
ಹುಬ್ಬಳ್ಳಿ, ಅಕ್ಟೋಬರ್ 25: ಶ್ರೀದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಕ್ರಿಕ್ ಕಿಂಗ್ಡಂ ಸಹಯೋಗದಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಒಳಾಂಗಣ ಕ್ರೀಡಾಂಗಣವನ್ನು ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಶುಕ್ರವಾರ (ಅಕ್ಟೋಬರ್ 25) ಉದ್ಘಾಟಿಸಿದರು.
ಚೊಚ್ಚಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಿದ್ದ ಹಿಟ್ಮ್ಯಾನ್ ರೋಹಿತ್ ಅವರನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಸ್ಟಾರ್ ಆಟಗಾರನ ಆಗಮನದಿಂದ ಶ್ರೀದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣ ಉದ್ಘಾಟನೆ ಕಾರ್ಯಕ್ರಮ ಕಳೆಗುಟ್ಟಿತ್ತು.
ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆ ಗೊಳಿಸಿದ ಬಳಿಕ, ಅಭಿಮಾನಿಗಳನ್ನುದ್ದೇಶಿ ಮಾತನಾಡಿದ್ದ ಶರ್ಮಾ, 'ನಾನು ಇದೇ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದೇನೆ. ಭಾರತ ಕ್ರಿಕೆಟ್ ತಂಡಕ್ಕೆ ಕರ್ನಾಟಕದ ಕೊಡುಗೆ ಸಾಕಷ್ಟಿದೆ. ಹುಬ್ಬಳ್ಳಿಗೆ ಬಂದಿರೋದು ಖುಷಿ ನೀಡಿದೆ,' ಎಂದರು.
ಮಾತು ಮುಂದುವರೆಸಿದ ರೋಹಿತ್, 'ಮತ್ತೆ ಮತ್ತೆ ಹುಬ್ಬಳ್ಳಿಗೆ ಬರುತ್ತಿರುತ್ತೇನೆ. ನಿಮ್ಮ ಪ್ರೀತಿ-ಅಭಿಮಾನಕ್ಕೆ ನಾನು ಸದಾ ಋಣಿ ಎಂದು ಅಭಿಮಾನಿಗಳತ್ತ ಕೈಬೀಸಿದರು. ಬಳಿಕ ಸೆಲ್ಫಿಗಾಗಿ ಮುಗಿಬಿದ್ದ ನೂರಾರು ಅಭಿಮಾನಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿ ಖುಷಿಪಟ್ಟರು.
ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಚೊಚ್ಚಲ ಬಾರಿಗೆ (ಟೆಸ್ಟ್ನಲ್ಲಿ) ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ್ದ ರೋಹಿತ್ 2 ಶತಕ, 1 ದ್ವಿಶತಕ ಬಾರಿಸಿದ್ದರು. ಅಲ್ಲದೆ ಒಂದೇ ಟೆಸ್ಟ್ ಸರಣಿಯಲ್ಲಿ 529 ರನ್ ಗಳಿಸಿ, ಒಂದಿಷ್ಟು ಅಪರೂಪದ ದಾಖಲೆಗಳನ್ನು ಬರೆದಿದ್ದರು.