ಭಾರತದಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದೆ. ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಶ್ರೀಲಂಕಾದ ಕ್ಯಾಂಡಿಯಲ್ಲಿ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದಾರೆ.
ಕೆಲವೊಂದು ಹೆಸರುಗಳು ನಿರೀಕ್ಷಿತವಾಗಿದ್ದರೂ, ಏಷ್ಯಾ ಕಪ್ ನಲ್ಲಿದ್ದ ಕೆಲವು ಟೀಮ್ ಸದಸ್ಯರು ವಿಶ್ವಕಪ್ ತಂಡದಲ್ಲಿ ಇಲ್ಲದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಸಾಮರ್ಥ್ಯವಿಲ್ಲದ ಅಥವಾ ಇತ್ತೀಚಿನ ಸಾಧನೆಯನ್ನು ಅವಲೋಕಿಸಿದೇ ತಂಡಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆಯೇ ಎನ್ನುವ ಚರ್ಚೆ ಆರಂಭವಾಗಿದೆ.

ಒಟ್ಟು ಹದಿನೈದು ಸದಸ್ಯರ ತಂಡದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವುದು ಕೆ.ಎಲ್.ರಾಹುಲ್ ಮಾತ್ರ. ವೇಗದ ಬೌಲರ್ ಪ್ರಸಿದ್ದ್ ಕೃಷ್ಣ ತಂಡದಲ್ಲಿ ಸ್ಥಾನ ಪಡೆಯದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಅದೇ ರೀತಿ, ಕೇರಳದಿಂದ ಸಂಜು ಸ್ಯಾಮ್ಸನ್ ಆಯ್ಕೆ ಆಗದೇ ಇರುವುದು.
ಒಟ್ಟಾರೆ ತಂಡದಲ್ಲಿ ಮಹಾರಾಷ್ಟ್ರದಿಂದ ನಾಲ್ಕು (ರೋಹಿತ್ ಶರ್ಮಾ, ಶ್ರೇಯಸ್ ಐಯ್ಯರ್, ಸೂರ್ಯಕುಮಾರ್ ಯಾದವ್, ಶಾರ್ದೂಲ್ ಠಾಕೂರ್), ಗುಜರಾತ್ ನಿಂದ ನಾಲ್ಕು (ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ) ಆಟಗಾರರು ಇದ್ದಾರೆ. ಆ ಮೂಲಕ, ಈ ಎರಡು ರಾಜ್ಯಗಳು ಸಿಂಹಪಾಲನ್ನು ಪಡೆದುಕೊಂಡಿದೆ.
ರೋಹಿತ್ ಶರ್ಮಾ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಮುಂಬೈನವರು. ಇನ್ನು ಬಿಸಿಸಿಐನಲ್ಲಿ ಕಾರ್ಯದರ್ಶಿಯಾಗಿರುವ ಜಯ್ ಅಮಿತ್ ಭಾ ಶಾ ಅವರು ಗುಜರಾತ್ ಮೂಲದವರು. ಹಾಗಾಗಿ, ಈ ಎರಡು ರಾಜ್ಯಗಳಿಂದ ಹೆಚ್ಚು ಆಟಗಾರರನ್ನು ಆಯ್ಕೆ ಮಾಡಲಾಗಿದೆಯೇ ಎನ್ನುವ ಚರ್ಚೆಯೂ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಕರ್ನಾಟಕ ಮೂಲದ ರೋಜರ್ ಬಿನ್ನಿಯವರು ಬಿಸಿಸಿಐ ಅಧ್ಯಕ್ಷರಾಗಿದ್ದರೂ, ರಾಹುಲ್ ದ್ರಾವಿಡ್ ಟೀಮ್ ಮ್ಯಾನೇಜರ್ ಆಗಿದ್ದರೂ ಕರ್ನಾಟಕದಿಂದ ಒಬ್ಬರು ಮಾತ್ರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸಾಮಾನ್ಯವಾಗಿ ದೇಶೀಯ ಕ್ರಿಕೆಟ್ (ರಣಜಿ, ದುಲೀಪ್, ದೇವಧರ್ ಟ್ರೋಫಿ ಮುಂತಾದವು) ಸಾಧನೆ ಆಧರಿಸಿ ತಂಡವನ್ನು ಆಯ್ಕೆ ಮಾಡಬೇಕು. ಇದರ ಆಧಾರದ ಮೇಲೆ ತಂಡವನ್ನು ಸಿಲೆಕ್ಟ್ ಮಾಡುತ್ತಿಲ್ಲ ಎಂದು ಸುನೀಲ್ ಗವಾಸ್ಕರ್ ಸೇರಿ ಹಲವು ಕ್ರಿಕೆಟಿಗರು ಆಪಾದನೆ ಮಾಡಿದ್ದುಂಟು.
ತಂಡದ ಆಯ್ಕೆಯ ವಿಚಾರದಲ್ಲಿ ಕರ್ನಾಟಕ ಮತ್ತು ದಕ್ಷಿಣದ ಆಟಗಾರರ ಮೇಲೆ ಮಲತಾಯಿ ಧೋರಣೆ ತಾಳಲಾಗುತ್ತಿದೆ ಎನ್ನುವ ಆರೋಪ ಹಿಂದಿನಿಂದಲೂ ಇದೆ. ಈಗ ಹಲವು ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆ, ತಂಡದ ಆಯ್ಕೆ ಹೇಗೆ, ಆಯ್ಕೆ ಸಮಿತಿಯ ಮೂಡ್ ಮೇಲೋ, ಆಟಗಾರರ ಸಾಮರ್ಥ್ಯದ ಮೇಲೋ? ಎನ್ನುವುದು.