ಅಡಿಲೇಡ್ ಸೋಲಿನ ನಂತರ ಗೆಲುವಿನ ಹಾದಿ ಹಿಡಿದ ರೋಚಕ ಸಂಗತಿ ವಿವರಿಸಿದ ಹನುಮ ವಿಹಾರಿ

ಅಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಭಾರತ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ತನ್ನದಾಗಿಸಿಕೊಂಡಿದೆ. ಈ ಮೂಲಕ ತವರಿನಲ್ಲಿ ಸತತ ಎರಡು ಬಾರಿ ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡು ಮುಖಭಂಗ ಅನುಭವಿಸಿದೆ. ಆದರೆ ಈ ಸರಣಿಯಲ್ಲಿ ಭಾರತ ಹಾದಿ ಆಸ್ಟ್ರೇಲಿಯಾ ತಂಡಕ್ಕಿಂತ ಬಹಳ ಕಠಿಣವಾಗಿತ್ತು ಎಂಬುದು ಗಮನಾರ್ಹ.
ಗಾಯದ ಸಮಸ್ಯೆಯ ಮಧ್ಯೆಯೂ 2018-19ರ ಸರಣಿ ಗೆಲುವಿನ ಉತ್ಸಾಹದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನಾಡಲು ಅಡಿಲೇಡ್ಗೆ ಬಂದಿಳಿದಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಅಲ್ಪ ಮುನ್ನಡೆಯ ಹೊರತಾಗಿಯೂ ಎರಡನೇ ಇನ್ನಿಂಗ್ಸ್ನಲ್ಲಿ 36 ರನ್ಗಳ ಕನಿಷ್ಟ ಮೊತ್ತಕ್ಕೆ ಆಲೌಟ್ ಆಗಿ ಕೆಟ್ಟದಾಗಿ ಸೋಲು ಕಂಡಿತ್ತು ಭಾರತ. ಇದು ಟೀಮ್ ಇಂಡಿಯಾವನ್ನು ನಿಜಕ್ಕೂ ಕಂಗೆಡಿಸಿತ್ತು. ಆದರೆ ನಂತರ ಭಾರತ ಆಸ್ಟ್ರೇಲಿಯಾ ವಿರುದ್ಧ ತಿರುಗಿ ಬಿದ್ದ ರೀತಿ ಈಗ ಇತಿಹಾಸ. ಮುಂದಿನ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಡ್ರಾ ಸೇರಿ 2-1 ಅಂತರದಂದ ಸರಣಿಯನ್ನು ಗೆದ್ದು ಬೀಗಿದೆ ಭಾರತ
ಆದರೆ ಅಡಿಲೇಡ್ ಟೆಸ್ಟ್ ಸೊಲಿನ ಬಳಿಕ ಭಾರತ ಯಾವ ರೀತಿಯ ಮನಸ್ಥಿತಿಯನ್ನು ಹೊಂದಿತ್ತು? ಆಘಾತಕಾರಿ ಸೋಲಿನಿಂದ ಹೊರಬಂದು ಗೆಲುವಿನ ಹಾದಿ ಹಿಡಿದಿದ್ದು ಹೇಗೆ ಎಂಬುದನ್ನು ಹನುಮ ವಿಹಾರಿ ವಿವರಿಸಿದ್ದಾರೆ. ಮುಂದೆ ಓದಿ

ತಂಡದ ಡ್ರೆಸ್ಸಿಂಗ್ ರೂಮ್ ಸಕಾರಾತ್ಮಕವಾಗಿತ್ತು
ಕೋಚ್ ಸೇರಿದಂತೆ ತಂಡದ ಹಿರಿಯ ಆಟಗಾರರು ಯಾವಾಗಲೂ ಸ್ಪೂರ್ತಿಯುತವಾಗಿರುವಂತೆ ನೋಡಿಕೊಂಡರು. ಅಡಿಲೇಡ್ನಲ್ಲಿ 36 ರನ್ಗಳಿಗೆ ಆಲೌಟ್ ಆದ ನಂತರವೂ ನಮ್ಮಲ್ಲಿ ನಿರಾಶಾದಾಯಕತೆ ಮೂಡದಂತೆ ಮಾಡಿದರು ಎಂದು ಭಾರತೀಯ ಟೆಸ್ಟ್ ತಂಡದ ಪ್ರಮುಖ ಆಟಗಾರ ಹನುಮ ವಿಹಾರಿ ಹೇಳಿಕೆಯನ್ನು ನೀಡಿದ್ದಾರೆ.

ತಂಡ ಒಗ್ಗಟ್ಟಾಗಿಯೇ ಇತ್ತು
"ಅಡಿಲೇಡ್ನಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ಬಳಿಕ ನಿರಾಶೆಯಿಂದ ಹಿಂದಿರುವುದು, ಮೀಟಿಂಗ್ ನಡೆಸುವುದು, ಭಾವನೆಗಳನ್ನು ವ್ಯಕ್ತಪಡಿಸುವುದು, ಯಾರನ್ನಾದರೂ ಅಥವಾ ಯಾವುದನ್ನಾದರೂ ಹೊಣೆಯನ್ನಾಗಿ ಮಾಡುವುದು ಸುಲಭ. ಆದರೆ ಇದು ತಂಡದ ಹೊರಗಡೆ ಮಾತ್ರ ನಡೆಯುತ್ತದೆ. ಆದರೆ ತಂಡದ ಒಳಗೆ ನಾವು ಒಗ್ಗಟ್ಟಾಗ್ಗಿದ್ದೆವು. ಯಾವುದೇ ಹಂತದಲ್ಲೂ ನಾವು ಅದರ ಬಗ್ಗೆ ಮಾತೆತ್ತಲಿಲ್ಲ. ನಾವು ಅದು ನಮ್ಮಿಂದ ಹಿಂದಕ್ಕೆ ಉಳಿದಿದೆ ಎಂದುಕೊಂಡಿದ್ದೆವು. ಅದೊಂದು ವಿಚಿತ್ರವಾದ ಇನ್ನಿಂಗ್ಸ್. ನಾವು ಆಡಿದ ಎಲ್ಲವೂ ಎಡ್ಜ್ ಆಗಿತ್ತು, ನೇರವಾಗಿ ಕೈಗೆ ಸೇರಿತ್ತು. ಅದು ಮುಂದೆ ಎಂದೂ ನಡೆಯುವುದಿಲ್ಲ ಎಂದು ಹೇಳಿದೆವು" ಎಂದು ಹನುಮ ವಿಹಾರಿ ಹೇಳಿದರು.

