ಅದೇ ದಿಟ್ಟ ಬ್ಯಾಟಿಂಗ್ಗಾಗಿ ಶ್ಲಾಘಿಸಲ್ಪಡುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ 3ನೇ ಪಂದ್ಯದಲ್ಲಿ 97, 4ನೇ ಟೆಸ್ಟ್ನಲ್ಲಿ 89 ರನ್ ಬಾರಿಸಿದ್ದ ಪಂತ್ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ನ ಆರಂಭಿಕ ಇನ್ನಿಂಗ್ಸ್ನಲ್ಲಿ 91 ರನ್ ಬಾರಿಸಿದ್ದರು. ಪಂತ್ ದಿಟ್ಟ ಬ್ಯಾಟಿಂಗ್ನಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಥರಥರ ಮೀಮ್ಸ್ ಹರಿದಾಡುತ್ತಿವೆ.