
ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್ದೀಪ್ ಯಾದವ್ ತನ್ನ ಕ್ರಿಕೆಟ್ ಜೀವನದ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ. ಐಪಿಎಲ್ನಲ್ಲಿ ಕೊಲ್ಕತ್ತಾ ತಂಡದ ಸದಸ್ಯರಾಗಿರುವ ಕುಲ್ದೀಪ್ ಯಾದವ್ ಗೌತಮ್ ಗಂಭೀರ್ ಮತ್ತು ವಾಸಿಮ್ ಅಕ್ರಂ ತನ್ನ ಮೇಲೆ ಯಾವ ರೀತಿ ಪ್ರಭಾವ ಬೀರಿದರು ಎಂದು ಹೇಳಿಕೊಂಡಿದ್ದಾರೆ.
ಕೊಲ್ಕತ್ತಾ ತಂಡವನ್ನು ಎರಡು ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ಗೌತಮ್ ಗಂಭೀರ್. ಈ ಸಂದರ್ಭದಲ್ಲಿ ಗಂಭೀರ್ ಕುಲ್ದೀಪ್ ಯಾದವ್ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದ್ದಾರೆ ಎಂದು ಸ್ವತಃ ಕಲ್ದೀಪ್ ಹೇಳಿಕೊಂಡಿದ್ದಾರೆ. ಕೆಕೆಆರ್ನಲ್ಲಿದ್ದಾಗ ಮಾತ್ರವಲ್ಲ ಅದಾದ ಬಳಿಕವೂ ನನಗೆ ಬೆಂಬಲವಾಗಿದ್ದರು ಎಂದಿದ್ದಾರೆ ಟೀಮ್ ಇಂಡಿಯಾ ಸ್ಪಿನ್ನರ್.
ಗಂಭೀರ್ ನನ್ನ ಜೊತೆವ ಹೆಚ್ಚಾಗಿ ಮಾತನಾಡುತ್ತಿದ್ದರು, ನನ್ನನ್ನು ಯಾವಾಗಲೂ ಆಟದಲ್ಲಿ ಉತ್ತೇಜಿಸುತ್ತಿದ್ದರು, ನಾಯಕನಿಂದ ಆ ರೀತಿಯ ಉತ್ತೇಜನ ಸಿಕ್ಕರೆ ಯುವ ಆಟಗಾರನಿಗೆ ಅದೊಂದು ದೊಡ್ಡ ಬಲ ಸಿಕ್ಕಂತಾಗುತ್ತದೆ, ನನಗೆ ಅದು ಸಾಕಷ್ಟು ಧೈರ್ಯವನ್ನು ನೀಡಿತ್ತು, ಮತ್ತು ಅದು ನನ್ನ ಫಲಿತಾಂಶದಲ್ಲಿ ಪ್ರತಿಫಲಿಸುತ್ತಿತ್ತು ಎಂದಿದ್ದಾರೆ ಕುಲ್ದೀಪ್ ಯಾದವ್.
ಪಾಕಿಸ್ತಾನದ ಮಾಜಿ ನಾಯಕ ಕೊಲ್ಕತ್ತಾ ತಂಡದ ಮಾಜಿ ಕೋಚ್ ವಾಸಿಮ್ ಅಕ್ರಮ್ ಬಗ್ಗೆಯೂ ಮೆಚ್ಚುಗೆಯ ಮಾತನ್ನಾಡಿದ್ದಾರೆ ಕುಲ್ದೀಪ್ ಯಾದವ್. ಆಟದ ಮಾನಸಿಕ ಅಂಶದ ಬಗ್ಗೆ ಸಾಕಷ್ಟು ವಿಚಾರಗಳನ್ನು ವಾಸಿಮ್ ಅಕ್ರಂ ತಿಳಿಸಿಕೊಟ್ಟಿದ್ದಾರೆ ಎಂದು ಕುಲ್ದೀಪ್ ಯಾದವ್ ಹೇಳಿದ್ದಾರೆ.
ಕೋಚ್ ವಾಸಿಮ್ ಅಕ್ರಂ ನನ್ನನ್ನು ತುಂಬಾ ಇಷ್ಟಪಡುತ್ತಿದ್ದರು, ಬೌಲಿಂಗ್ ಬಗ್ಗೆ ಅವರು ಹೆಚ್ಚಾಗಿ ಮಾತನಾಡುತ್ತಿರಲಿಲ್ಲ, ಆದರೆ ಅವರು ಮಾನಸಿಕವಾಗಿ ಆಟವನ್ನು ಹೇಗೆ ತೆಗೆದುಕೊಳ್ಳಬೇಕೆಂದು ನನ್ನನ್ನು ಸಿದ್ಧಪಡಸಿಸುತ್ತಿದ್ದರು ಎಂದಿದ್ದಾರೆ. ಅವರ ಜೊತೆಗೆ ಆಟದ ಸಂದರ್ಭದಲ್ಲಿ ಕುಳಿತು ಪ್ರಶ್ನೆಯನ್ನು ಕೇಳಿ ಉತ್ತರವನ್ನು ಪಡೆಯುತ್ತಿದ್ದೆ, ನೈಜ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕೆಂಬುದರ ಬಗ್ಗೆ ಅವರು ತಿಳಿಸಿಕೊಡುತ್ತಿದ್ದರು ಎಂದು ವಾಸಿಮ್ ಅಕ್ರಂ ಬಗ್ಗೆ ಹೇಳಿದ್ದಾರೆ ಕುಲ್ದೀಪ್ ಯಾದವ್.