3 ಪಂದ್ಯಗಳ ಸರಣಿ ಎಂದುಕೊಂಡೆವು
"ನಾವು ತಡದ ಮೀಟಿಂಗ್ನಲ್ಲಿ ಚರ್ಚೆಯೊಂದನ್ನು ಮಾಡಿದ್ದೆವು. ಅಲ್ಲಿನ ಬಳಿಕ ನಾವು ಈ ಸರಣಿ ಮೂರು ಪಂದ್ಯಗಳ ಸರಣಿಯಾಗಿದೆ ಎಂದು ನಿರ್ಧಾರ ಮಾಡಿದೆವು. ಮೊದಲ ಟೆಸ್ಟ್ಅನ್ನು ಮರೆತು ಬಿಡೋಣ, ನಮಗೆ ಇದು ಮೂರು ಪಂದ್ಯಗಳ ಟೆಸ್ಟ್ ಸರಣಿ, ಸರಣಿಯನ್ನು ಗೆಲ್ಲೋಣ ಎಂದು ನಿರ್ಧರಿಸಿದೆವು" ಎಂದರು.

2-0ಯಿಂದ ನಾವು ಸರಣಿ ಗೆದ್ದಿದ್ದೇವೆ
"ಈಗ ನೀವು ನೋಡಿದರೆ ನಾವು ಸರಣಿಯನ್ನು 2-0ಯಿಂದ ಗೆದ್ದಿದ್ದೇವೆ. ಅದು ನಮ್ಮ ಡ್ರೆಸ್ಸಿಂಗ್ ರೂಮ್ನಲ್ಲಿದ್ದ ಸಕಾರಾತ್ಮಕ ಭಾವನೆಯಾಗಿತ್ತು. ನಾವು ಅದನ್ನು ನಿಜಕ್ಕೂ ನಂಬಿಕೊಂಡಿದ್ದೆವು. ಬ್ಯಾಟಿಂಗ್ ಬಳಗದಲ್ಲಿ ನಾವು ನಮ್ಮ ಸಾಮರ್ಥ್ಯವನ್ನು ಅನುಮಾನಿಸಲಿಲ್ಲ. ಮೆಲ್ಬೋರ್ನ್, ಸಿಡ್ನಿ ಮತ್ತು ಗಬ್ಬಾದಲ್ಲಿ ನಾವು ತೋರಿಸಿದ ಹೋರಾಟವು ನಮ್ಮ ನಂಬಿಕೆಯ ನಿಜವಾದ ಸಾಕ್ಷಿಯಾಗಿದೆ" ಎಂದಿದ್ದಾರೆ ಹನುಮ ವಿಹಾರಿ

ರವಿ ಶಾಸ್ತ್ರಿ ನಮ್ಮಲ್ಲಿ ಆತ್ಮವಿಶ್ವಾಸ ತುಂಬಿದ್ದರು
ತಂಡ ಕಮ್ಬ್ಯಾಕ್ ಮಾಡಲು ಸಾಧ್ಯವಾಗಲಿದೆ ಎಂದು ಆಟಗಾರರಲ್ಲಿ ಆತ್ಮಸ್ಥೈರ್ಯವನ್ನು ತುಂಬಿದ್ದು ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ಅಜಿಂಕ್ಯ ರಹಾನೆ ಎಂದು ಹನುಮ ವಿಹಾರಿ ವಿವರಿಸಿದರು. "ಮೊದಲ ಟೆಸ್ಟ್ ನ ನಂತರ ರವಿ ಶಾಸ್ತ್ರಿ ಅದ್ಭುತವಾಗಿ ನಿಭಾಯಿಸಿದರು. ನಾವು ಮೂರೇ ದಿನದಲ್ಲಿ ಸೋಲು ಕಂಡಿದ್ದೇವೆ ಎಂಬ ಭಾವನೆ ನಮಗೆ ಬಂದಿರಲಿಲ್ಲ. ನೀವು ಮೊದಲ ಟೆಸ್ಟ್ಅನ್ನು ಗಮನಿಸಿದರೆ ನಾವು ಮೊದಲ ಎರಡು ದಿನಗಳಲ್ಲಿ ಮೇಲುಗೈ ಸಾಧಿಸಿದ್ದೆವು. ಆದರೆ ಒಂದು ಸೆಶನ್ ನಮ್ಮನ್ನು ಪಂದ್ಯದಿಂದ ದೂರತಳ್ಳಿಬಿಟ್ಟಿತ್ತು. ಆದರೆ ಅವರು(ರವಿ ಶಾಸ್ತ್ರಿ) ನಾವು ಕೆಟ್ಟದಾಗಿ ಸೋಲು ಕಂಡಿದ್ದೇವೆ ಎಂಬ ಭಾವನೆ ಭಾರದಂತೆ ಮಾಡಿದರು" ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications