ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಸೋತ ಬಳಿಕ ಟೀಮ್ ಇಂಡಿಯಾ ಶತಾಯ ಗತಾಯ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಗೆಲ್ಲುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಟೀಮ್ ಮ್ಯಾನೇಜ್ಮೆಂಟ್ ಈಗಿನಿಂದಲೇ ತಯಾರಿ ನಡೆಸಿದೆ. ಸಿಕ್ಕ ಅವಕಾಶದಲ್ಲಿ ಅಬ್ಬರಿಸುವ ಆಟಗಾರರಿಗೆ ಟೀಮ್ ಮ್ಯಾನೇಜ್ಮೆಂಟ್ ಮಣೆ ಹಾಕುತ್ತಿದೆ. ಟೀಮ್ ಇಂಡಿಯಾಕ್ಕೆ ಚುಟುಕು ವಿಶ್ವಕಪ್ ತಯಾರಿಗೆ ಇನ್ನು ಕೆಲವೇ ಪಂದ್ಯಗಳು ಬಾಕಿ ಇವೆ. ಉಳಿದ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಖಾಲಿ ಸ್ಲಾಟ್ಗಳನ್ನು ಫಿಲ್ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ.
ಟಿ20 ವಿಶ್ವಕಪ್ ಮೆಗಾ ಟೂರ್ನಮೆಂಟ್ಗೆ ಮುನ್ನ ಟೀಂ ಇಂಡಿಯಾಗೆ ಇದೀಗ ಕೆಲವೇ ಪಂದ್ಯಗಳು ಬಾಕಿ ಉಳಿದಿವೆ. ಇದರ ಆಧಾರದ ಮೇಲೆ ಕೋಚ್ ರಾಹುಲ್ ದ್ರಾವಿಡ್ ಆಟಗಾರರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಬೇಕಿದೆ. ಆಯ್ಕೆದಾರರ ಮುಂದೆ ಆಯ್ಕೆಯ ಆಧಾರವು ಈಗ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸ್ಪರ್ಧಿಸುವ ಆಟಗಾರರ ಪ್ರದರ್ಶನದ ಮೇಲೆ ನಿಂತಿದೆ.

ದಕ್ಷಿಣ ಆಫ್ರಿಕಾದ ಬಳಿಕ ಭಾರತ ಅಫ್ಘಾನಿಸ್ತಾನ ವಿರುದ್ಧ 3 ಟಿ20 ಪಂದ್ಯಗಳನ್ನು ಆಡಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳು ಬಾಕಿಯಿದ್ದು, ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಭಾರತ ತಂಡದ ಆಯ್ಕೆಗೆ ಐಪಿಎಲ್ ಪ್ರಮುಖ ವೇದಿಕೆ ಆಗಲಿದೆ. ಈ ಬಾರಿಯ ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಯುವ ಆಟಗಾರರಿಗೆ ಚಾನ್ಸ್ ಫಿಕ್ಸ್ ಎಂಬಂತೆ ಕಾಣುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಗಾರರು 17 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದು, ಈಗ ಉಳಿದ ಎರಡು ಪಂದ್ಯಗಳಲ್ಲಿ ಎಲ್ಲಾ 17 ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ.
2024ರ ಜೂನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಆರು ತಿಂಗಳು ಬಾಕಿ ಇದೆ. ಇದರಲ್ಲಿ ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಸ್ಥಾನ ನಿಗದಿಯಾಗಿದೆ ಎಂದು ಕಂಡು ಬರುತ್ತಿದೆ. ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ರನ್ ಗಳಿಸಿದ್ದು, ಆಯ್ಕೆದಾರರು ಅವರ ಮೇಲೆ ಕಣ್ಣಿಟ್ಟಿದ್ದಾರೆ, ಆದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರನ್ನು ವಿಶ್ವಕಪ್ ತಂಡಕ್ಕೆ ಸೇರಿಸಿದರೆ, ಇಬ್ಬರ ಹಾದಿ ಕಷ್ಟಕರವಾಗಬಹುದು. ರಿಂಕು ಅವರಂತೆಯೇ ಜಿತೇಶ್ ವರ್ಮಾ ಕೂಡ ಸಾಕಷ್ಟು ಪ್ರಭಾವ ಬೀರಿದ್ದು, ಕೋಚ್ ದ್ರಾವಿಡ್ ಅವರ ಮೇಲೆ ಕಣ್ಣಿಟ್ಟಿದ್ದಾರೆ.
ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಆಗಿದ್ದು, ಅವರ ಜೊತೆಗೆ ಆಯ್ಕೆದಾರರು ಟಿ20 ವಿಶ್ವಕಪ್ನಲ್ಲಿ ಅರ್ಷದೀಪ್ ಸಿಂಗ್ಗೆ ಅವಕಾಶ ನೀಡಬಹುದು. ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ನಲ್ಲಿ ಅರ್ಷದೀಪ್ ಪದಾರ್ಪಣೆ ಮಾಡಿದ್ದರು. ದೀಪಕ್ ಚಾಹರ್ ಗಾಯದ ಸಮಸ್ಯೆಯಿಂದ ದೀರ್ಘಕಾಲದವರೆಗೆ ಹೊರಗುಳಿದಿದ್ದಾರೆ. ಮತ್ತು ಈಗ ಅವರು ವೈಯಕ್ತಿಕ ಕಾರಣಗಳಿಂದ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಬೆಳೆಸಿಲ್ಲ. ವಿಶ್ವಕಪ್ ನಂತರ ರವೀಂದ್ರ ಜಡೇಜಾ ವಿರಾಮದಲ್ಲಿದ್ದು, ಕುಲ್ದೀಪ್ ಯಾದವ್ ಮತ್ತು ರವಿ ಬಿಷ್ಣೋಯ್ ಸ್ಪಿನ್ ನಿಭಾಯಿಸಲಿದ್ದಾರೆ.