2023ರ ಐಸಿಸಿ ಏಕದಿನ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು 6 ವಿಕೆಟ್ಗಳಿಂದ ಸೋಲಿಸಿದ ಆಸ್ಟ್ರೇಲಿಯನ್ ಕ್ರಿಕೆಟ್ ತಂಡವು ತಮ್ಮ ದಾಖಲೆಯ ಆರನೇ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಈ ವಿಶ್ವಕಪ್ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮತ್ತೊಮ್ಮೆ ವಿಶ್ವ ಕ್ರಿಕೆಟ್ನಲ್ಲಿ ತಮ್ಮ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. ಎಂಟು ವರ್ಷಗಳ ಹಿಂದೆ ತವರಿನಲ್ಲಿ ನಡೆದಿದ್ದ ವಿಶ್ವಕಪ್ ಟ್ರೋಫಿ ಗೆದ್ದಿದ್ದ ಕಾಂಗರೂ ಪಡೆ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕೇವಲ ಟ್ರೋಫಿಯೊಂದಿಗೆ ಮರಳದ ಆಸ್ಟ್ರೇಲಿಯಾ ತಂಡ ಭಾರಿ ಮೊತ್ತದ ನಗದು ಬಹುಮಾನವನ್ನು ಪಡೆದಿದ್ದರೆ, ರನ್ನರ್-ಅಪ್ ಟೀಮ್ ಇಂಡಿಯಾ, ಆಸ್ಟ್ರೇಲಿಯನ್ನರು ಪಡೆದ ಅರ್ಧದಷ್ಟು ಹಣವನ್ನು ಪಡೆದಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಂದ್ಯಾವಳಿಗಾಗಿ ಒಟ್ಟು 10 ಮಿಲಿಯನ್ ಯುಎಸ್ ಡಾಲರ್ ಮೊತ್ತವನ್ನು ಘೋಷಿಸಿತ್ತು. ಇದು ಭಾರತೀಯ ರೂಪಾಯಿ ಲೆಕ್ಕದಲ್ಲಿ ಸರಿಸುಮಾರು 83 ಕೋಟಿ ರೂಪಾಯಿಗಳಾಗಿವೆ.
ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡ 4 ಮಿಲಿಯನ್ ಡಾಲರ್ (33 ಕೋಟಿ ರೂಪಾಯಿ) ಮತ್ತು ರನ್ನರ್-ಅಪ್ ಭಾರತ ತಂಡ 2 ಮಿಲಿಯನ್ ಡಾಲರ್ (16.5 ಕೋಟಿ ರೂಪಾಯಿ) ಪಡೆಯುತ್ತದೆ.

ಸೆಮಿಫೈನಲಿಸ್ಟ್ಗಳಾದ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಲಾ 800,000 ಡಾಲರ್ನೊಂದಿಗೆ ಸ್ವದೇಶಕ್ಕೆ ಮರಳಿವೆ. ಅಂದರೆ, ಅದು ಸುಮಾರು ತಲಾ 6.6 ಕೋಟಿ ರೂಪಾಯಿಗಳಾಗುತ್ತದೆ.
ಉಳಿದ ಆರು ತಂಡಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ, ನೆದರ್ಲ್ಯಾಂಡ್ಸ್ ಮತ್ತು ಇಂಗ್ಲೆಂಡ್ ಗುಂಪು ಹಂತದಲ್ಲಿ ಹೊರಹಾಕಲ್ಪಟ್ಟವು. ಈ ತಂಡಗಳು ತಲಾ 100,000 ಡಾಲರ್ (83 ಲಕ್ಷ ರೂಪಾಯಿಗಿಂತ ಹೆಚ್ಚು) ಪಡೆದಿವೆ. ಗುಂಪು ಹಂತದಲ್ಲಿ ಪ್ರತಿ ಪಂದ್ಯ ವಿಜೇತ ತಂಡಗಳಿಗೆ 40,000 ಡಾಲರ್ ಬಹುಮಾನದ ಹಣವನ್ನು ಗೆದ್ದಿವೆ.
ಏಕದಿನ ವಿಶ್ವಕಪ್ನಲ್ಲಿ 83 ಕೋಟಿ ರೂಪಾಯಿ ಬಹುಮಾನದ ಮೊತ್ತವು ಫಿಫಾ ವಿಶ್ವಕಪ್ ಮೊತ್ತಕ್ಕೆ ಯಾವುದಕ್ಕೂ ಸರಿಸಮಾನವಾಗಿಲ್ಲ. 2022ರಲ್ಲಿ ಕತಾರ್ನಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್ನಲ್ಲಿ 32 ದೇಶಗಳು ಭಾಗವಹಿಸಿದ್ದವು. ಇಲ್ಲಿನ ಒಟ್ಟು ಬಹುಮಾನದ ಮೊತ್ತವು 440 ಮಿಲಿಯನ್ ಡಾಲರ್ ಆಗಿತ್ತು. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಇದು 3660 ಕೋಟಿ ರೂ.ಗಳಾಗಿವೆ.

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ವಿಶ್ವಕಪ್ ಟ್ರೋಫಿಯನ್ನು ಕಳೆದುಕೊಂಡಿದ್ದಕ್ಕಾಗಿ ಭಾರೀ ದುಃಖತಪ್ತವಾಗಿದೆ. ಭಾರತವು ವಿಶ್ವಕಪ್ ಇತಿಹಾಸದಲ್ಲಿ ಕ್ರಮವಾಗಿ 1983 ಮತ್ತು 2011ರಲ್ಲಿ ಎರಡು ಬಾರಿ ಎತ್ತಿ ಹಿಡಿದಿದೆ. ಮತ್ತೆ ಬೆಳ್ಳಿಯ ಟ್ರೋಫಿಗಾಗಿ ಟೀಮ್ ಇಂಡಿಯಾ ಇನ್ನೂ 4 ವರ್ಷ ಕಾಯಬೇಕಿದೆ.
2027ರಲ್ಲಿ ದಕ್ಷಿಣ ಆಫ್ರಿಕಾ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸುವಾಗ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಪ್ರಮುಖ ಆಟಗಾರರು ನಿವೃತ್ತಿಯಾಗಬಹುದು.
ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥ್ಯ ವಹಿಸುತ್ತಿರುವ 2024ರ ಟಿ20 ವಿಶ್ವಕಪ್ ಗೆಲ್ಲುವುದು ಭಾರತ ತಂಡದ ಮುಂದಿನ ಗುರಿಯಾಗಿದೆ. 2013ರಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಿರುವ ಭಾರತ ತಂಡ ಮುಂದಿನ ವರ್ಷ ಅದನ್ನು ನೀಗಿಸಿಕೊಳ್ಳಬಹುದಾಗಿದೆ.