
ನವದೆಹಲಿ, ಜುಲೈ 20: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ್ ದಿಲೀಪ್ ವೆಂಗ್ ಸರ್ಕಾರ್ ಅವರು ಟೀಮ್ ಇಂಡಿಯಾ ನಿರ್ವಹಣಾ ಸಮಿತಿ (ಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈಗಿನ ಮಧ್ಯಮ ಕ್ರಮಾಂಕ ಬ್ಯಾಟಿಂಗ್ ಬಗ್ಗೆ ತನಗಿರುವ ಅಸಮಾಧಾನವನ್ನು ಕೊಂಚ ಖಾರವಾಗೇ ಅವರು ಹೊರಹಾಕಿದ್ದಾರೆ.
ಬ್ಯಾಟಿಂಗ್ ಕ್ರಮಾಂಕದ ಕುರಿತು ಮಾತನಾಡಿರುವ ವೆಂಗ್ ಸರ್ಕಾರ್, 'ನಂ. 3 ಮತ್ತು ನಂ. 4 ಬ್ಯಾಟಿಂಗ್ ಕ್ರಮಾಂಕ ತುಂಬಾ ನಿರ್ಣಾಯಕ ಪಾತ್ರ ವಹಿಸುವಂತದ್ದು. ಹಾಗಿದ್ದೂ ಆಯ್ಕೆ ಸಮಿತಿ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಫಿಕ್ಸ್ಡ್ ಬ್ಯಾಟ್ಸ್ಮನ್ ಇಲ್ಲ ಎನ್ನುವುದನ್ನು ಕೇಳುವಾಗ ಅಯ್ಯೋ ಅನ್ನಿಸುತ್ತದೆ' ಎಂದು ವ್ಯಂಗ್ಯವಾಡಿದರು.
ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆಗಳನ್ನು ತರುತ್ತಿರುವ ತಂಡದ ನಿರ್ವಹಣಾ ಸಮಿತಿಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತ ವೆಂಗ್ ಸರ್ಕಾರ್, 'ಏಕದಿನಕ್ಕೆ ಅಜಿಂಕ್ಯ ರಹಾನೆ ಫಿಟ್ ಅಲ್ಲ ಎಂಬಂತ ರೀತಿಯ ತಂಡ ನಿರ್ವಹಣಾ ಸಮಿತಿಯ ನಿಲುವನ್ನು ನೋಡುವಾಗ ಬೇಸರವಾಗುತ್ತೆ' ಎಂದರು.
'ಅಫ್ಘಾನಿಸ್ತಾನ ಎದುರಿನ ಟೆಸ್ಟ್ ಗಾಗಿ ನಾಯಕರನ್ನಾಗಿ ನೇಮಿಸಿದ್ದ ರಹಾನೆ ಅವರನ್ನು ಅದರ ಮುಂದಿನ ಏಕದಿನಕ್ಕೆ ತಂಡದಿಂದ ತೆಗೆದು ಹಾಕಲಾಯಿತು. ರಹಾನೆಯಂತ ಉತ್ತಮ ಆಟಗಾರರ ಮೇಲೆ ಯಾಕೆ ನಿಮಗೆ ನಂಬಿಕೆಯಿಲ್ಲ? ಯಾಕೆ ಅವರು ಆಂಗ್ಲರೆದುರು ಸ್ಪರ್ಧಿಸಲು ಅರ್ಹ ಆಟಗಾರ ಅಲ್ಲವೆ?' ಎಂದು ವೆಂಗ್ ಸರ್ಕಾರ್ ಭಾರತ ಕ್ರಿಕೆಟ್ ಸಮಿತಿಯನ್ನು ಪ್ರಶ್ನಿಸಿದ್ದಾರೆ.
ಮಧ್ಯಮ ಕ್ರಮಾಂದಲ್ಲಿ ಕೆಎಲ್ ರಾಹುಲ್ ಮತ್ತು ಅಜಿಂಕ್ಯ ರಹಾನೆ ಉತ್ತಮ ರನ್ ನೀಡಬಲ್ಲರು ಎಂದು ಭಾವಿಸಿರುವ ದಿಲೀಪ್, ಟೀಮ್ ಇಂಡಿಯಾದ ಆಡುವ 11 ಆಟಗಾರರಲ್ಲಿ ರಾಹುಲ್ ಸ್ಥಾನವೇ ಅನಿಶ್ಚಿತ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.