ಬಾಂಗ್ಲಾದೇಶ ತಂಡವು ಟೆಸ್ಟ್ ಮತ್ತು ಟಿ20 ಸರಣಿಗಳನ್ನು ಆಡಲು ಭಾರತ ಪ್ರವಾಸ ಕೈಗೊಂಡಿದೆ. ಸದ್ಯ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಮುಗಿದೆ. ಈ ಪಂದ್ಯವನ್ನು ಟೀಮ್ ಇಂಡಿಯಾ ಭಾರೀ ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದೆ.
ಉಭಯ ತಂಡಗಳು ಎರಡನೇ ಟೆಸ್ಟ್ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಉಭಯ ತಂಡಗಳು ಕಾನ್ಪುರ ತಲುಪಿವೆ. ಈ ಎರಡು ಪಂದ್ಯಗಳ ಟೆಸ್ಟ್ ಸರಣಿ ಮುಗಿದ ಬಳಿಕ ಚುಟುಕು ಸಮರ ಶುರುವಾಗಲಿದೆ.

ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಅದಕ್ಕೂ ಮುನ್ನ ಉಭಯ ತಂಡಗಳ ಟಿ20 ಪಂದ್ಯದ ಮೇಲೆ ಅಪಾಯದ ಮೋಡ ಕವಿದಿದೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಹಿಂದೂ ಮಹಾಸಭಾ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಅಕ್ಟೋಬರ್ 6 ರಂದು ಬಂದ್ಗೆ ಕರೆ ನೀಡಿದೆ. ಅದೇ ದಿನ ಗ್ವಾಲಿಯರ್ನಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ಪಂದ್ಯವನ್ನೂ ವಿರೋಧಿಸಿ ಬಂದ್ ನಡೆಸುವುದಾಗಿ ಹಿಂದೂ ಮಹಾಸಭಾ ತಿಳಿಸಿದೆ.
ಮಾದ್ಯಮಗಳೊಂದಿಗೆ ಮಾತನಾಡಿರುವ ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ಅವರು, ಅಕ್ಟೋಬರ್ 6 ರಂದು ಗ್ವಾಲಿಯರ್ನಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ ಪಂದ್ಯವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಇನ್ನೂ ಮುಂದುವರೆದಿದ್ದು, ಬಾಂಗ್ಲಾದೇಶದೊಂದಿಗೆ ಕ್ರಿಕೆಟ್ ಆಡುವುದು ಸರಿಯಲ್ಲ. ಹೀಗಾಗಿ ಪಂದ್ಯದ ದಿನದಂದು ಹಿಂದೂ ಮಹಾಸಭಾ ಗ್ವಾಲಿಯರ್ ಬಂದ್ಗೆ ಕರೆ ನೀಡಿದ್ದು, ಅಗತ್ಯ ವಸ್ತುಗಳ ಮೇಲೆ ಯಾವುದೇ ನಿರ್ಬಂಧವಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಜೈವೀರ್ ಭಾರದ್ವಾಜ್, ತಿರುಪತಿಯಲ್ಲಿ ಲಡ್ಡುಗಳನ್ನು ಕಲಬೆರಕೆ ಮಾಡಿದವರಿಗೆ ಮರಣದಂಡನೆ ವಿಧಿಸಬೇಕು. ಈ ಲಡ್ಡುಗಳನ್ನು ಅಯೋಧ್ಯೆಯ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದ ಸಂದರ್ಭದಲ್ಲೂ ವಿತರಿಸಲಾಗಿದೆ. ಈ ಘಟನೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೊದಲ ಟಿ20 ಪಂದ್ಯ - ಅಕ್ಟೋಬರ್ 6, ರಾತ್ರಿ 7.00 ಗಂಟೆಗೆ, ಧರ್ಮಶಾಲಾ
ಎರಡನೇ ಟಿ20 ಪಂದ್ಯ - ಅಕ್ಟೋಬರ್ 9, ಸಂಜೆ 7.00 ಗಂಟೆಗೆ, ದೆಹಲಿ
ಮೂರನೇ ಟಿ20 ಪಂದ್ಯ - ಅಕ್ಟೋಬರ್ 12, ರಾತ್ರಿ 7.00 ಗಂಟೆಗೆ, ಹೈದರಾಬಾದ್