ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಹಾಗೂ ಟೀಮ್ ಇಂಡಿಯಾ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸ್ನೇಹ ಎಲ್ಲರಿಗೂ ಚಿರಪರಿಚಿತ. ಇತ್ತೀಚಿಗೆ ಅಹಮದಾಬಾದ್ನಲ್ಲಿ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಫೈನಲ್ ಪಂದ್ಯವನ್ನು ವೀಕ್ಷಿಸಲು ಎಬಿಡಿ ಬಂದಿದ್ದರು. ಆಗಲೂ ವಿರಾಟ್, ಮಿಸ್ಟರ್ 360 ಆಟಗಾರ ಗುಣಗಾನ ಮಾಡಿದರು. ಇಂತಹ ಗಾಢ ಸ್ನೇಹದಲ್ಲೂ ಬಿರುಕು ಬಿಟ್ಟಿತ್ತು ಎಂದರೆ ನಂಬಲು ಸಾಧ್ಯವೇ? ಈ ಬಗ್ಗೆ ಈಗ ಎಬಿಡಿ ಸ್ಪಷ್ಟ ಪಡಿಸಿದ್ದಾರೆ.
ಕಳೆದ ವರ್ಷ ಇಂಗ್ಲೆಂಡ್ ಭಾರತದ ಪ್ರವಾಸವನ್ನು ಬೆಳೆಸಿತ್ತು. ಆಗ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯಿಂದ ವೈಯಕ್ತಿಕ ಕಾರಣಗಳನ್ನು ನೀಡಿ ಹಿಂದೆ ಸರಿದಿದ್ದರು. ವಿರಾಟ್ ಅವರ ಈ ನಿರ್ಧಾರ ಅವರ ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿತ್ತು. ವಿರಾಟ್ ಆಗ ಟ್ರೋಲ್ಗೆ ಗುರಿಯಾಗಿದ್ದರು. ಆಗ ಎಬಿಡಿ ತನ್ನ ಸ್ನೇಹಿತನ ಬೆಂಬಲಕ್ಕೆ ನಿಂತರು. ಈ ಬಗ್ಗೆ ಎಬಿಡಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದರು. ಅದೇ ವೇಳೆ ಎಬಿಡಿ ಬಾಯಿಂದ ಅದೊಂದು ಸತ್ಯ ಹೊರ ಬಂದಿತು.

ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಇಂಗ್ಲೆಂಡ್ ಸರಣಿಯಲ್ಲಿ ಆಡುತ್ತಿಲ್ಲ ಎಂದು ಎಬಿಡಿ ತಿಳಿಸಿದ್ದರು. ಡಿವಿಲಿಯರ್ಸ್ ಹೇಳಿಕೆ ಸಖತ್ ಸದ್ದು ಮಾಡಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಎಬಿಡಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ವಿರಾಟ್ ಕಳೆದ ಕೆಲವು ತಿಂಗಳುಗಳಿಂದ ತಮ್ಮ ಸಂಪರ್ಕದಲ್ಲಿದ್ದಾರೆ. ಆಕಸ್ಮಿಕವಾಗಿ ಮಾಡಿದ ಆ ಒಂದು ತಪ್ಪು ನಮ್ಮಿಬ್ಬರ ನಡುವಿನಲ್ಲಿ ಕೊಂಚ ಭಿನ್ನಾಭಿಪ್ರಾಯ ಮೂಡಿಸಿತ್ತು. ವಿರಾಟ್, ಅನುಷ್ಕಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ಸುದ್ದಿಯನ್ನು ನಾನು ಬಹಿರಂಗ ಪಡಿಸಿದ್ದೆ. ಆಗ ಬಾಯಿತಪ್ಪಿ ಬಂದ ದೊಡ್ಡ ತಪ್ಪು ನನ್ನನ್ನು ಬಹುವಾಗಿ ಕಾಡಿತು. ಆದರೆ ವಿರಾಟ್ ಕಳೆದ ಆರು ತಿಂಗಳ ಹಿಂದೆ ಮಾತನಾಡಿಸಲು ಆರಂಭಿಸಿದಾಗ ನನಗೆ ಸಮಾಧಾನ ತಂದಿತು ಎಂದು ತಿಳಿಸಿದ್ದಾರೆ.

ಎಬಿಡಿ ವಿರಾಟ್ ಕೊಹ್ಲಿ ಅವರ ನಿವೃತ್ತಿಯ ಬಗ್ಗೆಯೂ ಕೆಲವು ಮಾತುಗಳನ್ನು ಆಡಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ವಿರಾಟ್ ಸಹ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಏರಿಳಿತಗಳನ್ನು ಕಂಡಿದ್ದಾರೆ. ನಾವು ನಿವೃತ್ತಿಯ ಬಗ್ಗೆ ಈ ಹಿಂದೆ ಮಾತನಾಡಿದ್ದೇವು ಎಂದಿದ್ದಾರೆ. ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸಿದ್ದಾಗ ಇಬ್ಬರ ಮನಸ್ಥಿತಿ ಸಮನಾಗಿದ್ದವು. ಡಿವಿಲಿಯರ್ಸ್ ಸದ್ಯ ಖುಷಿಯ ವಿಚಾರ ಎಂದರೆ ವಿರಾಟ್ ಈಗಲೂ ಕ್ರಿಕೆಟ್ ಆಡುತ್ತಿದ್ದಾರೆ ಎಂಬುದಾಗಿದೆ. ವಿರಾಟ್ ಈ ನಿರ್ಧಾರವನ್ನು ಮನಸ್ಸಿನಿಂದ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಆರ್ಸಿಬಿ ಪರ ಹಲವು ವರ್ಷಗಳ ಕಾಲ ಆಡಿದ್ದಾರೆ. ಅಲ್ಲದೆ ಹಲವು ಸ್ಮರಣೀಯ ಇನಿಂಗ್ಸ್ಗಳನ್ನು ಕಟ್ಟಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಮೈದಾನದಲ್ಲಿ ಅಷ್ಟೇ ಅಲ್ಲ, ಮೈದಾನದ ಹೊರಗೂ ಎಬಿಡಿ, ವಿರಾಟ್ ಬೆಸ್ಟ್ ಫ್ರೆಂಡ್ಸ್. ಹೀಗಾಗಿ ಆರ್ಸಿಬಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದಾಗ ವಿರಾಟ್, ಎಬಿಡಿಗೂ ಧನ್ಯವಾದ ತಿಳಿಸಿದ್ದಾರೆ.