ಭಾರತ ಮತ್ತು ಬಾಂಗ್ಲಾದೇಶ ಟೆಸ್ಟ್ ಸರಣಿ ಆರಂಭಕ್ಕೆ ಕೇವಲ ಒಂದು ವಾರ ಮಾತ್ರ ಉಳಿದಿದೆ. ಸೆಪ್ಟೆಂಬರ್ 8 ರಂದು ಬಿಸಿಸಿಐ ಮೊದಲ ಟೆಸ್ಟ್ಗೆ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಕೆಲವು ಹೊಸ ಮುಖಗಳೂ ಕಾಣಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.
ಅದರಲ್ಲಿ ವೇಗದ ಬೌಲರ್ ಯಶ್ ದಯಾಳ್ ಹೆಸರು ಕೂಡ ಒಂದು. ಈಗ ಯಶ್ ದಯಾಳ್ ಟೀಮ್ ಇಂಡಿಯಾ ವೇಗಿಗಳಾದ ಅರ್ಷದೀಪ್ ಸಿಂಗ್ ಹಾಗೂ ಖಲೀಲ್ ಅಹ್ಮದ್ ಅವರನ್ನು ಹಿಂದಿಕ್ಕಿ ತಂಡದಲ್ಲಿ ಸ್ಥಾನ ಪಡೆಯುವುದು ಹೇಗೆ ಎಂಬ ಚರ್ಚೆ ನಡೆಯುತ್ತಿದೆ.

ವೈಟ್ ಬಾಲ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬೌಲರ್ಗಳಲ್ಲಿ ಅರ್ಷದೀಪ್ ಸಿಂಗ್ ಕೂಡ ಒಬ್ಬರು.
2024ರ ಟಿ20 ವಿಶ್ವಕಪ್ನಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮೂಲಕ ಅರ್ಶ್ದೀಪ್ ಸೈ ಎನಿಸಿಕೊಂಡಿದ್ದರು. ಇದಾದ ನಂತರ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಬಗ್ಗೆ ಹಲವು ಚರ್ಚೆಗಳು ನಡೆದಿದ್ದವು.
ಆದರೆ ದುಲೀಪ್ ಟ್ರೋಫಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ಅರ್ಷದೀಪ್ ಯಶಸ್ವಿಯಾಗಲಿಲ್ಲ. ಹೀಗಾಗಿ ಬಿಸಿಸಿಐ ಆಯ್ಕೆ ಸಮಿತಿ ಕಣ್ಣು ಯಶ್ ದಯಾಳ್ ಮೇಲೆ ಬಿತ್ತು. ಇದೀಗ ಮೊದಲ ಟೆಸ್ಟ್ಗೆ ಆಯ್ಕೆಯಾಗದ ಆಟಗಾರರಿಗೆ ಇನ್ನೂ ಅವಕಾಶವಿದೆ. ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಮತ್ತು ನ್ಯೂಜಿಲೆಂಡ್ ಸರಣಿಗಳಿಗೆ ತಂಡವನ್ನು ಇನ್ನೂ ಪ್ರಕಟಿಸಿಲ್ಲ.
ದುಲೀಪ್ ಟ್ರೋಫಿಯಲ್ಲಿ ಅರ್ಷದೀಪ್ ಭಾರತ ಡಿ ತಂಡದ ಭಾಗವಾಗಿದ್ದರು. ಆಡಿದ ಎರಡು ಇನ್ನಿಂಗ್ಸ್ನಲ್ಲಿ ಕೇವಲ ಎರಡು ವಿಕೆಟ್ ಪಡೆದಿದ್ದರು. ಇನ್ನೊಂದೆಡೆ ಅರ್ಷದೀಪ್ ಅವರಿಗಿಂತ ಯಶ್ ದಯಾಳ್ ಹೆಚ್ಚು ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದು, ಅಮೋಘ ಪ್ರದರ್ಶನ ನೀಡಿದ್ದಾರೆ.
ದಯಾಳ್ ಮತ್ತು ಖಲೀಲ್ ಇಬ್ಬರೂ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡಿದರು. ಖಲೀಲ್ ಭಾರತ ಎ ಪರ 5 ವಿಕೆಟ್ ಪಡೆದರೂ, ಸಾಕಷ್ಟು ರನ್ಗಳನ್ನು ಬಿಟ್ಟುಕೊಟ್ಟರು. ದಯಾಳ್ 4 ವಿಕೆಟ್ಗಳನ್ನು ಉರುಳಿಸಿ ಎದುರಾಳಿ ತಂಡದ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಅವರು ಎರಡನೇ ಇನ್ನಿಂಗ್ಸ್ನಲ್ಲಿಯೂ ರಿಂಕು ಸಿಂಗ್ ಮತ್ತು ಧ್ರುವ್ ಜುರೆಲ್ ವಿಕೆಟ್ಗಳನ್ನು ಕಬಳಿಸುವ ಮೂಲಕ ಪಂದ್ಯಕ್ಕೆ ತಿರುವು ನೀಡಿದರು.
ಈ ಭರ್ಜರಿ ಪ್ರದರ್ಶನದ ಮೂಲಕ ದಯಾಳ್ ಟೀಮ್ ಇಂಡಿಯಾ ಎಂಟ್ರಿ ಕೊಟ್ಟಿದ್ದಾರೆ. ದಯಾಳ್ ಇದುವರೆಗೆ 24 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರೆ, ಖಲೀಲ್ ಮತ್ತು ಅರ್ಷದೀಪ್ ಕ್ರಮವಾಗಿ 13 ಮತ್ತು 17 ಪಂದ್ಯಗಳನ್ನು ಆಡಿದ್ದಾರೆ.