
ಹುಬ್ಬಳ್ಳಿ, ಅಕ್ಟೋಬರ್ 23: ರಾಂಚಿಯಲ್ಲಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ vs ದಕ್ಷಿಣ ಆಫ್ರಿಕಾ ನಡುವಿನ 3ನೇ ಮತ್ತು ಕೊನೆಯ ಟೆಸ್ಟ್ನಲ್ಲಿ ದ್ವಿಶತಕ ಬಾರಿಸಿದ್ದ ಭಾರತದ ಆರಂಭಿಕ ಬ್ಯಾಟ್ಸ್ಮನ್ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಅಕ್ಟೋಬರ್ 25ರಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ.
ಹುಬ್ಬಳ್ಳಿಯ ಶ್ರೀ ದುರ್ಗಾ ಸ್ಫೋರ್ಟ್ಸ್ ಅಕಾಡೆಮಿ ಹಾಗು ಕ್ರಿಕ್ ಕಿಂಗ್ಡಮ್ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಒಳಾಂಗಣ ಕ್ರೀಡಾಂಗಣವನ್ನು ರೋಹಿತ್ ಶರ್ಮಾ ಉದ್ಘಾಟಿಸಲಿರುವುದಾಗಿ ಅಕಾಡೆಮಿಯ ಅಧ್ಯಕ್ಷ ವೀರೇಶ ಉಂಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರೇಶ್, 'ನಗರದ ಕೋರ್ಟ್ ಪಕ್ಕದಲ್ಲಿರುವ ಬಿಎಸ್ ಕಲ್ಲೂರು ಲೇಔಟ್ನಲ್ಲಿ ನಿರ್ಮಿಸಲಾಗಿರುವ ಕ್ರೀಡಾಂಗಣವನ್ನು ರೋಹಿತ್ ಶರ್ಮಾ ಉದ್ಘಾಟನೆ ಮಾಡಲಿದ್ದಾರೆ. ಬಳಿಕ 1 ಗಂಟೆಗೂ ಹೆಚ್ಚು ಸಮಯ ಮಕ್ಕಳೊಂದಿಗೆ ಕಳೆಯಲಿದ್ದಾರೆ,' ಎಂದು ಮಾಹಿತಿ ನೀಡಿದರು.
ಕ್ರೀಡಾಂಗಣ ಉದ್ಘಾಟನೆ ಬಳಿಕ ಹುಬ್ಬಳ್ಳಿಯ ಕಿರಿಯಾಡ್ ಪ್ರೆಸ್ಟೀಜ್ ಹೋಟೆಲ್ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ರೋಹಿತ್ ಪತ್ನಿ ರಿತಿಕಾ ಸಜ್ದೇಹ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಉಂಡಿ ವಿವರಿಸಿದರು.
ಭಾರತಕ್ಕೆ ಪ್ರವಾಸ ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಚೊಚ್ಚಲ ಬಾರಿಗೆ ಟೆಸ್ಟ್ನಲ್ಲಿ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ್ದ ರೋಹಿತ್ 2 ಶತಕ, 1 ದ್ವಿಶತಕ ಬಾರಿಸಿದ್ದಾರೆ. ಅಲ್ಲದೆ ಇದೇ ಪಂದ್ಯದಲ್ಲಿ ಅಪರೂಪದ ಹಲವು ದಾಖಲೆಗಳನ್ನೂ ನಿರ್ಮಿಸಿದ್ದರು.